ತುಮಕೂರು:
ನಗರದ ಬಿ.ಎಚ್.ರಸ್ತೆಯ ರಸ್ತೆ ವಿಭಜಕದ ಮಧ್ಯೆ ಹಾಕಲಾಗಿದ್ದ ಗಿಡಗಳನ್ನು ಸದ್ದಿಲ್ಲದಂತೆ ಕಿತ್ತು ಹಾಕಿರುವ ಘಟನೆ ನಡೆದಿದೆ.
ನಗರದ ಸೌಂದರ್ಯಕರಣಕ್ಕಾಗಿ ರಸ್ತೆ ಮಧ್ಯದ ವಿಭಜಕದ ಭಾಗದಲ್ಲಿ ಕಳೆದ ಮೂರು ವರ್ಷಗಳ ಸಮಯದಲ್ಲಿ ಗಿಡಗಳನ್ನು ಹಾಕಲಾಗಿತ್ತು. ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಈ ಗಿಡಗಳನ್ನು ಹಾಕಲಾಗಿತ್ತೆಂದು ಹೇಳಲಾಗಿದೆ. ಕೊರೊನಾ ಕಫ್ರ್ಯೂ ಇರುವ ಈ ಸಂದರ್ಭದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಈ ಗಿಡಗಳನ್ನು ಕಿತ್ತು ಹಾಕಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಟವಾಡಿಯಿಂದ ಶಿವಕುಮಾರಸ್ವಾಮಿಜಿ ಸರ್ಕಲ್ ವರೆಗೆ ಬರುವ ಮುಖ್ಯ ರಸ್ತೆಯಲ್ಲಿ ಹಲವು ಗಿಡಗಳನ್ನು ಕಿತ್ತು ಹಾಕಿರುತ್ತಾರೆ. ಮಹಾನಗರ ಪಾಲಿಕೆ ವತಿಯಿಂದ ಈ ಗಿಡಗಳನ್ನು ಕಿತ್ತು ಹಾಕಿರುವುದಾಗಿ ಹೇಳಲಾಗುತ್ತಿದ್ದು, ಇಲ್ಲಿ ಪೈಪ್ ಅಳವಡಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಆದರೆ ಈಗಾಗಲೇ ಬೆಳೆಯುತ್ತಿರುವ ಗಿಡಗಳನ್ನು ಕಿತ್ತು ಹಾಕಿ ಮಾಡುವ ಸಾಧನೆಯಾದರೂ ಏನು ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.
ಇದೀಗ ಕೊರೊನಾ ಸಂಕಷ್ಟದ ಕಾಲ ಎಲ್ಲೆಲ್ಲಿಯೂ ಆಕ್ಸಿಜನ್ಗೆ ಕೊರತೆ ಉಂಟಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಆಮ್ಲಜನಕಕ್ಕಾಗಿ ಹಾಹಾಕಾರ ಇದೆ. ಇಂತಹ ಸಮಯದಲ್ಲಿ ಹಸಿರು ಸಂಪತ್ತನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ಕಿತ್ತು ಹಾಕಿರುವುದು ಸರಿಯೇ ಎಂಬ ಆಕ್ರೋಶ ಹೊರಬಿದ್ದಿದೆ.
ಮೂರು ವರ್ಷಗಳಿಂದ ಈ ಭಾಗದಲ್ಲಿ ಸಾಕಿರುವ ವಿವಿಧ ರೀತಿಯ ಗಿಡಗಳಿಗೆ ಜಗದೀಶ್ ಮತ್ತಿತರರು ನೀರು ಹಾಯಿಸುತ್ತಾ ಬಂದಿದ್ದರು. ಮಕ್ಕಳಂತೆ ಆ ಗಿಡಗಳನ್ನು ಕಾಪಾಡುತ್ತಾ ಬಂದಿದ್ದಾರೆ. ಸ್ಮಾರ್ಟ್ಸಿಟಿಯಾಗುತ್ತಿರುವ ಈ ನಗರದಲ್ಲಿ ರಸ್ತೆಯ ಸೌಂದರ್ಯಕ್ಕೆ ಇದು ಮೆರುಗು ನೀಡುತ್ತಿತ್ತು. ಆದರೆ ದಿಢೀರ್ ಎಂದು ಗಿಡಗಳ ಬುಡಕ್ಕೆ ಕೊಡಲಿ ಏಟು ಹಾಕಿರುವುದು ಅಕ್ಷಮ್ಯ ಎಂದು ಕೆಲವರು ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/05/IMG-20210502-WA0111-e1620025913798.jpg)