ಕುಡಿಯುವ ನೀರು ಸಿಗದೆ ಪ್ರಯಾಣಿಕರು ಪರದಾಟ

ಹುಳಿಯಾರು:

ಸಮೀಪಿಸುತ್ತಿರುವ ಬೇಸಿಗೆ : ಶುದ್ಧ ನೀರಿನ ಘಟಕ ದುರಸ್ತಿಗೆ ಆಗ್ರಹ

          ಪಟ್ಟಣದ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಸದರಾಗಿದ್ದ ಕಾಲದಲ್ಲಿ ಎಸ್.ಪಿ.ಮುದ್ಧಹನುಮೇಗೌಡರು ಬಸ್ ನಿಲ್ದಾಣದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು.

ನೀರಿಲ್ಲದೆ ಪರದಾಟ :

ಈ ಘಟಕಕ್ಕೆ ಹುಳಿಯಾರು ಪಪಂಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ನೀರು ಬರದಂತಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ನೀರಿಲ್ಲದೆ ಪರದಾಡುವಂತಾಗಿದೆ.

ಹಣ ಕೊಟ್ಟು ನೀರು ಖರೀದಿ :

ಈ ಹಿಂದೆ ಬಸ್ ನಿಲ್ದಾಣದಲ್ಲಿ ಟೀ ಅಂಗಡಿಗಳು, ಕೆರೆ ದಡದಲ್ಲಿ ಹೋಟೆಲ್‍ಗಳು ಇದ್ದವು. ಆಗ ಜನ ಅಲ್ಲಿಗೆ ಹೋಗಿ ನೀರು ಕುಡಿಯುತ್ತಿದ್ದರು. ಆದರೆ ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ತೆರವು ಮಾಡಿದ ನಂತರ ನೀರಿರುವ ಒಂದೇ ಒಂದು ಸ್ಥಳವು ಇಲ್ಲಿ ಇಲ್ಲದಂತಾಗಿದೆ. ಪರಿಣಾಮ ಜನರು ಬಾಯಾರಿಕೆ ತಡೆಯಲಾರದೇ ದುಡ್ಡು ಕೊಟ್ಟು ನೀರಿನ ಬಾಟಲ್ ಖರೀದಿಸುತ್ತಿದ್ದಾರೆ.

ಹೆಚ್ಚಿದ ಬಿಸಿಲಿನ ಝಳ :

ಈಗ ಬಿಸಿಲಿನ ಝಳ ಸಹ ಹೆಚ್ಚಿದ್ದು, ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ನೀರಿನ ಅಗತ್ಯತೆ ಹೆಚ್ಚಾಗಿದೆ. ಆದರೆ ಬಸ್ ಸುಂಕ, ಫುಟ್‍ಪಾತ್ ಸುಂಕ ಸಂಗ್ರಹಿಸುವ ಪಟ್ಟಣ ಪಂಚಾಯ್ತಿ ಮೂಲ ಸೌಕರ್ಯ ಕಲ್ಪಿಸುವ ಹೊಣೆ ನಮ್ಮದೆನ್ನುವುದನ್ನು ಮರೆತಿದೆ. ಪ್ರಯಾಣಿಕರ ಅನುಕೂಲದ ದೃಷ್ಠಿಯಿಂದ ನೀರಿನ ಘಟಕ ದುರಸ್ತಿಗೆ ಮುಂದಾಗಲಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಹೇಳಿ ಹೇಳಿ ಸಾಕಾಗಿ ಹೋಗಿದೆ : ಹುಳಿಯಾರು ಪಟ್ಟಣವು ವಾಣಿಜ್ಯವಾಗಿ ಮೂರ್ನಾಲ್ಕು ಜಿಲ್ಲೆಗಳ ಗಡಿಭಾಗದ ಜನರಿಗೆ ಆಸರೆಯಾಗಿದೆ. ಪರಿಣಾಮ ನಿತ್ಯ ಸಾವಿರಾರು ಜನರು ಬಸ್ ನಿಲ್ದಾಣಕ್ಕೆ ಬಂದೋಗುತ್ತಾರೆ. ಬಸ್ ಬರುವ ತನಕ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುತ್ತಾರೆ.

ಈ ಸಂದರ್ಭದಲ್ಲಿ ಬಾಯಾರಿಗೆಯಾದಾಗ ಕುಡಿಯಲು ನೀರಿನ ಸೌಲಭ್ಯವನ್ನು ಪಪಂ ಮಾಡಿಲ್ಲ. ನೀರಿನ ಘಟಕ ಕೆಟ್ಟಿದ್ದರೂ ದುರಸ್ತಿ ಮಾಡಿಸಿಲ್ಲ. ಈ ಬಗ್ಗೆ ಪಪಂ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ.

-ಚನ್ನಕೇಶವ, ಖಾಸಗಿ ಬಸ್ ಏಜೆಂಟ್, ಹುಳಿಯಾರು.

ನನ್ನ ಗಮನಕ್ಕೆ ಬಂದಿರಲಿಲ್ಲ :

ನಾನಿನ್ನೂ ಹೊಸದಾಗಿ ಪಪಂ ಅಧ್ಯಕ್ಷನಾಗಿದ್ದೇನೆ. ಬಸ್ ನಿಲ್ದಾಣದ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಶೌಚಾಲಯದ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇನೆ.

ಈಗ ಮಾಧ್ಯಮದವರಿಂದ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ತುರ್ತು ಆದ್ಯತೆಯ ಮೇರೆಗೆ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಶುದ್ಧ ನೀರು ಕೊಡುತ್ತೇವೆ. ಅಲ್ಲದೆ ಕಾಯಿನ್ ಹಾಕಿ ಶುದ್ಧ ನೀರನ್ನು ಬಾಟಲ್‍ನಲ್ಲಿ ಹಿಡಿದುಕೊಂಡು ಹೋಗುವಂತಹ ಘಟನ ನಿರ್ಮಿಸುವ ಚಿಂತನೆ ಕೂಡ ಇದೆ.

-ಕೆಎಂಎಲ್ ಕಿರಣ್, ಅಧ್ಯಕ್ಷರು, ಪಪಂ, ಹುಳಿಯಾರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap