ಮೈಸೂರು:
ಮುಡಾ ಹಗರಣ ಕೇಸಿನಲ್ಲಿ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸೈಟ್ ವಿಚಾರವಾಗಿ ನನ್ನ ತಂದೆ ಯಾವುದೇ ಪತ್ರ ಬರೆದಿಲ್ಲ, ನನ್ನ ತಾಯಿ ಪತ್ರ ಬರೆದಿದ್ದಾರೆ. ನನ್ನ ಜಮೀನು ಬದಲಿ ಸೈಟ್ ನೀಡಿ ಎಂದು ಬರೆದಿದ್ದಾರೆ. ಸೈಟ್ ಪಡೆಯುವಲ್ಲಿ ಯಾವುದೇ ಪ್ರಭಾವ ಬಳಸಿಲ್ಲ. ಎಲ್ಲರಿಗೂ ಸೈಟ್ ಕೊಟ್ಟಂತೆ ನಮಗೂ ಕೊಟ್ಟಿದ್ದಾರೆ. ನಮ್ಮ ಜಮೀನು ಬಳಸಿಕೊಂಡು ಸೈಟ್ ಕೊಟ್ಟಿದ್ದಾರೆ. ಇದನ್ನೇ ದೊಡ್ಡ ಹಗರಣ ಅಂತ ವಿರೋಧ ಪಕ್ಷದವರು ಬಿಂಬಿಸಿದರು. ಬೇಕು ಬೇಕಂತಲೇ ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದರು. ಈಗ ಕ್ಲೀನ್ ಚಿಟ್ ಸಿಕ್ಕಿ ಜಯ ಸಿಕ್ಕಿದೆ ಎಂದರು.
ಮುಡಾ ಹಗರಣದಲ್ಲಿ ನನ್ನ ಹೆಸರನ್ನು ಕೂಡ ತಳುಕು ಹಾಕಲು ಯತ್ನ ನಡೀತು, ನಾನು ಮುಡಾ ಸದಸ್ಯ ಆಗಿದ್ದೆ. ಎಲ್ಲಿಯೂ ಕೂಡ ನಾನು ಏನು ಹೇಳಿಲ್ಲ. ಆರ್ ಟಿಐ ಕಾರ್ಯಕರ್ತರನ್ನ ಇಟ್ಕೊಂಡು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರು. ಆದರೆ ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ. ದೂರುದಾರ ಸ್ನೇಹಮಯಿ ಕೃಷ್ಣ ಸುಪ್ರೀಂಕೋರ್ಟಿಗೆ ಹೋಗಲಿ , ನಾವು ಯಾವುದೇ ತಪ್ಪು ಮಾಡಿಲ್ಲ ಸುಪ್ರೀಂ ಕೋರ್ಟ್ ನಲ್ಲೂ ಕೂಡ ನಮ್ಮ ಪರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು. ಯಾರೋ ಕಿಡಿಗೇಡಿ ವಿವಾದಿತ ಪೋಸ್ಟ್ ಹಾಕಿದ್ದ. ಅದಕ್ಕೆ ಕೆಲವರು ಕಾನೂನು ಕೈಗೆತ್ತಿಕೊಂಡರು, ಸರ್ಕಾರ ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿದೆ. ಇದನ್ನು ರಾಜಕೀಯ ಮಾಡಲು ಬಿಜೆಪಿ ಹೊರಟಿತ್ತು. ನಿನ್ನೆ ಹೋರಾಟದಲ್ಲಿ ಜನ ಇರಲಿಲ್ಲ, ಸತ್ಯ ಏನು ಅಂತ ಜನಕ್ಕೆ ಗೊತ್ತು. ಅದಕ್ಕಾಗಿ ಪ್ರತಿಭಟನೆಯಲ್ಲಿ ಜನ ಇರಲಿಲ್ಲ. ನಿನ್ನೆಯ ಬಿಜೆಪಿ ಪ್ರತಿಭಟನೆ ಯಶಸ್ವಿ ಆಗಿಲ್ಲ ಎಂದರು.
ಸಿಎಂ ಬದಲಾವಣೆ ಆಗುತ್ತೆ ಆಗತ್ತೆ ಅಂತ ಹೇಳುತ್ತಾನೆ ಇದ್ದಾರೆ, ಬಿಜೆಪಿಯಲ್ಲಿ ಕಚ್ಚಾಟ ಹೆಚ್ಚಾಗಿದೆ, ಬಿಜೆಪಿ ಪಕ್ಷ ಹರಿದು ಊರು ಬಾಗಿಲು ಆಗಿದೆ. ನಮ್ಮ ಹೈ ಕಮಾಂಡ್ ಸ್ಪಷ್ಟವಾಗಿ ಹೇಳಿದೆ ಸಿಎಂ ಬದಲಾವಣೆ ಆಗಲ್ಲ ಅಂತ. ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ನಿಂತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ ಎಂದರು.
ತಂದೆಯವರು ಮಂಡಿ ನೋವಿನ ಬಾಧೆಯಿಂದ ಗುಣಮುಖ ಹೊಂದುತ್ತಿದ್ದಾರೆ. ಇನ್ನೊಂದು ವಾರ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ವಿಶ್ರಾಂತಿ ನಡುವೆಯೂ ತಂದೆಯವರು ಹಗಲು ಪೂರ್ತಿ ರಾತ್ರಿ 10 ಗಂಟೆಯವರೆಗೂ ಕೆಲಸ ಮಾಡುತ್ತಿದ್ದಾರೆ. ಬಜೆಟ್ ತಯಾರಿಗೆ ಸಂಬಂಧಪಟ್ಟಂತೆ ಸಿದ್ಧತೆಗಳು, ಸಭೆಗಳು ನಡೆಯುತ್ತವೇ ಇವೆ ಎಂದರು.
