ಬೆಂಗಳೂರು
ವಿದ್ಯುತ್ ಸಮಸ್ಯೆಯಿಂದ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಮೆಟ್ರೋ ರೈಲು ನಿಂತಲ್ಲೇ ನಿಂತುಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮೆಜೆಸ್ಟಿಕ್ನಿಂದ ಕುವೆಂಪು ಮೆಟ್ರೋ ನಿಲ್ದಾಣವರೆಗೆ ಸಂಜೆ 4.11ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆ ಹಸಿರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ಬಿಎಂಆರ್ಸಿಎಲ್ ಸಿಬ್ಬಂದಿ ಸಮಸ್ಯೆ ಸರಿಪಡಿಸುತ್ತಿದ್ದಾರೆ.
ಬೇರೆ ನಿಲ್ದಾಣದಲ್ಲಿ ಸಮಸ್ಯೆ ಹಿನ್ನೆಲೆ ಇತರೆ ನಿಲ್ದಾಣಗಳಲ್ಲೇ ರೈಲುಗಳು ನಿಂತುಕೊಂಡಿವೆ. ಸರಿಯಾಗಿ 4.10ಕ್ಕೆ ಸಂಚಾರ ವೇಳೆ ಶ್ರೀರಾಮಪುರ ನಿಲ್ದಾಣದಲ್ಲಿ ರೈಲು ನಿಂತುಕೊಂಡಿದೆ.
ಇನ್ನು ಇತ್ತೀಚೆಗೆ ಕೂಡ ಹಸಿರು ಮಾರ್ಗದ ಸಂಚಾರ ವ್ಯತ್ಯಯ ಉಂಟಾಗಿತ್ತು. ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆ ಪೀಣ್ಯ-ನಾಗಸಂದ್ರ ನಡುವೆ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. 3 ದಿನ ರಾತ್ರಿ 11ರ ಬದಲು ರಾತ್ರಿ 10ಕ್ಕೆ ಕೊನೆ ರೈಲು ಹೊರಡುತ್ತಿದ್ದು, ಬೆಳಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಿತ್ತು. ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ಬದಲಾವಣೆ ಇರಲಿಲ್ಲ.
ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಹಸಿರು ಮಾರ್ಗದ 4 ಸ್ಟೇಷನ್ಗಳಲ್ಲಿ ಇತ್ತೀಚೆಗೆ ಮೆಟ್ರೋ ರೈಲು ಸಂಚಾರ ಬಂದ್ ಆಗಿತ್ತು. ನಾಗಸಂದ್ರ ಟು ಮಾದಾವರವರೆಗೆ ಮೆಟ್ರೋ ವಿಸ್ತರಣೆ ಮಾಡಿದ್ದು, ಆ ಮಾರ್ಗದಲ್ಲಿ ಸಿಗ್ನಲ್ ಟೆಸ್ಟಿಂಗ್ ನಡೆದಿತ್ತು. ಹೀಗಾಗಿ ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮೆಟ್ರೋ ಸ್ಟೇಷನ್ವರೆಗೆ ದಿನಪೂರ್ತಿ ಮೆಟ್ರೋ ಸಂಚಾರ ಇರಲಿಲ್ಲ. ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗಬೇಕಾದ ಪ್ರಯಾಣಿಕರು ಪರದಾಡಿದ್ದರು.
ಮೆಟ್ರೋ ರೈಲು ಇಲ್ಲದ್ರಿಂದ ಪ್ರಯಾಣಿಕರು ಓಲಾ, ಉಬರ್ ಮೊರೆ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ, ಕ್ಯಾಬ್ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿದ್ದರು. ನಾಗಸಂದ್ರ ದಿಂದ ಪೀಣ್ಯ ಇಂಡಸ್ಟ್ರಿಗೆ ಸಾಮಾನ್ಯ ದಿನ ಆಟೋದಲ್ಲಿ 50 ರೂ ಇದೆ. ಆದರೆ, ಅಂದು ಮಾತ್ರ 150 ರಿಂದ ₹200 ರೂ ವಸೂಲಿ ಮಾಡಿದ್ದರು.








