ಅನ್ವರ್ ಮಾಣಿಪ್ಪಾಡಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆ

ಮಂಗಳೂರು

     ಕೇಂದ್ರ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬೆನ್ನಲ್ಲೇ, ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ  ಅವರಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆ  ಬಂದಿದೆ. ಈ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್  ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಇಂಟರ್ನೆಟ್ ಆಧಾರಿತ ಕರೆ ಮೂಲಕ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಅನ್ವರ್ ಮಾಣಿಪ್ಪಾಡಿ ಅವರು ಸದ್ಯ ಮಂಗಳೂರಿನಲ್ಲಿರುವ ನಿವಾಸದಲ್ಲಿ ವಾಸವಾಗಿದ್ದಾರೆ.

    ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯ ಮೇಲೆ ಲೋಕಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ವಿಚಾರ ಕೂಡ ಪ್ರಸ್ತಾಪ ಮಾಡಿದ್ದರು. ಅನ್ವರ್ ಮಾಣಿಪ್ಪಾಡಿ ವರದಿ ಉಲ್ಲೇಖಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಗೆಲುವಿನ ದಿನ ಅವರ ಬೆಂಬಲಿಗರು ಪಾಕಿಸ್ತಾನ ಪರ ಜೈಕಾರ ಹಾಕಿದ್ದರು ಎಂದು ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಅವರಿಗೆ ಟಾಂಗ್ ನೀಡಿದ್ದರು. ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಬೆದರಿಕೆ ಕರೆ ಬಂದಿರುವುದು ಗಮನಾರ್ಹ. 

   ಬೆದ‘ಇಂಟರ್ನೆಟ್ ಕರೆ ಮೂಲಕ ನನಗೆ ನಿರಂತರ ಬೆದರಿಕೆ ಬರುತ್ತಾ ಇದೆ. ಹಿಂದಿ, ಮರಾಠಿ, ಇಂಗ್ಲೀಷ್ ಹಾಗೂ ಉತ್ತರ ಭಾರತದ ಭಾಷೆಗಳಲ್ಲಿ ಕರೆಗಳು ಬರುತ್ತಾ ಇವೆ. ಇಂಗ್ಲಿಷ್​ನಲ್ಲಿ ಕರೆ ಮಾಡಿದ ವ್ಯಕ್ತಿ ನೀವು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಿನ್ನ ಸಮುದಾಯ ನಿನ್ನನ್ನು ಬಿಡಲ್ಲ ಎಂದೆಲ್ಲಾ ಹೇಳಿದ್ದಾನೆ. ಆದರೆ ನನ್ನ ಸಮುದಾಯದ ಬಗ್ಗೆ ನನಗೆ ಖುಷಿ ಇದೆ. ಸದ್ಯ ನಾನು ಮಂಗಳೂರು ಕಮಿಷನರ್ ಅನುಪಮ್ ಅಗರವಾಲ್​ಗೆ ಮಾಹಿತಿ ಕೊಟ್ಟಿದ್ದೇನೆ. ನಾನು ಈ ಹಿಂದೆಯೂ ಭದ್ರತೆ ಕೊಟ್ಟಾಗ ವಾಪಾಸ್ ಕಳುಹಿಸಿದ್ದೆ. ಈಗ ತಿದ್ದುಪಡಿ ಮಸೂದೆ ಜಾರಿ ಬಳಿಕ ಮತ್ತೆ ಒಂದಷ್ಟು ಕರೆಗಳು ಬರುತ್ತಿವೆ, ಅದು ಸಾಮಾನ್ಯ’ ಎಂದಿದ್ದಾರೆ.

   ವಕ್ಫ್ ತಿದ್ದುಪಡಿ ಕಾಯ್ದೆಗೆ ಅನುಮೋದನೆ ದೊರೆತಿರುವುದು ಖುಷಿಕೊಟ್ಟಿದೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ. ಈ ಮಸೂದೆ ಜಾರಿಯ ಹಿಂದೆ ನನ್ನ ವರದಿಯ ನೆರಳಿದೆ. ದೆಹಲಿಗೆ ತೆರಳಿ ಜೆಪಿಸಿ ಸಭೆಯಲ್ಲೂ ನಾನು ಭಾಗಿಯಾಗಿದ್ದೆ. ನನ್ನ ವರದಿಯ ಆಧಾರದಲ್ಲೇ ಕೇಂದ್ರದ ಈ ತಿದ್ದುಪಡಿ ಮಸೂದೆ ಜಾರಿ ಆಗಿದೆ ಎಂದು ಅವರು ಹೇಳಿದ್ದಾರೆ.

  ತಿದ್ದುಪಡಿ ಮಸೂದೆಯಿಂದ ಕೆಲವು ಐಎಎಸ್‌ ಅಧಿಕಾರಿಗಳಿಗೆ ಸಂಕಷ್ಟ ಇದೆ. ಎಲ್ಲಾ ಪಕ್ಷದ ಹಲವು ರಾಜಕಾರಣಿಗಳಿಗೆ ಸಂಕಷ್ಟ ಇದೆ. ಕಾಂಗ್ರೆಸ್​ನ ಹಲವು ಮುಖಂಡರ ತಲೆಗಳು ಇದರಿಂದ ಉರುಳಲಿವೆ. ಮಸೂದೆ ಜಾರಿಯಾದ ಬಳಿಕ ಕ್ರಮಗಳು ಆಗುತ್ತವೆ. ಅತಿಕ್ರಮಣ ತೆರವು ಜಾರಿಯಾದಾಗ ಅನೇಕರಿಗೆ ಸಮಸ್ಯೆ ಆಗಲಿದೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.