ಕೋವಿಡ್ ನಡುವೆ ಪದವಿ ಕಾಲೇಜುಗಳ ಆರಂಭ : ವಿದ್ಯಾರ್ಥಿಗಳ ನೀರಸ ಸ್ಪಂದನ!!

ತುಮಕೂರು :

      ಪದವಿ ಕಾಲೇಜುಗಳ ಆರಂಭಕ್ಕೆ ವಿಶ್ವವಿದ್ಯಾಲಯ ಅನುಮತಿ ನೀಡಿದ ಮೊದಲ ದಿನ ಮಂಗಳವಾರ ನಗರದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೀರಸ ಸ್ಪಂದನ ವ್ಯಕ್ತವಾಯಿತು. ಬಹುತೇಕ ಕಾಲೇಜುಗಳಿಗೆ ಮೊದಲ ದಿನ ಬೆರಳೆಣಿಕೆಯ ವಿದ್ಯಾರ್ಥಿಗಳು ಬಂದಿದ್ದರು. ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಲ್ಲದ ಕಾರಣ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯೊಂದಿಗೆ ಬರುವಂತೆ ಕೆಲ ಕಾಲೇಜುಗಳಲ್ಲಿ ಸಿಬ್ಬಂದಿ ವಾಪಸ್ ಕಳಿಸಿದರು.

      ಹೀಗಾಗಿ, ಮೊದಲ ದಿನ ಕಾಲೇಜುಗಳಲ್ಲಿ ತರಗತಿಗಳು ನಡೆದ ವರದಿಗಳಿಲ್ಲ. ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ತಡೆ ಮಾರ್ಗಸೂಚಿಗಳನ್ನು ಅನುಸರಿಸಿ ಮಂಗಳವಾರದಿಂದ ಆಫ್‍ಲೈನ್ ಬೋಧನೆ ಆರಂಭಿಸಲು ಸರ್ಕಾರ ಆದೇಶ ಮಾಡಿತ್ತು.

      ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ನ ನೆಗೆಟಿವ್ ವರದಿ, ಪೋಷಕರ ಅನುಮತಿ ಪತ್ರ ನೀಡಬೇಕು, ಮಾಸ್ಕ್ ಧರಿಸಬೇಕು, ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಬೇಕು, ಸ್ಯಾನಿಟೈಸರ್‍ನಲ್ಲಿ ಕೈ ತೊಳೆಯಲು ಅವಕಾಶ ಮಾಡಬೇಕು ಎಂದೆಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲು ಸರ್ಕಾರ ಸೂಚಿಸಿದ್ದರೂ ಕೆಲ ಕಾಲೇಜುಗಳಲ್ಲಿ ಇಂತಹ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ.

      ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸಿದ್ದಗಂಗಾ ಪದವಿ ಕಾಲೇಜು, ಸಿದ್ದಗಂಗಾ ಡಿಪ್ಲೋಮಾ ಕಾಲೇಜು ಸೇರಿದಂತೆ ನಗರದ ವಿವಿಧ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಡಿಪೆÇ್ಲೀಮಾ ಕಾಲೇಜುಗಳಲ್ಲಿ ತರಗತಿಗಳು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟು ಪಾಲನೆಯೊಂದಿಗೆ ತರಗತಿಗಳನ್ನು ಆರಂಭಿಸಲು ಸಿದ್ಧವಾಗಿದ್ದರೂ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಕಂಡು ಬಂದಿತ್ತು.

      ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿತ್ತು. ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಜಗದೀಶ್ ಹೇಳಿದರು.

      ಕಾಲೇಜಿನ ಅಂತಿಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ, ಬಿಸಿಎ ವಿಭಾಗಗಳಲ್ಲಿ 1020 ವಿದ್ಯಾರ್ಥಿಗಳಿದ್ದ ಮೊದಲ ದಿನ ಕೇವಲ 15-20 ವಿದ್ಯಾರ್ಥಿಗಳು ಬಂದಿದ್ದರು. ಇವರಲ್ಲಿ ಕೋವಿಡ್ ಟೆಸ್ಟ್ ವರದಿ ನೀಡದವರನ್ನು ಟೆಸ್ಟ್ ಮಾಡಿಸಿ ವರದಿ ತರುವಂತೆ ಕಳುಹಿಸಲಾಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲು ಶಿಬಿರ ನಡೆಸುವಂತೆ ತಾವು ಡಿಹೆಚ್‍ಓ ಅವರನ್ನು ಕೋರಿಕೊಂಡಿದ್ದು, ಬುಧವಾರ ಟೆಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಪ್ರಾಂಶುಪಾಲರು, ಕಾಲೇಜಿನ ಎಲ್ಲಾ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿ ವರದಿ ನೀಡಬೇಕೆಂದು ಸೂಚಿಸಲಾಗಿದೆ, ಎಲ್ಲವೃಉ ಟೆಸ್ಟ್ ಮಾಡಿಸಿದ್ದಾರೆ, ತಾವೂ ಟೆಸ್ಟ್ ಮಾಡಿಸಿ, ನೆಗೆಟಿವ್ ವರದಿ ಹೊಂದಿರುವುದಾಗಿ ಪ್ರೊ.ಕೆ.ಎಸ್.ಜಗದೀಶ್ ತಮ್ಮ ಟೆಸ್ಟ್ ವರದಿ ಪ್ರದರ್ಶಿಸಿದರು.

      ಅಂತಮ ಪದವಿ ವಿದ್ಯಾರ್ಥಿಗಳಿಗೆ ಆಫ್‍ಲೈನ್ ಬೋಧನೆ ಆರಂಭವಾಗಿದ್ದರೂ, ಹಾಜರಾತಿ ಕಡ್ಡಾಯವಿಲ್ಲ. ಅವರು ಆಫ್‍ಲೈನ್ ಬದಲು ಆನ್‍ಲೈನ್ ಬೋಧನೆ ಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಹಾಗೇ, ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಆನ್‍ಲೈನ್ ಬೋಧನೆ ಆರಂಭವಾಗಿದೆ, ಈ ನಡುವೆ ವಾರ ಆದಮೇಲೆ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಭೇಟಿ ಮಾಡಿ ಪಠ್ಯ ಸಂಬಂಧಿ ತಮ್ಮ ಅನುಮಾನ ಬಗೆಹರಿಸಿಕೊಳ್ಳಲು ಕಾಂಟ್ಯಾಕ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

      ಆದರೆ ಬಹುತೇಕ ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಇನ್ನೂ ಮನಸ್ಸು ಮಾಡಿದಂತಿಲ್ಲ. ಬೆರಳೆಣಿಕೆಯಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ ಕಾಲೇಜುಗಳತ್ತ ಮುಖ ಮಾಡಿದ್ದು, ಬಹುತೇಕ ವಿದ್ಯಾರ್ಥಿಗಳು ಇನ್ನು ಕಾಲೇಜುಗಳಿಗೆ ಬರುವ ಮನಸ್ಸು ಮಾಡಿಲ್ಲ.

      ಬೆಳಿಗ್ಗೆ 8.30ಕ್ಕೆ ಕೆಲ ಕಾಲೇಜುಗಳು ಆರಂಭವಾಗುವ ಮುನ್ನೂಚನೆಯ ವೇಳಾಪಟ್ಟಿಯನ್ನು ನೋಟಿಸ್ ಬೋರ್ಡ್‍ನಲ್ಲಿ ಹಾಕಲಾಗಿದೆ. ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಎಸ್.ಎಂ.ಎಸ್. ಮೂಲಕ ಸಂದೇಶ ಕಳುಹಿಸಲಾಗಿದೆ. ಆದರೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ವಿರಳವಾಗಿದೆ.

      ತುಮಕೂರು ವಿ.ವಿ. ಕುಲಪತಿ ಪ್ರೊ|| ಸಿದ್ದೇಗೌಡ ಅವರು ಪ್ರತಿಕ್ರಿಯಿಸಿ, ಕೋವಿಡ್ ಇದ್ದರೂ ಸರ್ಕಾರ ಮತ್ತು ಯುಜಿಸಿ ಮಾರ್ಗಸೂಚಿ ಅನುಸರಿಸಿ ಕಾಲೇಜುಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ. ಹಾಗಾಗಿ ಎಸ್‍ಒಪಿ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲೇಜು ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೊರೊನಾ ನೆಗೆಟಿವ್ ವರದಿ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಟಾಸ್ಕ್‍ಫೋರ್ಸ್ ರಚಿಸಲಾಗಿದೆ ಎಂದರು.

      ಕಾಲೇಜಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

      ಎಲ್ಲ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರೆ ಹಂತ ಹಂತವಾಗಿ ಹಾಸ್ಟೆಲ್ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.
ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಕೆ.ಸಿ. ಜಯಸ್ವಾಮಿ ಮಾತನಾಡಿ, ನ. 17 ರಿಂದ ಪದವಿ ಆಫ್‍ಲೈನ್ ಕಾಲೇಜು ಪುನರಾರಂಭ ಮಾಡುವಂತೆ ಸರ್ಕಾರ ಆದೇಶ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಪೋಷಕರಿಂದ ದೃಢೀಕರಣ ಪತ್ರ ಮತ್ತು ಕೊರೊನಾ ನೆಗೆಟಿವ್ ವರದಿ ತರುವಂತೆ ತಿಳಿಸಲಾಗಿದೆ. ಹಾಗಾಗಿ ಈ ವಿಚಾರದಲ್ಲಿ ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದಾರೆ ಎಂಬುದು ತಿಳಿದು ಬರುತ್ತಿದೆ ಎಂದರು.

      ಈ ವಾರದಲ್ಲಿ 2-3 ದಿನ ವಿದ್ಯಾರ್ಥಿಗಳ ಬರುವಿಕೆಗಾಗಿ ಕಾಯುತ್ತೇನೆ. ಸರ್ಕಾರದ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಪ್ರತಿದಿನ ತರಗತಿಗಳು ಮುಗಿದ ನಂತರ ಸ್ಯಾನಿಟೈಸ್ ಮಾಡಲು ಸಹ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

      ಸರ್ಕಾರ ಪದವಿ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ಸಂಬಂಧ ಕಾಲೇಜುಗಳಲ್ಲಿ ಅನುಸರಿಸಬೇಕಾದ ಸಿದ್ಧತೆಗಳ ಬಗ್ಗೆ ತುಮಕೂರು ವಿವಿ ಕುಲಪತಿಗಳು ಸೂಕ್ತ ನಿರ್ದೇಶನ ನೀಡಿಲ್ಲ. ಸಿದ್ಧತೆ ಮಾಡಿಕೊಳ್ಳಲು ಕಾಲೇಜುಗಳಿಗೆ ಕಾಲಾವಕಾಶ ನೀಡಬೇಕಾಗಿತ್ತು ಎಂದು ತುಮಕೂರು ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜು ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಾ. ಹಾಲನೂರ್ ಎಸ್.ಲೇಪಾಕ್ಷ್ ಹೇಳಿದರು.

      ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಎಲ್ಲಿ ಮಾಡಿಸಬೇಕು, ಕಾಲೇಜುಗಳಲ್ಲಿ ಟೆಸ್ಟ್ ಮಾಡಿಸಲು ಅವಕಾಶ ಮಾಡಲಾಗಿದೆಯೆ, ಥರ್ಮಲ್ ಸ್ಕ್ಯಾನಿಂಗ್ ಮಾಡಲು ಕಾಲೇಜುಗಳಿಗೆ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆಯೆ, ಸ್ಯಾನಿಟೈಸರ್ ಅನ್ನು ಸರ್ಕಾರ ಪೂರೈಸುತ್ತದೆಯೇ ಇಲ್ಲವೆ, ಕಾಲೇಜು ಆಡಳಿತ ಮಂಡಳಿಗಳು ಒದಗಿಸಬೇಕೆ ಎಂಬ ಬಗ್ಗೆ ಕಾಲೇಜುಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿಲ್ಲ, ಕುಲಪತಿಗಳು ಈ ಸಂಬಂಧ ಪ್ರಾಂಶುಪಾಲರ ಸಭೆ ನಡೆಸಿ ಮಾರ್ಗದರ್ಶನ ನೀಡಿ, ಅವರ ಅನುಮಾನ, ಬೇಡಿಕೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಾಗಿತ್ತು ಎಂದು ಹೇಳಿದರು.

      ಪದವಿ ಕಾಲೇಜುಗಳಲ್ಲಿ ತರಗತಿ ಆರಂಭಿಸಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ, ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಸಹಕಾರಿಯಾಗಿದೆ. ಆದರೆ, ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆಯೆ ಎಂಬುದನು ಪರಿಶೀಲಿಸಬೇಕು ಎಂದು ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಹೇಳಿದರು.

     ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಲು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ನ ನೆಗೆಟಿವ್ ವರದಿ ನೀಡಬೇಕಾಗಿರುವುದರಿಂದ ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಫೀವರ್ ಕ್ಲಿನಿಕ್‍ಗಳ ಮುಂದೆ ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ಸಾವಿರಾರು ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಬೇಕಾಗಿರುವುದರಿಂದ ಒಂದೇ ದಿನ ಎಲ್ಲರೂ ಟೆಸ್ಟ್ ಮಾಡಿಸಲು ಸಾದ್ಯವಾಗಲಿಲ್ಲ. ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಅನೇಕ ವಿದ್ಯಾರ್ಥಿಗಳು ಒತ್ತಾಯ ಮಾಡಿದರು.

      ಸರ್ಕಾರ ಮತ್ತು ಯುಜಿಸಿ ಮಾರ್ಗಸೂಚಿ ಅನುಸರಿಸಿ ಪದವಿ ಕಾಲೇಜುಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ. ಹಾಗಾಗಿ ಎಸ್‍ಒಪಿ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲೇಜು ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೊರೊನಾ ನೆಗೆಟಿವ್ ವರದಿ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾಲೇಜಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ.

-ಪ್ರೊ.ಸಿದ್ದೇಗೌಡ, ಕುಲಪತಿ, ತುಮಕೂರು ವಿವಿ.

      ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲು ಶಿಬಿರ ನಡೆಸುವಂತೆ ತಾವು ಡಿಹೆಚ್‍ಓ ಅವರನ್ನು ಕೋರಿಕೊಂಡಿದ್ದು, ಬುಧವಾರ ಟೆಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಪ್ರಾಂಶುಪಾಲರು, ಕಾಲೇಜಿನ ಎಲ್ಲಾ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿ ವರದಿ ನೀಡಬೇಕೆಂದು ಸೂಚಿಸಲಾಗಿದೆ, ಎಲ್ಲರೂ ಟೆಸ್ಟ್ ಮಾಡಿಸಿದ್ದಾರೆ.

-ಪ್ರೊ.ಕೆ.ಎಸ್.ಜಗದೀಶ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.

      ಸರ್ಕಾರ ಪದವಿ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ಸಂಬಂಧ ಕಾಲೇಜುಗಳಲ್ಲಿ ಅನುಸರಿಸಬೇಕಾದ ಸಿದ್ಧತೆಗಳ ಬಗ್ಗೆ ತುಮಕೂರು ವಿವಿ ಕುಲಪತಿಗಳು ಸೂಕ್ತ ನಿರ್ದೇಶನ ನೀಡಿಲ್ಲ. ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಎಲ್ಲಿ ಮಾಡಿಸಬೇಕು, ಕಾಲೇಜುಗಳಲ್ಲಿ ಟೆಸ್ಟ್ ಮಾಡಿಸಲು ಅವಕಾಶ ಮಾಡಲಾಗಿದೆಯೆ, ಥರ್ಮಲ್ ಸ್ಕ್ಯಾನಿಂಗ್ ಮಾಡಲು ಕಾಲೇಜುಗಳಿಗೆ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆಯೆ, ಸ್ಯಾನಿಟೈಸರ್ ಅನ್ನು ಸರ್ಕಾರ ಪೂರೈಸುತ್ತದೆಯೇ ಇಲ್ಲವೆ, ಕಾಲೇಜು ಆಡಳಿತ ಮಂಡಳಿಗಳು ಒದಗಿಸಬೇಕೆ ಎಂಬ ಬಗ್ಗೆ ಕಾಲೇಜುಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿಲ್ಲ.

-ಡಾ. ಹಾಲನೂರ್ ಎಸ್.ಲೇಪಾಕ್ಷ್, ಅಧ್ಯಕ್ಷರು, ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜು ಮಂಡಳಿಗಳ ಒಕ್ಕೂಟ.

 

Recent Articles

spot_img

Related Stories

Share via
Copy link