ತಿಪಟೂರು :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ 4 ಸಾರಿಗೆ ಸಂಸ್ಥೆಗಳ ನೌಕರರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಆರಂಭಿಸಿದ್ದು, ಬಸ್ ಸೇವೆ ಸ್ಥಗಿತಗೊಂಡಿದೆ. ಈ ಮುಷ್ಕರದಿಂದ ತಿಪಟೂರಿನ ಪ್ರಯಾಣಿಕರು ಪರದಾಡುವಂತಾಯಿತು.
ಎಂದಿನಂತೆ ಬೆಳಗ್ಗೆ ತಮ್ಮ ನಿತ್ಯದ ಕಾಯಕಕ್ಕೆ ಹಾಗೂ ವಿವಿಧ ಸ್ಥಳಕ್ಕೆ ಪ್ರಯಾಣ ಬೆಳಸಲು ಬಸ್ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆಯಿಂದಾಗಿ ಬಸ್ ಸೇವೆ ದೊರೆಯದೆ ಗಲಿಬಿಲಿಗೀಡಾದರು. ಹೊರ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾದೆ. ಕೆ.ಎಸ್.ಆರ್.ಟಿ.ಸಿ ನೌಕರರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.
ಟ್ಯೂಷನ್ಗೆ ಬಂದ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬಂದಿದವರು ವಾಪಸ್ ಊರಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ಫಜೀತಿಪಟ್ಟರು. ಕೆಲವರು ದುಬಾರಿ ಹಣವನ್ನು ನೀಡಿ ಆಟೋ ಹತ್ತಿದರೆ, ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಕರೆಮಾಡಿ ಬದಲಿ ವಾಹನದ ವ್ಯವಸ್ಥೆಯನ್ನು ಮಾಡಿಕೊಂಡು ಹಿಂದಿರುಗಿದರು.
ನಮ್ಮ ಕಷ್ಟ ಕೇಳುವವರಿಲ್ಲ :
ಮುಷ್ಕರ ಮಾಡುತ್ತಿರುವ ಹೆಸರು ಬಯಸದ ಕೆಎಸ್ಆರ್ಟಿಸಿ ನೌಕರರೊಬ್ಬರು ಮಾತನಾಡಿ, ನಾವು ಇಷ್ಟು ದಿನ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದೇವೆ, ನಮ್ಮ ಮನೆಯಲ್ಲಿ ನಾನೊಬ್ಬನೇ ದುಡಿಯುವವನು, ಇವರು ಕೊಡುವ 13 ಸಾವಿರ ಸಂಬಳ ಯಾವುದಕ್ಕೂ ಸಾಕಾಗುತ್ತಿಲ್ಲ, ವಯೋವೃದ್ಧ ಪೋಷಕರ ಆಸ್ಪತ್ರೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಇವುಗಳನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ.
ಇನ್ನು ನಮ್ಮ ಜೀವನ ಸಾಗಿಸುವುದು ಹೇಗೆ ಇದು ಎಂದು ಸಮಸ್ಯೆ ಹೇಳಿಕೊಂಡರು. ನಾವು ಕರ್ತವ್ಯ ನಿರ್ವಹಿಸುವ ಬಸ್ಗಳ ಕೊನೆಯ ಟ್ರಿಪ್ ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಅಲ್ಲಿಯೇ ಉಳಿಯಬೇಕು.
ನಗರ ಪ್ರದೇಶದಲ್ಲಿಯಾದರೆ ಏನೋ ಒಂದು ವ್ಯವಸ್ಥೆ ಇರುತ್ತದೆ, ಗ್ರಾಮಾಂತರ ಪ್ರದೇಶಗಳಲ್ಲಿ ಸೂಕ್ತವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೇ ಇರುವುದಿಲ್ಲ. ಇನ್ನೂ ಊಟದ ಕಥೆಯಂತು ಕೇಳಲೇ ಬೇಡಿ. ಇಷೆಲ್ಲಾ ಕಷ್ಟಗಳ ನಡುವೆ ನಾವು ಸಾರ್ವಜನಿಕರಿಗಾಗಿ ದುಡಿಯುತ್ತಿದ್ದು ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೂಕ್ತ ಸಂಬಳವನ್ನು ನೀಡಿ ಎಂಬುದು ನಮ್ಮ ಬೇಡಿಕೆ ಎಂದರು.
