ತುಮಕೂರು :
ಸಂಪನ್ಮೂಲ ಸಂಗ್ರಹಣೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ವಿಫಲವಾಗಿದ್ದು, ಮಳಿಗೆ ಬಾಡಿಗೆ, ನೀರಿನ ಕರ, ಜಾಹೀರಾತು ತೆರಿಗೆ, ವ್ಯಾಪಾರ ಪರವಾನಗಿಯಲ್ಲಿ ಶೇ.25ರಷ್ಟು ಪ್ರಗತಿ ಸಾಧ್ಯವಾಗದಿರುವುದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಸಿಬ್ಬಂದಿ ವೇತನ ಭತ್ಯೆ, ಅಭಿವೃದ್ಧಿ ಯೋಜನೆ ಎಲ್ಲದಕ್ಕೂ ಸರಕಾರದ ಅನುದಾನವನ್ನು ಆಶ್ರಯಿಸುವಂತಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎದುರಾದ ಆರ್ಥಿಕ ಸಂಕಷ್ಟ ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಸಂಗ್ರಹಣೆ ಮೇಲೆ ದೊಡ್ಡ ಹೊಡೆತ ನೀಡಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಆಡಳಿತ ನಡೆಸುವ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ತೆರಿಗೆ ವಸೂಲಾತಿಯಲ್ಲಿ ಅತೀ ಕಳಪೆ ಸಾಧನೆಗೆ ಕಾರಣವಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರತಿನಿಧಿಸುವ ಚಿ.ನಾ.ಹಳ್ಳಿ ಪುರಸಭೆ ಕಳೆದ ಐದು ತಿಂಗಳಲ್ಲಿ ಕೇವಲ 0.29 ಮಾತ್ರ ವಸೂಲಾತಿ ಮಾಡಿರುವುದು ಆಡಳಿತದ ಇಚ್ಛಾಶಕ್ತಿಗೆ ದ್ಯೋತಕವೆನಿಸಿದೆ.
ಮಳಿಗೆಗಳ ಬಾಡಿಗೆ ವಸೂಲಾತಿ 7.25 ಕೋಟಿ ಬಾಕಿ:
ತುಮಕೂರು ಮಹಾನಗರಪಾಲಿಕೆ ಹೊರತುಪಡಿಸಿ ಜಿಲ್ಲೆಯಲ್ಲಿ 2 ನಗರಸಭೆ, 4 ಪುರಸಭೆಗಳು, 4 ಪಟ್ಟಣ ಪಂಚಾಯಿತಿಗಳಿದ್ದು, ಅಂಗಡಿ-ಮಳಿಗೆಗಳ ಬಾಡಿಗೆ ವಸೂಲಾತಿ 2020-21ನೇ ಸಾಲಿನಲ್ಲಿ ಒಟ್ಟು ಬೇಡಿಕೆಯ 809.89 ಲಕ್ಷಗಳ ಗುರಿಯಲ್ಲಿ 84.88 ಲಕ್ಷ ಮಾತ್ರ ವಸೂಲಿ ಮಾಡಿದ್ದು, ಶೇ.10.48ರಷ್ಟು ಮಾತ್ರ ಸಾಧನೆಯಾಗಿದೆ. 7.25 ಕೋಟಿ ಬಾಡಿಗೆ ವಸೂಲಾತಿಯಾಗದೆ ಬಾಕಿ ಉಳಿದಿದೆ. ಅತೀ ಹೆಚ್ಚು ಅಂದರೆ ಪಾವಗಡ ಪುರಸಭೆ ಶೇ.25.18ರಷ್ಟು ತೆರಿಗೆ ವಸೂಲು ಮಾಡಿದ್ದರೆ, ತಿಪಟೂರು ನಗರಸಭೆ ಶೇ.24.94, ಸಿರಾ ನಗರಸಭೆಯಲ್ಲಿ ಕೇವಲ 8.32ರಷ್ಟು ಬಾಡಿಗೆ ವಸೂಲಾತಿಯಾಗಿದೆ. ಕುಣಿಗಲ್ ಪುರಸಭೆ ಶೇ.11.39, ಮಧುಗಿರಿ ಪುರಸಭೆ. ಶೇ.4.08, ಕೊರಟಗೆರೆ ಪಟ್ಟಣ ಪಂಚಾಯ್ತಿಯಲ್ಲಿ ಶೇ.5.83, ಗುಬ್ಬಿ ಪ.ಪಂ 13.58, ತುರುವೇಕೆರೆ ಪಟ್ಟಣ ಪಂಚಾಯಿತಿ ಶೇ.24.08ರಷ್ಟು ವಸೂಲಾತಿಯಾಗಿದ್ದು, ಹೊಸದಾಗಿ ರಚನೆಯಾದ ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಶೇ.13.78ರಷ್ಟು ಬಾಡಿಗೆ ವಸೂಲಾತಿಯಾಗಿದೆ.
ನೀರಿನ ತೆರಿಗೆ ವಸೂಲಾತಿಯಲ್ಲಿ 8.37 ಕೋಟಿ ಬಾಕಿ:
ನೀರಿನ ತೆರಿಗೆ ವಸೂಲಾತಿಯಲ್ಲೂ ಸಹ ನಗರಸ್ಥಳೀಯ ಸಂಸ್ಥೆಗಳ ಸಾಧನೆ ನಿರಾಶದಾಯಕವಾಗಿದ್ದು, ಹಿಂದಿನ ಸಾಲಿನ ಬಾಕಿಯೇ 536.39 ಲಕ್ಷ ಇದ್ದು, ಪ್ರಸಕ್ತ ಸಾಲಿನ ಬೇಡಿಕೆ 501.8 ಲಕ್ಷ ಸೇರಿ ಒಟ್ಟು 1038.19 ಲಕ್ಷ ಗಿರಿಯ ಪೈಕಿ 200.58 ಲಕ್ಷ ಮಾತ್ರ ಈವರೆಗೆ ವಸೂಲಾಗಿದ್ದು, 837.61 ಲಕ್ಷ ವಸೂಲಾತಿ ಮಾಡಬೇಕಿದೆ. ಹುಳಿಯಾರು ಪಟ್ಟಣ ಪಂಚಾಯಿತಿ, ಪಾವಗಡ ಪುರಸಭೆ ಕ್ರಮವಾಗಿ ಶೇ.7.50 ಹಾಗೂ ಶೇ.8.34ರಷ್ಟು ಪ್ರಗತಿ ದಾಖಲಿಸಿರುವುದು ಅಂಕಿ-ಅಂಶಗಳಲ್ಲಿ ಬೆಳಕಿಗೆ ಬಂದಿದೆ.
ವ್ಯಾಪಾರ ಪರವಾನಗಿ ನವೀಕೃತವಾಗುತ್ತಿಲ್ಲ :
ವ್ಯಾಪಾರ ಪರವಾನಗಿ, ನವೀಕರಣ ಶುಲ್ಕ ಸಂಗ್ರಹದಲ್ಲೂ ನಗರಸ್ಥಳೀಯ ಸಂಸ್ಥೆಗಳು ಹಿಂದುಳಿದಿದ್ದು. ಶೇ.13.65ರಷ್ಟು ಮಾತ್ರ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 2467 ವಾಣಿಜ್ಯ ಮಳಿಗೆಗಳಿರುವ ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ ನವೀಕೃತಮಾಡಿಸಿದವರು ಕೇವಲ 198 ಮಂದಿ ಮಾತ್ರ ಇದ್ದು, ಸಿರಾ ನಗರಸಭೆ ವ್ಯಾಪ್ತಿಯಲ್ಲೂ 1388 ಮಳಿಗೆಗಳ ಪೈಕಿ ಕೇವಲ 62 ಮಂದಿ ಮಾತ್ರ ವ್ಯಾಪಾರ ನವೀಕರಣ ಮಾಡಿದ್ದಾರೆ.
ಉಳಿಕೆ ಪುರಸಭೆ, ಪಟ್ಟಣ ಪಂಚಾಯಿತಿಗಳ ಸ್ಥಿತಿಯೂ ಇದೇ ಆಗಿದ್ದು, ತಮಗೆ ಬರಬೇಕಾದ ಸಂಪನ್ಮೂಲವನ್ನು ಸರಿಯಾಗಿ ಸಂಗ್ರಹಿಸದೆ, ವೆಚ್ಚಕ್ಕೆ ಮಾತ್ರ ಆದ್ಯತೆ ಕೊಟ್ಟಿರುವುದು ಸ್ವಾವಲಂಬಿ ಸ್ಥಳೀಯ ಸರಕಾರದ ಆಶಯಗಳನ್ನು ಮೂಲೆಗುಂಪು ಮಾಡಿದೆ.
ಪೌರಾಡಳಿತ ಸಚಿವರು, ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ನಲ್ಲಿ ನಡೆಸಿದ ಸಭೆಯಲ್ಲಿ ತೆರಿಗೆ ಸಂಗ್ರಹ ಕುಂಠಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮುಂದಾದರೂ ಪ್ರಗತಿ ಕಾಣಬಹುದೇ ಕಾದುನೋಡಬೇಕಿದೆ.
ಜಾಹೀರಾತು ತೆರಿಗೆ 6 ಸ್ಥಳೀಯ ಸಂಸ್ಥೆಗಳ ಶೂನ್ಯ ಸಾಧನೆ
ಇನ್ನೂ ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ಜಿಲ್ಲೆಯ ಆರು ನಗರಸ್ಥಳೀಯ ಸಂಸ್ಥೆಗಳು ಶೂನ್ಯ ಸಾಧನೆ ಮಾಡಿದ್ದು, ಪಾವಗಡ, ಚಿಕ್ಕನಾಯಕನಹಳ್ಳಿ, ಮಧುಗಿರಿ ಪುರಸಭೆ ಹಾಗೂ ಕೊರಟಗೆರೆ, ಗುಬ್ಬಿ, ಹುಳಿಯಾರು ಪಟ್ಟಣಪಂಚಾಯ್ತಿಗಳು 1 ರೂಪಾಯಿ ಸಹ ಜಾಹೀರಾತು ಶುಲ್ಕ ಆದಾಯ ಬಂದಿಲ್ಲ. ಮಧುಗಿರಿ, ಹುಳುಯಾರು, ಚಿನಾಹಳ್ಳಿ ಪುರಸಭೆಯವರು ಬೇಡಿಕೆಯನ್ನೇ ಶೂನ್ಯ ತೋರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಖಾಸಗಿಯವರು ಒಬ್ಬರು ಸಾರ್ವಜನಿಕ ರಸ್ತೆ, ಸರಕಾರಿ ಸ್ವತ್ತುಗಳಲ್ಲಿ ನಾಮಫಲಕ ಅಳವಡಿಸಿಲ್ಲವೇ, ಕನಿಷ್ಠ ಪ್ರಚಾರ ಫ್ಲೆಕ್ಸ್ಗಳನ್ನು ಹಾಕುತ್ತಿಲ್ಲವೇ? ಎಂಬ ಅನುಮಾನಕ್ಕೆ ಎಡೆಮಾಡಿದೆ. ಖಾಸಗಿ ಫ್ಲೆಕ್ಸ್, ಫೋಸ್ಟರ್ ಅಳವಡಿಸಲು ಸ್ಥಳೀಯ ಸಂಸ್ಥೆಗಳಿಗೆ ಶುಲ್ಕ ಕಟ್ಟಬೇಕೆಂಬ ನಿಯಮವೂ ಸಹ ಸಂಬಂಧ ಪಟ್ಟ ನಗರಸ್ಥಳೀಯಸಂಸ್ಥೆಯವರಿಗೆ ತಿಳಿದಿಲ್ಲವೇ ಎಂಬ ಅನುಮಾನಕ್ಕೆ ಎಡೆಮಾಡಿದೆ.
ವೈಯಕ್ತಿಕ ಹಣಕ್ಕೆ ಬೇಡಿಕೆಯಿಡುವ ಚಾಳಿ, ಒತ್ತಡಗಳು..!
ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹದಲ್ಲಾಗಿರುವ ಕುಂಠಿತ ಗಮನಿಸಿದರೆ ಕೋವಿಡ್ ಆರ್ಥಿಕ ಸಂಕಷ್ಟ ಒಂದು ಪ್ರಮುಖ ಕಾರಣವಾದರೂ, ಅಧಿಕಾರಿ, ಸಿಬ್ಬಂದಿಗಳ ಉದಾಸೀನತೆ ಹಾಗೂ ತೆರಿಗೆ ಬದಲಾಗಿ ತಾವೇ ಒಂದಿಷ್ಟು ಹಣಪಡೆದು, ಇಲ್ಲವೇ ಜನಪ್ರತಿನಿಧಿಗಳು, ರಾಜಕೀಯ ಒತ್ತಡಕ್ಕೆ ಮಣಿದು ಹಾಗೆ ಬಿಟ್ಟುಬಿಡುವ ಚಾಳಿ ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಸಂಗ್ರಹ ಹಿನ್ನಡೆಗೆ ಕಾರಣ ಎಂದು ಸಾರ್ವಜನಿಕರೇ ಮಾತಾಡಿಕೊಳ್ಳುವಂತಾಗಿದೆ. ನಿಯಮಿತವಾಗಿ ವಸೂಲಿ ಮಾಡದೆ ಸಚಿವರು ಸಭೆಯಲ್ಲಿ ಪ್ರಶ್ನಿಸದರೆಂದು ಇದೀಗ ವರ್ತಕರು, ತೆರಿಗೆದಾರರ ಮೇಲೆ ಏಕಾಏಕಿ ತೆರಿಗೆ ಕಟ್ಟಲು ನೋಟಿಸ್ ನೀಡಿ ಮುಗಿಬೀಳುವ ಕ್ರಮ ಅನುಸರಿಸಿದರೂ ಶುಲ್ಕ, ತೆರಿಗೆ ಪಾವತಿದಾರರಿಗೆ ತೊಂದರೆಯಾಗಲಿದೆ. ಒಂದಿಷ್ಟು ಸಮಯವಕಾಶ ನೀಡಿ, ಬಡ್ಡಿ, ದಂಡ ವಿನಾಯಿತಿ ಕ್ರಮಗಳ ಮೂಲಕ ಹಿಂಬಾಕಿ ವಸೂಲಿಗೆ ಕ್ರಮವಾಗಬೇಕಿದೆ.
ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳಿಗೆಗಳ ಬಾಡಿಗೆ ವಸೂಲಿಯಲ್ಲಿ ಹಿನ್ನಡೆಯಾಗಿರುವುದು ನಿಜ. ಈ ಸಂಬಂಧ ಎಲ್ಲಾ ಸ್ಥಳೀಯ ಸಂಸ್ಥೆಗಳವರಿಗೂ ಸಚಿವರ ಸೂಚನೆಯಂತೆ ನೋಟಿಸ್ ನೀಡಲಾಗುವುದು. ಏಪ್ರಿಲ್ನಿಂದ 3 ತಿಂಗಳು ಸತತವಾಗಿ ಕಾಡಿದ ಕೋವಿಡ್ ತೆರಿಗೆ ಸಂಗ್ರಹದಲ್ಲೂ ಹಿನ್ನಡೆಯಾಗಿದ್ದು, ಆರ್ಥಿಕ ವರ್ಷ ಮುಗಿಯಲು ಇನ್ನಷ್ಟು ತಿಂಗಳು ಬಾಕಿಯಿರುವುದರಿಂದ ಅಷ್ಟರೊಳಗೆ ಬಾಕಿ ವಸೂಲಿಗೆ ಆದ್ಯತೆ ನೀಡುವಂತೆ ನಗರಸ್ಥಳೀಯ ಸಂಸ್ಥೆ ಮುಖ್ಯಸ್ಥರಿಗೆ ನಿರ್ದೇಶಿಸಲಾಗುವುದು.
-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ.
ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
