ತಿಪಟೂರು : 
ಹೊನ್ನವಳ್ಳಿ ಗ್ರಾಮಪಂಚಾಯಿತಿ ಜನರು ಚುನಾವಣೆ ಬಹಿಷ್ಕರಿಸಲು ಜನಪ್ರತಿನಿಧಿಗಳೇ ಕಾರಣ, ಚುನಾವಣೆ ಬಹಿಷ್ಕರಿಸುವ ವಿಚಾರ ತಿಳಿದರೂ ಜನರ ಮನವೊಲಿಸುವಲ್ಲಿ ಜನಪ್ರತಿನಿಧಿಗಳು ಎಡವಿದಾರೆಂದು ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಮತಕೇಳುವ ಸಲುವಾಗಿ ಪ್ರಜೆಗಳ ಮನೆ ಬಾಗಿಲಿಗೆ ಹೋಗುವ ಜನಪ್ರತಿನಿಧಿಗಳು ಗೆದ್ದ ನಂತರ ಅವರ ಸಮಸ್ಯೆಗಳು, ಅವಶ್ಯಕತೆಗಳನ್ನು ಅರಿತು ಬಗೆಹರಿಸಬೇಕು. ಆದರೆ ಈ ಕೆಲಸವನ್ನು ತಾಲ್ಲೂಕಿನ ಯಾವೊಬ್ಬ ಜನಪ್ರತಿನಿಧಿಯೂ ಮಾಡುತ್ತಿಲ್ಲ. ಆಡಳಿತ ವಿಕೇಂದ್ರಕರಣದಲ್ಲಿ ಗ್ರಾಮ ಪಂಚಾಯತಿಗಳು ರಾಷ್ಟ್ರದ ಅಭಿವೃದ್ಧಿಗೆ ಮೂಲವಾಗಿದ್ದು ಅಲ್ಲಿಯೇ ಚುನಾವಣೆ ಬಹಿಷ್ಕಾರವಾದರೆ ದೇಶದ ಅಭಿವೃದ್ಧಿ ಹೇಗತಾನೇ ಸಾಧ್ಯವೆಂದ ಅವರು, ಹೊನ್ನವಳ್ಳಿಯಲ್ಲಿ ನೀರಿಗೆ ಹಾಹಾಕಾರವಿದೆ. ಬರದಿಂದ ಜನ ರೋಸಿ ಹೋಗಿದ್ದು ಜೀವಜಲಕ್ಕಾಗಿ ಪರದಾಡುತ್ತಿದ್ದಾರೆ ಎಂದರು.
ಚುನಾವಣೆ ಬಹಿಷ್ಕರಿಸಿರುವುದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಅಭಿವೃದ್ಧಿಯತ್ತ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಂತರ ಜನರೊಂದಿಗೆ ಚರ್ಚಿಸಿ ನೀರಾವರಿ ಹೋರಾಟಕ್ಕೆ ಇಳಿಯಲಾಗುವುದು ಪಕ್ಷಾತೀತ ಹೋರಾಟ ಮಾಡಲಾಗುವುದು ಎಂದರು.
ಗ್ರಾಮದ ಅಭಿವೃದ್ಧಿಗೆ ಉತ್ತಮ ಸದಸ್ಯನ ಆಯ್ಕೆ ಅನಿವಾರ್ಯ. ಪ್ರತಿಯೊಬ್ಬರೂ ಯೋಚಿಸಿ ಮತ ಚಲಾಯಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಧ್ವನಿಯಾಗುವವರನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








