ಹಿರಿಯ ಕಲಾವಿದರು, ತಂತ್ರಜ್ಞರ ಬದುಕಿಗೆ ಆಸೆಯಾಗಬೇಕೆನ್ನುವ ಉದ್ದೇಶದಿಂದ ‘ಎನ್ 1 ಕ್ರಿಕೆಟ್ ಅಕಾಡೆಮಿ’ಯ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ‘ಟೆಲಿವಿಷನ್ ಪ್ರಿಮಿಯರ್ ಲೀಗ್ -2’ ಲೋಗೋ ಬಿಡುಗಡೆ ಹಾಗೂ ಸುದ್ದಿಗೋಷ್ಟಿ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮದ ಆರಂಭದಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿ ಆ ಬಳಿಕ ಆ ತಂಡಗಳ ಮಾಲೀಕರು ಹಾಗೂ ಅಂಬಾಸಿಡರ್ಗಳ ಸಮ್ಮುಖದಲ್ಲಿ ಲೋಗೋ ಬಿಡುಗಡೆ ಮಾಡಲಾಯಿತು. ಆರು ತಂಡದ ಮಾಲೀಕರು ಮಾತನಾಡಿ, ‘ಈ ರೀತಿಯ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಕ್ರಿಕೆಟ್ ಆಯೋಜನೆ ಮಾಡುವ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ’ ಎಂದರು.
ಎನ್ 1 ಕ್ರಿಕೆಟ್ ಅಕಾಡೆಮಿಯ, ಟೆಲಿವಿಷನ್ ಪ್ರಿಮಿಯರ್ ಲೀಗ್ನ ಆಯೋಜಕರಾದ ಸುನೀಲ್ ಕುಮಾರ್ ಅವರು ಮಾತನಾಡಿ, ‘ಕಳೆದ ಸೀಸನ್ ನಂತೆ ಈ ಸೀಸನ್ನಲ್ಲೂ ಎಲ್ಲಾ ಮಾಲೀಕರು ನಮ್ಮೊಂದಿಗೆ ಸಹಕರಿಸಿದ್ದಾರೆ. 4ನೇ ತಾರೀಖು ಆಟಗಾರರ ಹರಾಜು ಪ್ರಕ್ರಿಯೆ ಇರುತ್ತದೆ. ಆ ಬಳಿಕ ಜೆರ್ಸಿ ಲಾಂಚ್ ಇರುತ್ತದೆ. 4 ದಿನ ಪಂದ್ಯಾವಳಿ ನಡೆಯುತ್ತದೆ.
ಫೈನಲ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ 4 ಲಕ್ಷ ನಗದು ಬಹುಮಾನ ಹಾಗೂ ಮ್ಯಾನ್ ಆಫ್ ದಿ ಸಿರೀಸ್ಗೆ ಬೈಕ್ ಇರುತ್ತದೆ. ಪ್ರತಿ ಪಂದ್ಯಕ್ಕೂ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆದವರಿಗೆ ಕ್ಯಾಶ್ ಪ್ರೈಸ್ ಕೂಡ ಇರುತ್ತದೆ. ಮುಂದಿನ ದಿನಗಳಲ್ಲಿ ಪಂದ್ಯಾವಳಿಯ ದಿನಾಂಕವನ್ನು ಹೇಳುತ್ತೇನೆ. ಪ್ರತಿ ತಂಡದಲ್ಲೂ ಇಬ್ಬರು ಅಂಬಾಸಿಡರ್ ಗಳಿರುತ್ತಾರೆ. ರಿವ್ಯೂ ಸಿಸ್ಟಂ, ಎಲ್ ಬಿಡಬ್ಲ್ಯೂ ಇರುತ್ತದೆ. ಇದು 12 ಓವರ್ನ ಮ್ಯಾಚ್ ಆಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗಿರುತ್ತದೆ ಹಾಗೆಯೇ ನಮ್ಮಲ್ಲೂ ಬಹುತೇಕ ಎಲ್ಲಾ ವ್ಯವಸ್ಥೆಗಳಿರುತ್ತದೆ’ ಎಂದರು.
ಮುಂದುವರೇದು ಮಾತನಾಡುವ ಸುನೀಲ್ ‘ಎಂ.ಎಸ್.ಪಾಳ್ಯದ ಬಳಿಯಿರುವ ಅಶೋಕ್ ಇಂಟರ್ ನ್ಯಾಶನಲ್ ಮೈದಾನದಲ್ಲಿ ಪಂದ್ಯಗಳು ನಡೆಯುತ್ತದೆ. ಒಂದು ತಂಡದಲ್ಲಿ 13 ಸದಸ್ಯರಿರುತ್ತಾರೆ. ಪಂದ್ಯಗಳ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ಇರುತ್ತದೆ ಎಂದರು. ಫೈನಲ್ ದಿನ ಅಪ್ಪು ಅವರ ಹಾಡುಗಳ ಕಾರ್ಯಕ್ರಮವಿರುತ್ತದೆ. ಅದೇ ದಿನ ನಾವು ಈ ಬಾರಿ ಯಾವ ಕಲಾವಿದರಿಗೆ ಆರ್ಥಿಕವಾಗಿ ನೆರವಾಗುತ್ತೇವೆ ಎನ್ನುವುದನ್ನು ಹೇಳುತ್ತೇವೆ’ ಎಂದು ಆಯೋಜಕ ಸುನೀಲ್ ಕುಮಾರ್ ‘ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2’ರ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








