ತುಮಕೂರು :
ಡಾ.ಬಿ.ಆರ್.ಅಂಬೇಡ್ಕರ್ ಅವರ ರಚಿಸಿರುವ ಸಂವಿಧಾನವೇ ತುಳಿತಕ್ಕೊಳಗಾದ ಸಮುದಾಯಗಳ ಶಕ್ತಿ. ಅಂತಹ ಶಕ್ತಿಯನ್ನೇ ಕಸಿಯುವಂತಹ ಸಂವಿಧಾನ ಬದಲಾವಣೆಯಾಗಬೇಕು ಎನ್ನುವ ಮಾತುಗಳು, ಹುನ್ನಾರಗಳು ನಡೆಯುತ್ತಿವೆ. ಇದರ ವಿರುದ್ಧ ಶೋಷಿತ ಸಮುದಾಯಗಳು ಎಚ್ಚೆತ್ತು, ಒಗ್ಗಟ್ಟು ಪ್ರದರ್ಶಿಸಿ ಹೋರಾಡಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕರೆ ಕೊಟ್ಟರು.
ಭೂಮಿ ಬಳಗ ತುಮಕೂರು, ಎಚ್.ಕೆಂಚಮಾರಯ್ಯ ಅಭಿಮಾನಿಗಳ ಬಳಗದಿಂದ ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಎಚ್.ಕೆಂಚಮಾರಯ್ಯ-75 ಅಭಿನಂದನಾ ಸಮಾರಂಭ ಹಾಗೂ ಒಡನಾಡಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತರು ಎಷ್ಟೇ ಶಿಕ್ಷಣವಂತರಾದರೂ, ಉದ್ಯೋಗ, ರಾಜಕೀಯ ಸ್ಥಾನಮಾನಗಳಿಸಿದರೂ ದಲಿತ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಸಮಾಜ ನಮ್ಮನ್ನು ತಮ್ಮಂತೆ ಮನುಷ್ಯರೆಂದು ಒಪ್ಪಿಕೊಳ್ಳುವ ಮನಸ್ಥಿತಿ ಇನ್ನೂ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಸಂವಿಧಾನವೊಂದೇ ನಮ್ಮನ್ನು ಪೊರೆಯುವ ಶಕ್ತಿಯಾಗಿದ್ದು, ಸಂವಿಧಾನ ಕಿತ್ತುಹಾಕಲು ಹೊರಟಿರುವವರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದಲ್ಲಿ ಹುಟ್ಟಿ ಮಾದರಿ ಶಿಕ್ಷಕರೆನಿಸಿದ ಸಾಧಕ ಕೆಂಚಮಾರಯ್ಯ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ನಮ್ಮೆಲ್ಲರಿಗೂ ಎಚ್ಚರಿಕೆ ಕರೆಗಂಟೆಯಾಗಿದೆ ಎಂದರು.
ನಾನೊಬ್ಬ ದಲಿತ ಎನಿಸಿಕೊಳ್ಳಲು ಹೆಮ್ಮೆ ಇದೆ ಎಂದ ಪರಮೇಶ್ವರ ಅವರು ನನಗೆ ಯಾವುದೇ ಕೀಳರಿಮೆ ಇಲ್ಲ. ನಾವು ಜ್ಞಾನವಂತರೇ ಐಎಎಸ್ನಲ್ಲಿ ಮೊದಲ ರ್ಯಾಂಕ್ ಅನ್ನು ದಲಿತ ಹೆಣ್ಣುಮಗಳು ಪಡೆದಿಲ್ಲವೇ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಸಮುದಾಯ ಜಾಗೃತರಾಗಬೇಕಿದೆ. ಕೆಂಚಮಾರಯ್ಯ ಅವರಿಗೆ ರಾಜಕೀಯವಾಗಿ ಉತ್ತಮ ಅವಕಾಶಗಳು ಸಿಗಬೇಕು ಎಂದು ಆಶಿಸಿದರು.
ಪಾವಗಡದಿಂದ ಕೆಂಚಮಾರಯ್ಯ ಸ್ಪರ್ಧಿಸಲಿ: ಎಚ್.ಆಂಜನೇಯ
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ ಜಿಲ್ಲೆಯ ದಲಿತ ಸಮುದಾಯದ ಕೀರ್ತಿಯನ್ನು ದಿ. ಸಿ.ಚನ್ನಿಗರಾಮಯ್ಯ, ಶಿಕ್ಷಣಭೀಷ್ಮ ಎಚ್.ಎಂ.ಗಂಗಾಧರಯ್ಯ, ಜಸ್ಟೀಸ್ ಭೀಮಯ್ಯ ಅವರು ಬೆಳಗಿದ್ದು, ಉಪಮುಖ್ಯಮಂತ್ರಿಗಳಾಗಿ ಪರಮೇಶ್ವರ್ ಅವರು ಹೆಸರುಗಳಿಸಿದ್ದಾರೆ. ಇವರಂತೆಯೇ ಶಿಕ್ಷಣ ರಂಗದಲ್ಲಿ ಜಿಪಂ ಸದಸ್ಯರಾಗಿ ಹೆಸರು ಮಾಡಿರುವ ಕೆಂಚಮಾರಯ್ಯ ಅವರಂತಹ ಸಮಾಜಮುಖಿ ನಾಯಕರು ವಿಧಾನಸಭೆಗೆ ಆರಿಸಿ ಬರಬೇಕು. ಪಾವಗಡದಿಂದ ಕೆಂಚಮಾರಯ್ಯ ಸ್ಪರ್ಧಿಸಬೇಕು. ಸಮುದಾಯದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೂ ಸಂಘಟಿತರಾಗಿ ಪ್ರಬಲ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಮತಯಾಚಿಸಲು ಬರುವವರೆದರು ನಿಮ್ಮ ಶಕ್ತಿ ಪ್ರದರ್ಶಿಸಬೇಕು. ಸೋಲಿಸುವ, ಗೆಲ್ಲಿಸುವ ಬಗ್ಗೆ ನೇರವಾಗಿ ಹೇಳುವಂತಾಗಬೇಕು. ಸೃಶ್ಯ ಜಾತಿಯನ್ನೆಲ್ಲ ಎಸ್ಸಿಗೆ ಸೇರಿಸಿ ಅಸ್ಪøಶ್ಯರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಟಿಬಿಜೆ ಕೃತಿ ಬಿಡುಗಡೆ: ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಎಚ್.ಕೆಂಚಮಾರಯ್ಯ ಅವರು ಶಿಕ್ಷಣ ಇಲಾಖೆಯಲ್ಲಿರಲಿ, ನಂತರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರಲಿ ಯಾರೊಂದಿಗೆ ದ್ವೇಷದ ಮನೋಭಾವ ಹೊಂದಿರಲಿಲ್ಲ. ಪ್ರೀತಿವಿಶ್ವಾಸದಿಂದ ಮಾತಾಡುವ ವ್ಯಕ್ತಿ. ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ ಕೆಂಚಮಾರಯ್ಯ ಅವರು ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳನ್ನು ಇಟ್ಟುಕೊಂಡು ಸಾಧಕರಾಗಿರುವ ವ್ಯಕ್ತಿ. ಅಧಿಕಾರ ಸ್ಥಾನ ದೊರೆತ ದಲಿತರು ಅವರ ಸಮುದಾಯದವರನ್ನೇ ತುಳಿಯುವ ಪ್ರಯತ್ನಗಳು ಹೆಚ್ಚಾಗಿದ್ದು, ಅದಕ್ಕೆ ಕಡಿವಾಣಹಾಕಬೇಕಿದೆ ಎಂದರು.
ಜಿ.ಎಸ್.ಸೋಮಣ್ಣ ಅವರೇ ಪ್ರೇರಣೆ:
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆಂಚಮಾರಯ್ಯ ಅವರು ಭೂಮಿ ಬಳಗದ ದಿ.ಜಿ.ಎಸ್.ಸೋಮಣ್ಣ ಅವರೇ ಈ ಗ್ರಂಥ ಹಾಗೂ ಕಾರ್ಯಕ್ರಮ ಒಡಮೂಡಲು ಪ್ರೇರಣೆ. ದುರದೃಷ್ಟವಶಾತ್ ಅವರ ನಿಧನದ ಬಳಿಕ ನರಸೀಯಪ್ಪ ಅವರ ನೇತೃತ್ವ ವಹಿಸಿ ಅರ್ಥಪೂರ್ಣ ಕಾರ್ಯಕ್ರಮ ಗ್ರಂಥ ಒಡಮೂಡಲು ಕಾರಣರಾಗಿದ್ದಾರೆ. ಕೃತಿಕಾರರಿಗೂ ನನ್ನೊಡನೆ ಸಹೋದ್ಯೋಗಿಗಳಾಗಿ, ಸ್ನೇಹಿತರಾಗಿ, ಹಿತೈಷಿಗಳಾಗಿ ಜಿಲ್ಲೆ, ಹೊರ ಜಿಲ್ಲೆಯಿಂದ ಬಂದಿರುವ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಅಂಬೇಡ್ಕರ್ ಅವರ ಆಶಯದಂತೆ ಸಮಾಜಕ್ಕೋಸ್ಕರ ರಾಜಕಾರಣದಲ್ಲಿರುವ ವಿನಃ ವೈಯಕ್ತಿಕ ಉದ್ದೇಶಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ನಾನೇನು ಮಾಡಿದ್ದೇನೆಂಬ ಪ್ರಶ್ನೆಗಳಿಗೆ ಉತ್ತರಿಸದೆ ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುತ್ತಾ ಬಂದಿರುವೆ ಎಂದರು.ಪ್ರಗತಿಪರ ಚಿಂತಕ ಕೆ.ದೊರೈರಾಜ್ , ಎಸ್ಸಿ ಎಸ್ಟಿ ನೌಕರ ಸಮನ್ವಯ ಸಮಿತಿಯರಾಜ್ಯಾಧ್ಯಕ್ಷ ಶಿವಶಂಕರ್, ಮಾತಂಗ ಫೌಂಡೇಶನ್ನ ಆರ್.ಲೋಕೇಶ್, ಸಾಹಿತಿಡಾ.ಹಾಲತಿ ಸೋಮಶೇಖರ್ ಮಾತನಾಡಿದರು. ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಕೆಂಚಮಾರಯ್ಯ ದಂಪತಿ ಹಾಗೂ ಕೃತಿ ಸಂಪಾದಕರಾದ ಡಾ.ಓ.ನಾಗರಾಜು, ನಾಗಭೂಷಣ್ ಬಗ್ಗನಡು ಅವರನ್ನು ಗೌರವಿಸಲಾಯಿತು. ಡಾ.ವೈ.ಕೆ.ಬಾಲಕೃಷ್ಣಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ,ಅಭಿನಂದನಾ ಸಮಿತಿ ಅಧ್ಯಕ್ಷ ನರಸೀಯಪ್ಪ, ಕೆ.ಎನ್ಲಕ್ಷ್ಮಿರಂಗಯ್ಯ, ಓ ಶಂಕರ್, ಅಶೋಕ್ ರಾಜವರ್ಧನ್, ನಿವೃತ್ತ ಶಿಕ್ಷಣ ಇಲಖೆ ನಿರ್ದೇಶಕ ಕೆ.ಗೋಪಾಲ್ ಮತ್ತಿತರರಿದ್ದರು.
ಉನ್ನತ ಸ್ಥಾನಮಾನಕ್ಕಾಗಿ ಸಂವಿಧಾನ ಬದಲಾವಣೆ ಹೇಳಿಕೆ : ಎಸ್ಜಿಎಸ್
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಒಡನಾಡಿ ಅಭಿನಂದನಾ ಗ್ರಂಥ ಕುರಿತು ಮಾತನಾಡಿ ಬೌದ್ಧ ಧರ್ಮದ ಪಠ್ಯವನ್ನು 7ನೇ ತರಗತಿ ಪುಸ್ತಕದಿಂದ ತೆಗೆದುಹಾಕಲಾಗಿದೆ. ಇದರರ್ಥ ಬೌದ್ಧ ಧರ್ಮದ ತಿರುಳಾದ ಮಾನವೀಯತೆಯನ್ನೇ ಮಕ್ಕಳಿಂದ ದೂರವಿಡುವುದಾಗಿದೆ. ಉನ್ನತ ಸ್ಥಾನಮಾನಕ್ಕೋಸ್ಕರ ಸಂವಿಧಾನವನ್ನೇ ಬದಲುಮಾಡಬೇಕೆಂದು ಸಾಹಿತಿಗಳು ಮಾತನಾಡುತ್ತಿರುವುದು ಆತ್ಮವಂಚನೆಯೇ ಸರಿ. ತುಳಿತಕ್ಕೊಳಗಾದ ಸಮುದಾಯದ ನಾಯಕರು ತತ್ವಗಳನ್ನು ಬಿಟ್ಟು ಪಕ್ಷಾಂತರಿಗಳಾಗುವುದು ಸಮುದಾಯ ಹಿತವನ್ನೇ ಬಲಿಕೊಟ್ಟಂತೆ. ಅಧಿಕಾರಸಿಕ್ಕಾಗ ಸಮುದಾಯದತ್ತ ತಿರುಗಿ ನೋಡುವ ಗುಣ ಬೆಳೆಸಿಕೊಳ್ಳಬೇಕು. ಕೆಂಚಮಾರಯ್ಯ ಅವರ ಒಡನಾಡಿ ಅಭಿನಂದನಾ ಗ್ರಂಥ ಬರೀ ಸಾಧನೆಯ ದಾಖಲೆಗೆ ಸೀಮಿತವಾಗದೆ ಕುಲಸಂಪದಗಳನ್ನು ಪರಿಚಯಿಸಿರುವುದು ಕೃತಿಯ ಮೌಲ್ಯ ಹೆಚ್ಚಿಸಿದೆ. ಶಿಕ್ಷಕರಾಗಿ, ಜನಪ್ರತಿನಿಧಿಯಾಗಿ ಸಾಮುದಾಯಿಕ ಹಿತಕ್ಕಾಗಿ ಕೆಂಚಮಾರಯ್ಯ ದುಡಿದಿದ್ದಾರೆ ಎಂದರು.
ನಾಲ್ಕು ಜನರನ್ನು ಸಾಕುವಂತಹವರಿಗೆ ಮೀಸಲು ಬೇಕೆ?
ಇಂದು ಮೀಸಲಿಗಾಗಿ ಗುಂಪು ಗುಂಪಾಗಿ ಹೋರಾಟ ನಡೆಯುತ್ತಿದೆ. ಹೋರಾಟ ತಪ್ಪು ಎನ್ನುವುದಿಲ್ಲ. ಆದರೆ ಮೀಸಲು ಯಾರಿಗೆ ಕೊಡಬೇಕು ಎನ್ನುವ ಪ್ರಶ್ನೆ ಉದ್ಬವಿಸುತ್ತದೆ. ಚಾರಿತ್ರಿಕವಾಗಿ ಶೋಷಣೆಗೊಳಗಾದವರು, ಅಸ್ಪøಶ್ಯರು, ಸಾಮಾಜಿಕ, ಆರ್ಥಿಕವಾಗಿ ಕೆಳಸ್ತರದವರು ಮೀಸಲು ಕೇಳಿದರೆ ಖಂಡಿತಾ ಅವರಿಗೆ ಮೀಸಲು ಕೊಡಲಿ. ಆದರೆ ನಾಲ್ಕು ಜನ ಸಾಕುವ ಶಕ್ತ್ಯರಿದ್ದು, ಅಂತಹವರು ಮೀಸಲು ಕೇಳುವುದರಲ್ಲಿ ಅರ್ಥವಿಲ್ಲ. ಮೊದಲಿಗೆ ಪರಿಶಿಷ್ಟ ಜಾತಿ, ಪಂಗಡ, ನಂತರ ಮಂಡಲ್ ವರದಿಯನ್ವಯ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲಾಯಿತು. ಮೀಸಲು ಪ್ರಮಾಣ ಶೇ.52ರಷ್ಟಿದ್ದು, ಈ ವರ್ಗಗಳು ಮನಸ್ಸು ಮಾಡಿಸಂಘಟಿತರಾದರೆ ರಾಜಕೀಯ ಅಧಿಕಾರದ ಎಲ್ಲಾ ದ್ವಾರಗಳು ತೆರೆಯುತ್ತಿವೆ. ಆದರೆ ನಮ್ಮಲ್ಲಿ ಶಿಕ್ಷಣ, ಸಂಘಟನೆ ಕೊರತೆ, ಹೋರಾಟದ ಕಿಚ್ಚಿಲ್ಲದೆ ತೊಂದರೆ ಎದುರಿಸುವಂತಾಗಿದೆ ಎಂದು ಡಾ.ಜಿ.ಪರಮೇಶ್ವರ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
