ತಿಪಟೂರು :
ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷರ ಆದೇಶದಂತೆ ಸಭೆ ಕರೆದಿದ್ದು, ಸಭೆಗೆ ಉಪಾಧ್ಯಕ್ಷರು ಸೇರಿದಂತೆ 11 ಸದಸ್ಯರು ಇದ್ದರೂ ಸಹ ಸಭೆ ನಡೆಸದೇ ಅಪಮಾನ ಮಾಡಿದ್ದಾರೆಂದು ಸದಸ್ಯರು ಗ್ರಾಪಂ ಗೆ ಬೀಗಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.
ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯರಿದ್ದಾರೆ ಶುಕ್ರವಾರ ನಡೆದ ಸಭೆಗೆ 11 ಜನ ಸದಸ್ಯರು ಹಾಜರಾದರೂ ಸೂಕ್ತ ಕಾರಣ ನೀಡದೇ ಸಭೆಯನ್ನು ಮುಂದಕ್ಕೆ ಹಾಕಿದ್ದು ಸದಸ್ಯರಿಗೆ ಅಗೌರವ ತೋರಿದ್ದಾರೆಂದು ಸದಸ್ಯರುಗಳು ಪ್ರತಿಭಟಿಸಿದರು. ಸದಸ್ಯರು ಸಭೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರು ಸಭೆಯಿಂದ ಹೊರನಡೆಯುವುದಲ್ಲದೇ ಕೆಲವು ಸದಸ್ಯರುಗಳನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಇದು ಸಿ.ಸಿ.ಟಿವಿಯಲ್ಲೂ ದಾಖಲಾಗಿದೆ. ಸಭೆ ಕರೆದು ಅಜೆಂಡಾವನ್ನು ಏಕೆ ಚರ್ಚಿಸಲಿಲ್ಲ ಮತ್ತು ಸಭೆಯನ್ನು ಏಕೆ ನಡೆಸಲಿಲ್ಲ ಎಂದು ಪಿಡಿಓ ಅವರನ್ನು ಕೇಳಿದರೆ ಯಾವುದೇ ಉತ್ತರವನ್ನು ನೀಡಲಿಲ್ಲ ಎಂದು ಗ್ರಾ.ಪಂ ಸದಸ್ಯ ನಾಗತೀಹಳ್ಳಿ ಕೃಷ್ಣಮೂರ್ತಿ ಅವರು ಆರೋಪಿಸಿದ್ದು, ಈ ಬಗ್ಗೆ ನಾವು ತಾಪಂ ಇಓಗೆ ದೂರು ಸಲ್ಲಿಸಿದ್ದೇವೆ ಎಂದರು.
ಸ್ವಚ್ಛತೆ ಎಂಬುದು ಮಾಯವಾಗಿದೆ :
ಗ್ರಾಪಂ ಯು ಸಂಪೂರ್ಣವಾಗಿ ಅದ್ವಾನವಾಗಿದ್ದು, ಗ್ರಾಪಂ ಮುಂದಿನ ಚರಂಡಿಯನ್ನೇ ಸ್ವಚ್ಛಮಾಡಿಲ್ಲವೆಂದರೆ ಇನ್ನು ಉಳಿದ ಗ್ರಾಮಗಳ ಚರಂಡಿಗಳ ಪರಿಸ್ಥಿತಿ ದೇವರೇ ಗತಿ ಎಂಬಂತಿದೆ. ಮೊದಲೇ ಕೊರೊನಾ ಬಂದು ಜನರು ಸಾಯುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡದಿದ್ದರೆ ಹೇಗೆ, ಇಂತಹ ಸಂದರ್ಭದಲ್ಲಿ ಜನರ ಕೈಹಿಡಿಯ ಬೇಕಾದ ನರೇಗಾದ ಕೆಲಸಗಳು ನಡೆಯುತ್ತಿಲ್ಲ, ಆದರೂ ಬಿಲ್ ಮಾಡುತ್ತಿಲ್ಲ ಎಸ್ಸಿ-ಎಸ್ಟಿ ಅನುದಾನವನ್ನು ಎಲ್ಲಿ ಬೇಕೊ ಅಲ್ಲಿ ಬಳಸಿದ್ದಾರೆ. ಎನ್ಆರ್ಇಜಿಪಿ ಕಾಮಗಾರಿಯನ್ನು ಹಾಕಿಕೊಡುವಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯಗಳಿದ್ದರೂ ಸಭೆ ನಡೆಸಿದರೆ ಎಲ್ಲಿ ತಮ್ಮ ಬಂಡವಾಳ ಗೊತ್ತಾಗುತ್ತದೆ ಎಂದು ಸಭೆಯನ್ನು ನಡೆಸದೆ ಹೋಗಿರುವುದಾಗಿ ಸದಸ್ಯರುಗಳು ಆರೋಪಿಸಿದರು.
ಈ ಸಂದರ್ಭದಲ್ಲಿ ಗಾಮ ಪಂಚಾಯಿತಿ ಸದಸ್ಯರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಪ್ರಭುಸ್ವಾಮಿ, ರೇಣುಕಮ್ಮ, ಗಂಗಾಧರ್, ರಮೇಶ, ಕರಿಯಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿ ತಾಲ್ಲೂಕು ಪಂಚಾಯಿರಿಗೆ ದೂರು ಸಲ್ಲಿಸಿದರು.
ಮಳೆ ಬರುತ್ತಿರುವುದರಿಂದಾಗಿ ಗ್ರಾಪಂ ಅಧ್ಯಕ್ಷರು ತಿಪಟೂರಿನಿಂದ ಸಭೆಗೆ ಬಂದಿಲ್ಲ, ಹಾಗಾಗಿ ಇಂದಿನ ಸಭೆ ನಡೆಯಲಿಲ್ಲ.
-ಪಿಡಿಓ, ಗುಡಿಗೊಂಡನಹಳ್ಳಿ ಗ್ರಾ.ಪಂ
ನಾನು ತುಮಕೂರಿನಲ್ಲಿ ಇರುವುದರಿಂದ ನನಗೆ ವಿಷಯ ತಿಳಿದಿಲ್ಲ, ಈ ಬಗ್ಗೆ ವಿಚಾರಿಸುತ್ತೇನೆ.
-ಸುದರ್ಶನ್, ಇಓ, ತಿಪಟೂರು ತಾ.ಪಂ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
