ತುಮಕೂರು :
ನಗರದ ದಿಬ್ಬೂರು ರಸ್ತೆಯಲ್ಲಿ ಒಳಚರಂಡಿ ನೀರನ್ನು ಕಳೆದ ಎರಡು ತಿಂಗಳಿಂದ ಚರಂಡಿಗೆ ಹರಿಯಬಿಡಲಾಗಿದ್ದು, ಸುತ್ತಮುತ್ತಲಿನ ನಿವಾಸಿಗಳು ದುರ್ನಾತ ಅನುಭವಿಸುವುದರೊಂದಿಗೆ ಕಾಯಿಲೆ ಭೀತಿ ಎದುರಿಸುತ್ತಿದ್ದಾರೆ.
ಗುರುರಾಜ ಸಗಟು ಮಳಿಗೆ ಮುಂಭಾಗದ ರಸ್ತೆಯ ಬಲಭಾಗದಲ್ಲಿರುವ ಚರಂಡಿಗೆ ನೇರವಾಗಿ ಯುಜಿಡಿ ಪೈಪ್ಲೈನ್ ಅಳವಡಿಸಿ, ಕಲುಷಿತ ನೀರು ಬಿಡಲಾಗಿದ್ದು, ಕಳೆದ ಎರಡೂವರೆ ತಿಂಗಳಿಂದ ಕಲುಷಿತ ನೀರು ತೆರೆದ ಚರಂಡಿಯಲ್ಲಿ ಹರಿದುಹೋಗುತ್ತಿದೆ. ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಸ್ಥಳೀಯ ನಿವಾಸಿಗಳು ತೀವ್ರ ದುರ್ನಾಥದಿಂದ ವ್ಯಥೆ ಪಡುವಂತಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದು ನೋಡಿ ಹೋಗಿದ್ದರೂ ಪ್ರಯೋಜನವಾಗಿಲ್ಲ. ಮ್ಯಾನ್ಹೋಲ್ ಸಂಪರ್ಕ ಮುಂದೆ ಕಡಿದಿದ್ದು, ರಸ್ತೆಯ ಮೇಲೆ ಕಲುಷಿತ ನೀರು ನಿಂತುಕೊಳ್ಳುತ್ತಿದ್ದರಿಂದ ಈ ತಾತ್ಕಾಲಿಕ ಕ್ರಮ ಎಂದು ಎರಡೂವರೆ ತಿಂಗಳ ಹಿಂದೆ ಚರಂಡಿಗೆ ಪೈಪ್ಲೈನ್ ಅಳವಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ಹೇಳಿದ್ದು, ಶಾಶ್ವತ ಪರಿಹಾರಕ್ಕೆ ಮುಂದಾಗದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಮುಂದುವರಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ತಾತ್ಕಾಲಿಕ ವ್ಯವಸ್ಥೆ ಎಷ್ಟು ದಿನ?:
ಯುಜಿಡಿ ನೀರು ಹರಿಯಬಿಟ್ಟಿರುವ ಈ ಚರಂಡಿಯ ಪಕ್ಕಕ್ಕೆ ಹೈವೋಲ್ಟೇಜ್ ಗ್ಯಾಸ್ ಪೈಪ್ಲೈನ್ ಸಹ ಹಾದುಹೋಗಿದ್ದು, ಎಚ್ಚರಿಕೆ ಫಲಕವನ್ನು ಹಾಕಲಾಗಿದೆ. ಆದರೂ ತಾತ್ಕಾಲಿಕ ವ್ಯವಸ್ಥೆಯಲ್ಲೇ ಮುಂದುವರಿಸಿದ್ದು, ಈ ಸಮಸ್ಯೆಗೆಕರ್ನಾಟಕ ನಗರ ನೀರು ಸರಬರಾಜು ಮಂಡಳಿಯವರು ಹಾಗೂ ತುಮಕೂರು ಮಹಾನಗರಪಾಲಿಕೆಯವರು ಬೇಗ ಮುಕ್ತಿ ಕಾಣಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಮಂಜಮ್ಮ ಹಾಗೂ ಉದ್ಯಮಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
