ತುಮಕೂರು : ಸಮಗ್ರ ನೀರಾವರಿಗಾಗಿ ಯೋಜನೆಗಳ ಕ್ರೋಡೀಕರಣ

ತುಮಕೂರು : 

      ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆಯ ರೂಪು-ರೇಷೆಗಳನ್ನು ತಯಾರಿಸುತ್ತಿದ್ದು, ಒಂದು ಯೋಜನೆಯಡಿ ಕೈಗೆತ್ತಿಕೊಂಡ ಕೆರೆ ಮತ್ತೊಂದು ಯೋಜನೆಯಡಿ ಪುನರಾವರ್ತನೆಯಾಗದಂv ಎಚ್ಚರವಹಿಸಿ ಪಟ್ಟಿ ತಯಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಯೋಜನೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಮೂರು ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಶೇ.50ರಷ್ಟು ಜಿಲ್ಲೆಯ ಕೆರೆಗಳು ತುಂಬಲಿವೆ. ಹಂಚಿಕೆಯಾದ ಎಲ್ಲಾ ಕೆರೆಗಳನ್ನು ಶೇ.50 ರಷ್ಟಾದರೂ ತುಂಬಿಸುವ ಗುರಿ ಹೊಂದಲಾಗಿದೆ. ಹೇಮಾವತಿಯಿಂದ ಜಿಲ್ಲೆಗೆ ಹರಿಯುವ ನೀರನ್ನು ಈ ವರ್ಷ ಸಮಗ್ರವಾಗಿ ಬಳಕೆ ಮಾಡಲಾಗಿದೆ. ಆದರೆ, ನೀರು ಹರಿಯುವಿಕೆ, ಆವಿ ಇತ್ಯಾದಿ ಅಂಶಗಳಿಂದ ಮೂರು ಟಿಎಂಸಿ ನೀರು ಅಪವ್ಯಯವಾಗಿದ್ದು, ಕೆರೆಗಳಿಗೆ ಹಂಚಿಕೆಯಾದ ನೀರು ಅಪವ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

      ಹೇಮಾವತಿಯಿಂದ ಹಂಚಿಕೆಯಾದ ನೀರಿನ ಪ್ರಮಾಣ ಕೆಲವು ಕೆರೆಗಳಿಗೆ ಕಡಿಮೆಯಿರುವುದರಿಂದ ಬಹುತೇಕ ಕೆರೆಗಳಲ್ಲಿ ತಳದಲ್ಲಿಯೂ ನಿಲ್ಲುತ್ತಿಲ್ಲ. ಹೆಸರಿಗೆ ಮಾತ್ರ ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಮಾರ್ಪಡಿಸಬೇಕು. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗಳಿಗೆ ಸಮೀಪದ ಕೆರೆಗಳನ್ನು ಈ ಯೋಜನೆಗಳಿಂದಲೇ ತುಂಬಿಸಲಾಗುವುದು. ಇಂತಹ ಕೆರೆಗಳಿಗೆ ನಿಗದಿಯಾದ ನೀರನ್ನು ಕಡಿಮೆ ಹಂಚಿಕೆಯಾದ ಕೆರೆಗಳಿಗೆ ಹರಿಸುವ ಯೋಜನೆ ಸಿದ್ದಪಡಿಸಬೇಕು ಎಂದು ಹೇಮಾವತಿ ಅಧಿಕಾರಿಗೆ ಸೂಚಿಸಿದರು.

      ಶೀಘ್ರ ಪರಿಹಾರ ಕಲ್ಪಿಸಿ: ನೀರಾವರಿ ಯೋಜನೆಯ ಭೂ ಸ್ವಾಧೀನಕ್ಕಾಗಿ ರೈತರಿಗೆ ಪರಿಹಾರ ಶೀಘ್ರ ತಲುಪಿಸುವ ವ್ಯವಸ್ಥೆಯಾಗಬೇಕು.2013ರ ಕಾಯ್ದೆ ಅಂತೆ ಭೂಸ್ವಾಧೀನಾ ಕಾಯ್ದೆಗೆ ಹಣ ಮೀಸಲಿಡಬೇಕು ಎಂದು ನೀರಾವರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಸೂಚಿಸಿದರು.

      ಗುಬ್ಬಿ ಶಾಸಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ನೀರಾವರಿ ಹಿತದೃಷ್ಟಿಯಿಂದ ಈ ಯೋಜನೆ ಉತ್ತಮವಾಗಿದ್ದು, ನೀರಿನ ಹಂಚಿಕೆ ಹೇಗೆ ಎಂಬ ಬಗ್ಗೆ ಸಚಿವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೇ.50 ರಷ್ಟು ನೀರನ್ನು ಹಂಚಿಕೆ ಮಾಡಬಹುದಾಗಿದೆ. ಗುಬ್ಬಿ ತಾಲೂಕಿನ ಹಾಗಲವಾಡಿ ಕೆರೆಗೆ ನೀರು ಹರಿಸಲು ನಾಲ್ಕು ಕಿಲೋ ಮೀಟರ್ ನಾಲೆ ಮಾಡಬೇಕಾಗಿರುವುದರಿಂದ ಪೈಪ್ ಲೈನ್ ಮಾಡಲು ಸೂಚಿಸಲಾಗಿದೆ ಎಂದರು.

      ಪಾವಗಡ ಶಾಸಕ ವೆಂಕಟರಮಣಪ್ಪ ಮಾತನಾಡಿ, ಬರಪೀಡಿತವಾದ ಪಾವಗಡ ತಾಲ್ಲೂಕಿಗೆ ನೀರಾವರಿ ನೀರಿನ ಮೂಲಗಳು ಇಲ್ಲ. ಹಾಗಾಗಿ ಪಾವಗಡ ತಾಲೂಕಿಗೆ ಆದ್ಯತೆ ಮೇರೆಗೆ ನೀರಿನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು. ಸಚಿವರು ಪ್ರತಿಕ್ರಿಯಿಸಿ ತುಂಗಭದ್ರ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ನೀರಿನ ಹಂಚಿಕೆಯನ್ನು ಕೆರೆಗಳ ವಿಸ್ತೀರ್ಣದ ಆಧಾರದ ಮೇಲೆ ಮಾಡಲಾಗಿದ್ದು, ಅದರಂತೆ 38 ಕೆರೆಗಳಿಗೆ ನೀರು ಹರಿಸಲು ಯೋಜಿಸಲಾಗಿದೆ. ಶೀಘ್ರದಲ್ಲೇ ಪಾವಗಡಕ್ಕೆ ಭೇಟಿ ನೀಡುವೆ ಎಂದರು.

      ಶಿರಾ ಶಾಸಕ ರಾಜೇಶ್ ಗೌಡ ಮಾತನಾಡಿ, ವಿಶೇಷ ಕಾರಣದಿಂದಾಗಿ ಮದಲೂರು ಕೆರೆಗೆ ನೀರು ಹರಿದಿದ್ದು, ಭರ್ತಿ ಮಾಡಲು ಹೆಚ್ಚಿನ ನೀರಿನ ಅಲೋಕೇಷನ್ ಅಗತ್ಯವಿದೆ ಎಂದರು. ಸಚಿವರು ಪ್ರತಿಕ್ರಿಯಸಿ ಭದ್ರ ಮೇಲ್ದಂಡೆ ಯೋಜನೆ ಮೂಲಕ , ಕಳ್ಳಂಬೆಳ್ಳ ತರೂರು ಬ್ರಹ್ಮಸಂದ್ರದ ಕೆರೆಗಳಿಗೆ ನೀರು ಹರಿಸಲಾಗುವುದು. 20 ಕಿಲೋ ಮೀಟರ್ ಒಳಗೆ 12 ಚೆಕ್ ಡ್ಯಾಂಗಳಿವೆ. ಆದ್ದರಿಂದ ಹೇಮಾವತಿಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವುದು ಕಷ್ಟ. ಹಾಗಾಗಿ ಭದ್ರಾ ಮೇಲ್ದಂಡೆಯಿಂದಲೇ ನೀರು ಹರಿಸೋಣ ಎಂದು ಸಚಿವರು ತಿಳಿಸಿದರು.
ಮಧುಗಿರಿ ತಾಲ್ಲೂಕಿನ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಮೂರು ನೀರಾವರಿ ಯೋಜನೆಗಳ ಫಲವಾಗಿ 111 ಕೆರೆಗಳಿಗೆ ನೀರು ಹರಿಸಲು ನಡೆಸಿರುವ ಚಿಂತನೆಗೆ ಧನ್ಯವಾದ. ಹೇಮೆ, ಎತ್ತಿನಹೊಳೆ ಹೊರತು ಪಡಿಸಿದರೆ ಬೇರೆ ನೀರಿನ ಮೂಲಗಳಿಲ್ಲ. ಆದ್ದರಿಂದ ಇನ್ನಷ್ಟು ಕೆರೆಗಳನ್ನು ತುಂಬಿಸುವಂತೆ ಕೇಳಿಕೊಂಡರು.

      ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದ ಭವಿಷ್ಯದ ದೃಷ್ಟಿಯಿಂದ ದಿನವೊಂದಕ್ಕೆ 3 ಎಂಸಿಎಫ್ಟಿ ನೀರನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾರ್ಯನಿರ್ವಹಿಸುತ್ತಿಲ್ಲ, ಆದ್ದರಂದ ಸಿರಾ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ನೀರನ್ನು ಕೆರೆಗಳಿಗೆ ತುಂಬಿಸಲಿ. ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳು ಬೇಡ. ಕೆರೆಗಳಿಗೆ ನೀರು ತುಂಬಿಸಿದರೆ ಕೊಳವೆಬಾವಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ನಿರ್ದೇಶಿಸಿದರು.

      ಸಭೆಯಲ್ಲಿ ಸಣ್ಣ ನೀರಾವರಿ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್‍ಪಿ ಕೆ. ವಂಶಿಕೃಷ್ಣ,, ಮಹಾದೇವ ಸೇರಿದಂತೆ ಮೂರು ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‍ಗಳು, ಮಾಜಿ ಸಚಿವ ಶಿವಣ್ಣ, ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ರೈತ ಮುಖಂಡರು ಹಾಜರಿದ್ದರು.

      ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ 15ನೇ ಹಣಕಾಸಿನಡಿ ಶೇ.50ರಷ್ಟು ಹಣವನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಕ್ರಿಯಾಯೋಜನೆ ಸಲ್ಲಿಸಿದರೆ ಅನುಮೋದಿಸಲಾಗುವುದು. ಪಂಪ್‍ಮೋಟಾರ್ ದುರಸ್ಥಿ, ಕೊಳವೆ ಬಾವಿ ಪುನರಜ್ಜೀವನ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು.

-ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರು.

 
ಗ್ರಾಮಾಂತರದ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಮಾತನಾಡಿ, ತಾವೂ ಈ ಹಿಂದೆ ಸಚಿವ ಮಾಧುಸ್ವಾಮಿ ಅವರಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಗ್ರಾಮಾಂತರ ಕ್ಷೇತ್ರದ 11 ಕೆರೆಗಳಿಗೆ ವೃಷಭಾವತಿ ಕಣಿವೆಯ ಸಂಸ್ಕರಿತ ನೀರನ್ನು ಹರಿಸಲು ಬಜೆಟ್‍ನಲ್ಲಿ ಘೋಷಿಸಿರುವುದಕ್ಕೆ ಸಚಿವರಿಗೆ ಅಭಿನಂದಿಸುತ್ತೇನೆ.ಈ ನೀರನ್ನು ತಾಲೂಕಿನ ಇನ್ನೂ 10 ಕೆರೆಗಳಿಗೆ ಹರಿಸಬೇಕು. ಗೂಳೂರು ಹಾಗೂ ಬೆಳ್ಳಾವಿ ಕೆರೆಗಳಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು.ಹಿಂದೆ ಮಾಡಲಾದ 55ಕೋಟಿ ಮೊತ್ತದ ಬಹುಗ್ರಾಮ ಕುಡಿಯವ ನೀರಿನ ಯೋಜನೆಯಡಿ ನೀರೆ ಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಸಚಿವರು ಪ್ರತಿಕ್ರಿಯಿಸಿ ಬೆಳ್ಳಾವಿ ಕೆರೆಗೆ ಮೂರು ಎಂಸಿಎಫ್‍ಟಿ ನೀರು ಹರಿಸಲಾಗುತ್ತಿದ್ದು, ಹೆಸರಿಗಷ್ಟೇ ಹಂಚಿಕೆ ಎನ್ನುವಂತಾಗಿದೆ. ಹಾಗಾಗಿ ಬೆಳ್ಳಾವಿ ಮತ್ತು ಗೂಳೂರು ಹೋಬಳಿಯ ಕೆರೆಗಳನ್ನು ಶೇ.50ರಷ್ಟು ತುಂಬಿಸಬೇಕು. ಹೇಮಾವತಿಯಿಂದ ನೀರು ಹರಿಸಲು ಆಗದ ಕೆರೆಗಳಿಗೆ ಎತ್ತಿನಹೊಳೆ ಮೂಲಕ ನೀರು ಹರಿಸುತ್ತೇವೆ. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕೊಡಿ ಎಂದು ಹೇಮಾವತಿ ಅಧಿಕಾರಿಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap