ಉಡುಪಿ:
ಬಿ.ಎಲ್.ಸಂತೋಷ್ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಬಂಧನವಾಗಿರುವ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಿಂದ ಅವರನ್ನು ಬಂಧಿಸಲಾಗಿತ್ತು. ಇವರ ಜಾಮೀನು ಅರ್ಜಿ ವಿಚಾರಣೆ ನಾಳೆ(ಆ.23) ಕೋರ್ಟ್ನಲ್ಲಿ ನಡೆಯಲಿದೆ.
ಬ್ರಹ್ಮಾವರದಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಎನ್.ಎ. ಅವರು ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದರು. ತಿಮರೋಡಿಯನ್ನು ಬಂಧಿಸಿದ ತಕ್ಷಣವೇ ಅವರ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಪ್ರಸ್ತುತ ಆರೋಪಗಳು ನಾನ್-ಬೇಲೇಬಲ್ ಸೆಕ್ಷನ್ ಒಳಗೊಂಡಿರುವುದರಿಂದ, ಕೋರ್ಟ್ ಜಾಮೀನನ್ನು ನೀಡಲು ನಿರಾಕರಿಸಿತ್ತು. ಹೀಗಾಗಿ ಆಗಸ್ಟ್ 23ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಅಂದು ವಾದ ಪ್ರತಿವಾದಗಳ ಆಧಾರದ ಮೇಲೆ ಜಾಮೀನು ಭವಿಷ್ಯ ನಿರ್ಣಯವಾಗಲಿದೆ.
