ತುಮಕೂರು :
ಜನ ಹೊರಗಿನ ಪ್ರಯಾಣವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಬಸ್ ಪ್ರಯಾಣ ಬಹುತೇಕ ಸ್ಥಗಿತಗೊಂಡಿದೆ. ನಗರ ಪ್ರದೇಶಗಳಿಗೆ ಬಂದು ಹೋಗುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಒಂದು ಕಡೆ ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರದ ಪರಿಣಾಮ ಬಸ್ಗಳ ಅಭಾವ, ಮತ್ತೊಂದು ಕಡೆ ಹೆಚ್ಚುತ್ತಿರುವ ಕೊರೊನಾ ಭೀತಿ ಹೀಗೆ ಒಂದಕ್ಕೊಂದು ಪೂರಕ ಎಂಬಂತೆ ಜನರು ತಮ್ಮ ಬಸ್ ಪ್ರಯಾಣವನ್ನೆ ಕಡಿತಗೊಳಿಸುತ್ತಿದ್ದಾರೆ.
ಪ್ರತಿವರ್ಷ ಯುಗಾದಿ ಹಿಂದೆ ಮುಂದೆ ಬಸ್ಗಳಿಗೆ ವಿಪರೀತ ಡಿಮ್ಯಾಂಡ್ ಇರುತ್ತಿತ್ತು. ಹಬ್ಬ ಹಾಗೂ ಬೇಸಿಗೆಯ ರಜೆಯ ಸಾಲಿನ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಮುನ್ನ ಹಾಗೂ ಆನಂತರದ ಕೆಲವು ದಿನಗಳವರೆಗೆ ಬಸ್ಗಳು ಭರ್ಜರಿ ಭರ್ತಿಯಾಗುತ್ತಿದ್ದವು. ಸೀಟ್ ಭರ್ತಿಯಾಗಿ ನಿಂತು ಹೋಗುವ ಪರಿಸ್ಥಿತಿ ಇತ್ತು. ಈ ಬಾರಿ ಎಲ್ಲಿ ನೋಡಿದರೂ ಜನರ ಪ್ರಯಾಣ ಕ್ಷೀಣಿಸುತ್ತಿದೆ.
ಯುಗಾದಿಗೆ ಒಂದು ವಾರ ಮುನ್ನವೇ ಬಸ್ಗಳು ಬಂದ್ ಆದವು. ಜನರು ಈಗಾಗಲೇ ಬಸ್ಗಳ ಕೊರತೆ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಹೊಂದಿಕೊಂಡು ಬಿಟ್ಟಿದ್ದಾರೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಯಾಣ ಸ್ಥಗಿತಗೊಳಿಸಿದ ರೀತಿಯಲ್ಲಿ ಈಗಲೂ ಜನ ಪ್ರಯಾಣಕ್ಕೆ ಹಿಂಜರಿಯುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಬಸ್ಗಳ ವ್ಯವಸ್ಥೆ ಇಲ್ಲವೆಂದಲ್ಲ. ಖಾಸಗಿ ಹಾಗೂ ಕೆಲವು ಸಾರಿಗೆ ಸಂಸ್ಥೆಯ ವಾಹನಗಳು ಸಂಚಾರಕ್ಕೆ ಅಣಿಯಾಗಿವೆ. ಬಸ್ ನಿಲ್ದಾಣದಲ್ಲಿ ಕನಿಷ್ಠ 5-6 ಬಸ್ಗಳು ಸದಾ ನಿಂತಿರುತ್ತವೆ. ಪ್ರಯಾಣಿಕರು ಬಸ್ಗಳಿಗೆ ಹತ್ತಿದ ನಂತರ ಒಂದೊಂದಾಗಿ ಖಾಲಿಯಾಗುತ್ತಿವೆ. ಇದನ್ನು ಗಮನಿಸಿದರೆ ಬಸ್ಗಳು ಇದ್ದರೂ ಸಹ ಜನರು ಪ್ರಯಾಣದಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ.
ಅನಿವಾರ್ಯ ಹಾಗೂ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕೆಲಸ ಕಾರ್ಯಗಳಿಗೆ ಜನರು ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಕಳೆದ ಒಂದೆರಡು ದಿನಗಳಿಂದ ಕೊರೊನಾ ಎರಡನೆ ಅಲೆ ಭೀಕರತೆಯನ್ನು ಸೃಷ್ಟಿಸಿದೆ. ಅಲ್ಲಲ್ಲಿ ಸಾವುಗಳು ಸಂಭವಿಸುತ್ತಿರುವುದು, ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು, ಮಾಧ್ಯಮಗಳಲ್ಲಿ ಇದೇ ವಿಷಯ ವರದಿಯಾಗುತ್ತಿರುವುದರಿಂದ ಜನರಲ್ಲಿ ಸಹಜವಾಗಿಯೇ ಆತಂಕ ಎದುರಾಗಿದೆ.
ಈಗಾಗಲೇ ತುಮಕೂರು ನಗರದಲ್ಲಿ ರಾತ್ರಿ ಕಫ್ರ್ಯೂ ಜಾರಿಯಾಗಿದೆ. 10 ರಿಂದ ಬೆಳಗಿನ 5 ಗಂಟೆಯ ತನಕ ಬಂದ್ ಆಗಿದ್ದರೂ 9 ಗಂಟೆಗೆಲ್ಲಾ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಜನತೆ ಸ್ವಯಂ ಪ್ರೇರಿತವಾಗಿಯೇ ರಾತ್ರಿ ಕಫ್ರ್ಯೂಗೆ ಸಹಕರಿಸುತ್ತಿದ್ದಾರೆ. 10 ಗಂಟೆಯ ನಂತರವೂ ಸಂಚಾರ ಇರುತ್ತದೆ. ಕಾರು, ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಇದ್ದರೂ ಸಹ ತೀರಾ ವಿರಳ. ಇಂತಹವರೆಲ್ಲ ಅಗತ್ಯ ಸೇವೆಯಲ್ಲಿ ಹಾಗೂ ಅನಿವಾರ್ಯ ಕೆಲಸಗಳಿಗೆ ಹೋಗಿಬರುವವರು ಆಗಿರುತ್ತಾರೆ. ಎಲ್ಲರೂ 10 ಗಂಟೆಯ ಒಳಗೆ ಮನೆ ಸೇರಿಕೊಳ್ಳಬೇಕೆಂಬ ಧಾವಂತ ಇರುವುದರಿಂದ ಹೊರಗಿನ ಊರುಗಳಿಗೆ ಹೋಗಲು ಇಷ್ಟಪಡುತ್ತಿಲ್ಲ.
ಭಯಕ್ಕಿಂತ ಎಚ್ಚರಿಕೆ ಇರಲಿ :
ಅಗತ್ಯ ಮತ್ತು ಅನಿವಾರ್ಯ ಕೆಲಸ ಕಾರ್ಯಗಳಿಗಾಗಿ ಜನ ಓಡಾಡುತ್ತಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ನಿನ್ನೆ ಭಾನುವಾರದ ದಿನ ಇಡೀ ತುಮಕೂರು ನಗರ ಒಂದು ರೀತಿ ಬಿಕೋ ಎನ್ನುತ್ತಿತ್ತು. ಕೆಲವು ಅಂಗಡಿಗಳು ತೆರೆದಿದ್ದವಾದರೂ ಸಹ ಗ್ರಾಹಕರ ಬರುವಿಕೆಯ ಸಂಖ್ಯೆ ತೀರಾ ವಿರಳವಾಗಿತ್ತು. ಜನರಲ್ಲಿ ಭಯವಂತೂ ಇದೆ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಅಂತರ ಕಾಪಾಡಿಕೊಳ್ಳುವ ಕನಿಷ್ಠ ಎಚ್ಚರಿಕೆಗಳನ್ನು ಸಾರ್ವಜನಿಕರು ಪಾಲಿಸಲೇಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
