ಶಿರಾ:
ಜಿಲ್ಲೆಯಲ್ಲಿ ಯಾವುದೇ ಸಣ್ಣ ಪುಟ್ಟ ಘಟನೆಗಳು, ಪ್ರಕರಣಗಳು ಸೇರಿದಂತೆ ಹತ್ತು ಹಲವು ವಿಚಾರಗಳ ಪರಿಗಣನೆಯಲ್ಲಿ ಶಿರಾ ತನ್ನ ಪ್ರಥಮ ಆದ್ಯತೆಯನ್ನು ಮಾತ್ರ ಸದಾ ಕಾಯ್ದುಕೊಂಡೆ ಬರುತ್ತಿದೆ.
ಜಿಲ್ಲೆಯಲ್ಲಿ ಒಂದಿಷ್ಟು ಸಾರ್ಥಕತೆಯ ಕೆಲಸಗಳನ್ನಾಗಲಿ ಇಲ್ಲವೆ ಕ್ಷೇತ್ರದ ಮಹಾಪೂರ ಅನುದಾನದ ಅಭಿವೃದ್ಧಿ ಕೆಲಸಗಳನ್ನಾಗಲಿ ಅಥವಾ ಅಹಿತಕರ ಘಟನೆಗಳಿಗಾಗಲಿ ಶಿರಾ ಕ್ಷೇತ್ರವು ಸದಾ ಒಂದು ಹೆಜ್ಜೆ ಮುಂದೆ ತನ್ನ ತನವನ್ನು ನಮಗರಿವಿಲ್ಲದಂತೆಯೇ ಕಾಯ್ದುಕೊಂಡು ಬರುತ್ತಲೇ ಇದೆ.
ಈ ದೆಸೆಯಲ್ಲಿ ಕೋವಿಡ್ ಸೋಂಕಿನ ಹರಡುವಿಕೆಯಲ್ಲೂ ರಾಜ್ಯದಲ್ಲಿ ಜಿಲ್ಲೆಯ ಶಿರಾ ಕೂಡ 2ನೇ ಹಂತದ ಕೋವಿಡ್ ಸೋಂಕು ಪಸರಿಸುವಲ್ಲಿಯೂ ಹಿಂದೆ ಬಿದ್ದಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸವೇ ಸರಿ. ಮಹಾಮಾರಿಯ ಕಾಟ ದೇಶವನ್ನೇ ಬಿಟ್ಟಿಲ್ಲ ಎಂಬುದು ಎಷ್ಟು ಕಟು ಸತ್ಯವೋ ಇದೀಗ ಎರಡನೇ ಹಂತದಲ್ಲೂ ಕೋವಿಡ್ ಶಿರಾ ನಗರವನ್ನಷ್ಟೇ ಅಲ್ಲದೆ ಬರಪೀಡಿತ ಗ್ರಾಮಗಳಿಗೆ ಹರಡಿಕೊಂಡು ಕೂತಿದೆ.
ಛಳಿ, ಮಳೆಯನ್ನದೆ ಬಾರದ ಮಳೆ, ಕೈತುಂಬಾ ಲಭ್ಯವಾಗದ ಬೆಳೆಯ ಸಂದರ್ಭಗಳಲ್ಲೂ ಜಗ್ಗದೆ-ಕುಗ್ಗದೆ ಇದ್ದ ಶಿರಾ ಭಾಗದ ಗ್ರಾಮೀಣ ಜನತೆ ಈ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ಶಿರಾ ನಗರಕ್ಕಿಂತಲೂ ಹೆಚ್ಚಾಗಿ ತಾಲ್ಲೂಕಿನ ಗೌಡಗೆರೆ, ಹುಲಿಕುಂಟೆ, ಹೊಸಹಳ್ಳಿ, ಕಳ್ಳಂಬೆಳ್ಳ, ಮದಲೂರು, ಹುಳಿಗೆರೆ, ಭೂವನಹಳ್ಳಿ, ಪಂಜಿಗಾನಹಳ್ಳಿ ಹಾಗೂ ಬುಕ್ಕಾಪಟ್ಟಣ ಭಾಗಗಳ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗುತ್ತಿದ್ದು ಹಳ್ಳಿಗಳ ಜನ ತತ್ತರಿಸಿ ಹೋಗಿದ್ದಾರೆ.
ನಿನ್ನೆ ಇದ್ದವರು ಇಂದಿಲ್ಲ, ಸಂಜೆ ಇದ್ದವ ಬೆಳಗ್ಗೆ ಇಲ್ಲ ಎಂಬಂತೆ ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಸೋಂಕಿತರು ಸನಿಹದಲ್ಲಿಯೇ ಇದ್ದರೂ ಅರಿವಾಗದಂತಹ ಸ್ಥಿತಿ ಶಿರಾ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿದೆ.
ಶಿರಾ ನಗರದ ತಾಯಿ-ಮಗು ಆಸ್ಪತ್ರೆಯಲ್ಲಷ್ಟೇ ಆರಂಭದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿತ್ತಾದರೂ ಇದೀಗ ಕೋವಿಡ್ ಸೆಂಟರ್ಗಳನ್ನು ಅನಿವಾರ್ಯವಾಗಿ ಹೆಚ್ಚಿಸುವಂತಹ ಸ್ಥಿತಿ ಬಂದೊದಗಿದೆ. ನಗರದ ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ನಿಲಯ, ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಜ್ಯೋತಿ ನಗರದ ವಿದ್ಯಾರ್ಥಿ ನಿಲಯ ಸೇರಿದಂತೆ ನಗರ ವ್ಯಾಪ್ತಿಯಲ್ಲೂ ಕೆಲ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಲಾಗಿದೆ.
ಗ್ರಾಮೀಣ ಭಾಗದ ಕೋವಿಡ್ ಸೋಂಕಿತರನ್ನು ನಗರದ ಕೋವಿಡ್ ಕೇರ್ ಸೆಂಟರ್ಗಳಿಗೆ ಕರೆ ತಂದು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ಗೆ ಬಾರದೆ ಪಟ್ಟು ಹಿಡಿದು ಮನೆಯಲ್ಲಿಯೇ ಹೋಂ ಕ್ವಾರಂಟೇನ್ ಆದವರ ಮನವೊಲಿಸಿ ಕೇರ್ ಸೆಂಟರ್ಗೆ ತರುವ ಕೆಲಸವನ್ನು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ತಾಲ್ಲೂಕು ಆಡಳಿತದೊಟ್ಟಿಗೆ ಮಾಡುತ್ತಿದ್ದಾರೆ. ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಆ್ಯಕ್ಸಿಜನ್ ಉತ್ಪಾದನಾ ಸಾಂದ್ರಕಗಳನ್ನು ಸರ್ಕಾರಿ ಆಸ್ಪತ್ರೆಗೆ ನೀಡುವುದರ ಜೊತೆಗೆ ದಾನಿಗಳಿಂದಲೂ ಆಮ್ಲಜನಕ ಸಾಂದ್ರಕಗಳನ್ನು ಆಸ್ಪತ್ರೆಗೆ ಉಚಿತವಾಗಿ ಬರಮಾಡಿಕೊಳ್ಳುತ್ತಿರುವುದು ಒಂದೆಡೆಯಾದರೆ, ಸುಮಾರು 1 ಕೋಟಿ ರೂ. ವೆಚ್ಚದ ಆ್ಯಕ್ಸಿಜನ್ ಉತ್ಪಾದಕ ಘಟಕದ ಸ್ಥಾಪನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ.
ಬಿಜೆಪಿ ಪಕ್ಷದಿಂದ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಅನೇಕ ಯುವಕರು ಈ ಸಹಾಯವಾಣಿಯಲ್ಲಿ ತಮ್ಮದೇ ಆದ ಕರ್ತವ್ಯದಲ್ಲಿ ತೊಡಗಿದ್ದಾರೆ. ಈ ಪಕ್ಷದ ಸಹಾಯವಾಣಿಯ ದೂರವಾಣಿ ಸಂಖ್ಯೆಗಳನ್ನು ಕೂಡ ಸಾರ್ವಜನಿಕವಾಗಿ ಪ್ರಕಟಿಸಿದ್ದು, ರೋಗಿಗಳು ಈ ಸಹಾಯವಾಣಿಗಳ ಸೌಲಭ್ಯಗಳನ್ನೂ ಪಡೆಯುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಪ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ನಿರ್ವಹಣೆಗಾಗಿ ಉಚಿತ ಆ್ಯಂಬ್ಯುಲೆನ್ಸ್ ನೀಡಿರುವುದು, 1.5 ಲಕ್ಷ ರೂ. ವೆಚ್ಚದ ಕೋವಿಡ್ ಔಷಧಿಗಳನ್ನು ತಾಲ್ಲೂಕಿನ ಪಿ.ಹೆಚ್.ಸಿ.ಗಳಿಗೆ ಉಚಿತವಾಗಿ ನೀಡಿರುವುದು ಶ್ಲಾಘನಾರ್ಹವಾಗಿದ್ದು, ಮಾಜಿ ಸಚಿವ ಬಿ.ಸತ್ಯನಾರಾಯಣ್ ಅವರ ಪುತ್ರ ಬಿ.ಸತ್ಯಪ್ರಕಾಶ್, ರಂಗರಾಜು ಹಾಗೂ ಧರಣಿಕುಮಾರ್ ನೇತೃತ್ವದ ಮಾನವ ಬಂಧುತ್ವ ವೇದಿಕೆ ಸೇರಿದಂತೆ ಬಿ.ಜೆ.ಪಿ. ಪಕ್ಷದ ಸಹಾಯವಾಣಿಗಳು ದಿನ ನಿತ್ಯ ಕೋವಿಡ್ ರೋಗಿಗಳು ಮತ್ತು ನಿರಾಶ್ರಿತರಿಗೆ ಆಹಾರ ಪೂರೈಕೆ ಮಾಡುತ್ತಿರುವುದು ನಿಜಕ್ಕೂ ಸ್ತುತ್ತ್ಯಾರ್ಹವೇ ಸರಿ.
ಕೋವಿಡ್ ಸೋಂಕಿನ ಎರಡನೇ ಅಲೆಯ ಅಬ್ಬರದಿಂದ ಶಿರಾ ಭಾಗದ ರೋಗಿಗಳು, ಜನ ಸಾಮಾನ್ಯರು ನಲುಗಿ ಹೋಗಿರುವುದಂತೂ ಅಕ್ಷರಶಃ ಸತ್ಯವಾಗಿದ್ದು, ಮೃತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಮೃತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ತಾಲ್ಲೂಕು ಆಡಳಿತ ನೀಡುತ್ತಿರುವ ಸಾವಿನ ಪ್ರಮಾಣದ ಅಂಕಿ-ಅಂಶಗಳು ಮಾತ್ರ ಜನ ಸಾಮಾನ್ಯರ ತಲೆ ಕೆಡಿಸಿದೆ.
ಕೋವಿಡ್ನಿಂದ ಮೃತಪಟ್ಟ ಶವಗಳನ್ನು ಮೃತರ ಕುಟುಂಬಸ್ಥರು ಕೂಡ ಅಂತ್ಯ ಸಂಸ್ಕಾರ ಮಾಡಲು ಹಿಂಜರಿಯುವಂತಾಗಿದೆ. ಮೃತ ದೇಹದ ಹತ್ತಿರಕ್ಕೂ ಬರಲಾರದೆ ಹಲವು ಕುಟುಂಬಗಳು ಕೋವಿಡ್ ಮೃತ ದೇಹಗಳನ್ನು ದುಷ್ಟ ಶಕ್ತಿಗಳಂತೆ ಕಾಣುತ್ತಿದ್ದು, ಒಡ ಹುಟ್ಟಿದ ರಕ್ತ ಸಂಬಂಧಿಗಳಿಗೆ ಕುಟುಂಬಸ್ಥರು ಹಿಡಿ ಮಣ್ಣು ಹಾಕದಂತಹ ಸ್ಥಿತಿ ಒಂದೊದಗಿದಾಗ, ಅಂತ್ಯ ಸಂಸ್ಕಾರಕ್ಕೆ ಆಸರೆಯಾಗಿರುವುದು ಶಿರಾ ನಗರದ ಕೆಲ ಯುವಕರ ತಂಡಗಳು ಎಂಬುದು ನಿಜಕ್ಕೂ ಹೆಗ್ಗಳಿಕೆಯ ಸಂಗತಿಯೇ ಸರಿ.
ಕೋವಿಡ್ ರೋಗಿ ಶಿರಾ ಆಸ್ಪತ್ರೆಯಲ್ಲಿ ಮೃತವಾದರೆ ಅಥವಾ ಶಿರಾ ಭಾಗದ ಕೋವಿಡ್ ರೋಗಿ ಹೊರ ಜಿಲ್ಲೆಯ ಎಲ್ಲಿಯಾದರೂ ಸರಿ ಮೃತನಾದರೆ ಸ್ವಗ್ರಾಮಕ್ಕೆ ತರುವ ಕೋವಿಡ್ ಮೃತ ದೇಹಗಳ ಅಂತಿಮ ಸಂಸ್ಕಾರ ಮಾಡಲು ಎರಡು ಯುವ ಪಡೆಗಳು ದಿನ ನಿತ್ಯ ತಮ್ಮದೇ ಕರ್ತವ್ಯ ನಿರ್ವಹಿಸುತ್ತಿವೆ.
ಡಾ.ಸಿ.ಎಂ.ರಾಜೇಶ್ಗೌಡರ ಕ್ಷೇತ್ರ ಕ್ಷಮತೆಯ ತಂಡದಲ್ಲಿ ಆಸ್ಪತ್ರೆ, ಹಾಸಿಗೆ, ವೆಂಟಿಲೇಟರ್ ಮಾಹಿತಿಗಾಗಿ ಗಿರಿಧರ್ ತಂಡ, ಆ್ಯಂಬ್ಯುಲೆನ್ಸ್ ಮಾಹಿತಿಗಾಗಿ ಹರೀಶ್ ತಂಡ, ಉಚಿತ ಆಹಾರ ವ್ಯವಸ್ಥೆಗಾಗಿ ವಿಜಯರಾಜ್ ತಂಡ, ವ್ಯಾಕ್ಸಿನೇಷನ್ಗಾಗಿ ರವಿಕುಮಾರ್ ತಂಡಗಳು ನಿರ್ವಹಣೆಯಲ್ಲಿ ತೊಡಗಿದ್ದು ಸಹಾಯವಾಣಿ ಸಂಖ್ಯೆಗಳನ್ನು ಈಗಾಗಲೇ ಪ್ರಕಟಿಸಿವೆ.
ಇದೆಲ್ಲಕ್ಕೂ ಮಿಗಿಲಾಗಿ ಮಹಾಮಾರಿ ಕೋವಿಡ್ಗೂ ಹೆದರದೆ ಕೋವಿಡ್ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುತ್ತಿರುವ ನಗರದ ಎರಡು ತಂಡಗಳು ಮಾತ್ರ ಎಲ್ಲರ ಗಮನ ಸೆಳೆಯುವಂತಾಗಿದೆ. ಶಾಸಕರ ಕ್ಷೇತ್ರ ಕ್ಷಮತೆಯ ತಂಡದಲ್ಲಿನ ನರೇಂದ್ರ, ನಟರಾಜು, ಸಂತೋಷ್, ಶ್ರೀನಿವಾಸ್, ರಮೇಶ್ ಸೇರಿದಂತೆ ಹಲವರು ಮೃತ ದೇಹಗಳನ್ನು ತಾವೇ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಈ ತಂಡ ಇಲ್ಲಿಯವರೆಗೆ 55ಕ್ಕೂ ಹೆಚ್ಚು ಕೋವಿಡ್ ಸೋಂಕಿತ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡಿದೆ.
ಇನ್ನೊಂದೆಡೆ ಜಾತ್ಯತೀತವಾಗಿ, ಧರ್ಮಾತೀತವಾಗಿ ಮುಸ್ಲಿಂ ಸಮುದಾಯದ ಶಿರಾ ಜಾಮೀಯ ಮಸೀದಿ ವಕ್ಫ್ ಟ್ರಸ್ಟ್ ಹಾಗೂ ಎನ್.ಸಿ.ಸಿ. ತಂಡ ಕೂಡ ಹಿಂದೂ ಸಮಾಜದ ಮೃತ ದೇಹಗಳನ್ನು ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಿದೆ. ಈ ತಂಡದ ವಾಜಿದ್, ಅಜ್ಗರ್, ರಫೀಕ್, ನಸ್ರು, ಸಾನಾ, ಮುಬಾರಕ್, ರೆಹಮಾನ್, ರೆಹಾನ್, ಫೈಜ್, ಆನೀಸ್, ಸಾದಿಕ್ ಎಂಬ ಯುವಕರು ಕರೆ ಮಾಡಿದರೆ ಸಾಕು ತಮ್ಮ ಸ್ವಂತ ಆ್ಯಂಬ್ಯುಲೆನ್ಸ್ ತೆಗೆದುಕೊಂಡು ಹೋಗಿ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಒಂದಲ್ಲ ಎರಡಲ್ಲ ಅನೇಕ ವಿವಿಧ ಸಂಘಟನೆಗಳು ನಿರಾಶ್ರಿತರ ಸಂಕಷ್ಟಕ್ಕೆ ಮುಂದಾಗುತ್ತಿದ್ದಾರಾದರೂ ಕಳೆದ ಕೆಲ ದಿನಗಳಿಂದ ಕೋವಿಡ್ ಸೆಂಟರ್ಗಳಲ್ಲಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲವೆಂಬ ಆರೋಪ ಮಾತ್ರ ವ್ಯಾಪಕವಾಗಿ ಹರಡುತ್ತಿದೆ. ಸಮಯಕ್ಕೆ ಸರಿಯಾಗಿ ಔಷಧಿ, ಊಟೋಪಚಾರದ ಕೊರತೆಯಿಂದ ಬೇಸತ್ತಿರುವ ಅನೇಕ ರೋಗಿಗಳು ಅವರ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಕರೆ ಮಾಡಿ ಮನೆಗೆ ಕರೆದೊಯ್ಯುವಂತೆ ಒತ್ತಡವನ್ನು ಹೇರುತ್ತಿದ್ದಾರೆ ಎನ್ನಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ನಿರಂತರವಾಗಿ ತಮ್ಮದೇ ಆದ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯುತ್ತಿರುವ ಶಾಸಕರು ಕೋವಿಡ್ ಸೆಂಟರ್ಗಳಿಗೆ ಭೇಟಿ ನೀಡುತ್ತಿದ್ದಾರಾದರೂ, ಈ ಸೆಂಟರ್ಗಳಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಪರಿಯನ್ನೂ ಈಗ ಒಳಹೊಕ್ಕಿ ನೋಡಲೇಬೇಕಿದೆ.
ನಿಯಮಾನುಸಾರ ರೋಗಿಗಳಿಗೆ ಲಭ್ಯವಾಗದ ಚಿಕಿತ್ಸೆ ರೋಗಿಗಳ ಮನಸ್ಸನ್ನು ಕದಡುತ್ತಿದೆ ಎನ್ನಲಾಗಿದೆ. ರೋಗಿಗಳಿಗೆ ನಿಯಮಾನುಸಾರ ರೆಮ್ಡಿಸಿವರ್ ಔಷಧಿ ನೀಡದೆ ನೆಪಮಾತ್ರಕ್ಕೆ ಒಂದೆರಡು ಚುಚ್ಚುಮದ್ದು ನೀಡಿ, ಉಳಿದ ನಿಗದಿತ ಅವಧಿಯ ರೆಮ್ಡಿಸಿವರ್ ಔಷಧಿ ನೀಡುತ್ತಿಲ್ಲವೆಂಬ ವ್ಯಾಪಕ ದೂರುಗಳು ರೋಗಿಗಳಿಂದಲೇ ಕುಟುಂಬಸ್ಥರಿಗೆ ಬರುತ್ತಿವೆ ಎನ್ನಲಾಗಿದೆ. ಕೋವಿಡ್ ಸೆಂಟರ್ನ ಶೌಚಾಲಯಗಳು ಸ್ವಚ್ಛತೆ ಇಲ್ಲದೆ ರೋಗಿಗಳು ಮನೆಗೆ ತೆರಳಿದರೆ ಸಾಕೆಂಬ ನೋವಿನಲ್ಲೂ ಇದ್ದು, ಈ ಸಂಬಂಧ ಶಾಸಕರು ಕೋವಿಡ್ ಸೆಂಟರ್ಗಳ ಒಳ ಸಮಸ್ಯೆಗಳನ್ನು ಸರಿಪಡಿಸಬೇಕಿದೆ.
(ಬರಗೂರು ವಿರೂಪಾಕ್ಷ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
