ತಿಪಟೂರು : ಸಂಪೂರ್ಣ ಹಾಳಾದ ರಸ್ತೆ ; ಆಂಬ್ಯುಲೆನ್ಸ್ ಬರುವುದು ದುಸ್ಥರ

ತಿಪಟೂರು :

     ನೊಣವಿನಕೆರೆ ಹೋಬಳಿಯ ಬಸ್ತಿಹಳ್ಳಿ ಗ್ರಾಮದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಜನಪ್ರತಿನಿಧಿಗಳನ್ನು ರಸ್ತೆ ಸರಿಪಡಿಸಿ ಜೀವ ಉಳಿಸಿ ಎಂದು ಬೇಡವ ಸ್ಥಿತಿಗೆ ಬಂದಿದ್ದಾರೆ.

      ತಿಪಟೂರು ತಾಲ್ಲೂಕಿನ ನೊಣವಿನಕೆರೆಯಿಂದ ನೆಲ್ಲಿಕೆರೆಗೆ ಸಾಗುವ ಬಸ್ತಿಹಳ್ಳಿಯ ಮಾರ್ಗದ ರಸ್ತೆಯು ಯಡೆಹಳ್ಳಿ, ಬುರುಡೇಘಟ್ಟ, ಆನೆಕೆರೆ ಮಾರ್ಗವಾಗಿ ತುರುವೇಕೆರೆಗೆ ಸಾಗುತ್ತದೆ. ರೈತರು, ವಿದ್ಯಾರ್ಥಿಗಳು, ರೋಗಿಗಳು ಇದೇ ಮಾರ್ಗದಲ್ಲಿ ತಿಪಟೂರು ಮತ್ತು ತುರುವೇಕೆರೆಗೆ ಸಾಗುತ್ತಾರೆ. ಕೆಲವು ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು ಹಾಗೂ ರೋಗಿಗಳು ಆಸ್ಪತ್ರೆಯನ್ನು ಸೇರುವ ವೇಳೆ ಏನಾಗುತ್ತದೋ ಎಂಬ ಆತಂಕದಿಂದ ದೇವರ ಮೇಲೆ ಭಾರ ಹಾಕಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಸೂಕ್ತ ಸಂದರ್ಭಕ್ಕೆ ಆಂಬ್ಯುಲೆನ್ಸ್ ಸಹ ಬರಲು ಸಾಧ್ಯವಾಗುತ್ತಿಲ್ಲ.

ಸಾಂಕ್ರಮಿಕ ರೋಗದ ಭೀತಿ :

      ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಚರಂಡಿಯ ಮಲಿನ ನೀರು ರಸ್ತೆಯಲ್ಲಿನ ಗುಂಡಿಗಳಲ್ಲಿ ನಿಂತಿದೆ. ಈಗಾಗಲೇ ಕೊರೊನಾದಿಂದ ಬಳಲಿರುವ ಜನರಿಗೆ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳು ಬರುವ ಭಯವಿದ್ದು, ಜನರು ಆತಂಕದಲ್ಲಿ ದಿನ ತಳ್ಳುತ್ತಿದ್ದಾರೆ.

     ರಸ್ತೆ ಕಾಮಗಾರಿಗೆ ಶಾಸಕರು 1 ಬಾರಿ ಗುದ್ದಲಿ ಪೂಜೆ ಮಾಡಿ ವರ್ಷಗಳೇ ಕಳೆದರೂ ಯಾವುದೇ ಪ್ರಗತಿಯನ್ನು ಈವರೆಗೆ ಕಂಡಿಲ್ಲ. ಮತ್ತೆ ಇದೇ ರಸ್ತೆ ಕಾಮಗಾರಿಗೆ ಕಳೆದ ತಿಂಗಳು ಮತ್ತೆ ಭೂಮಿಪೂಜೆ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಗತಿ ಕಾಣುತ್ತಿಲ್ಲವೆಂದು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ತಿಳಿಸಿದರು.

     ಈ ಬಗ್ಗೆ ತಾಲ್ಲೂಕು ಆಡಳಿತ ಮತ್ತು ಶಾಸಕರು, ಸಚಿವರು ಕೂಡಲೇ ಕ್ರಮಕೈಗೊಂಡು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap