ಗ್ರಾಮೀಣರಲ್ಲಿ ಇನ್ನೂ ಇದೆ ಕೋವಿಡ್ ಪರೀಕ್ಷಾ ಭಯ..??

 ತುಮಕೂರು: 

    ಕೋವಿಡ್ ಪರೀಕ್ಷೆ ಎಂದರೆ ಗ್ರಾಮೀಣ ಜನರು ಓಡಿ ಹೋಗುತ್ತಾರೆ. ಲಸಿಕೆ ಹಾಕಿಸಿಕೊಳ್ಳಿ ಎಂದರೆ ನನಗೆ ಕೊರೊನಾ ಬಂದಿಲ್ಲ ಎನ್ನುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಂಡುಬರುತ್ತಿರುವ ವಾಸ್ತವ ಚಿತ್ರಣವಿದು.

      ಹಳ್ಳಿ ಹಳ್ಳಿಗಳಿಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಗ್ರಹಕ್ಕೆ ಗ್ರಾಮೀಣ ಪ್ರದೇಶಗಳನ್ನು ಈಗ ಕೇಂದ್ರೀಕರಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕೋವಿಡ್ ಪರೀಕ್ಷಾ ವೈಫಲ್ಯಗಳು, ಜನರನ್ನು ತಲುಪದೇ ಇರುವುದು, ಪರೀಕ್ಷಾ ವರದಿ ತಡವಾಗಿ ಬರುತ್ತಿರುವುದು ಮೊದಲಾದ ವರದಿಗಳು ಸರ್ಕಾರದ ಮೇಲೆ, ಆಡಳಿತದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕೋವಿಡ್ ಪರೀಕ್ಷೆಗೆ ಕ್ರಮ ವಹಿಸಲಾಗುತ್ತಿದೆ. ಆದರೆ ಹಳ್ಳಿ ಜನರಲ್ಲಿ ಸೂಕ್ತ ಮಾಹಿತಿ ಇಲ್ಲದೆ ಕೊರೊನಾ ಟೆಸ್ಟ್‍ಗೆ ಬಂದಿದ್ದಾರೆಂದರೆ ಸಾಕು ಊರಿನಿಂದ ಆಚೆ ದೌಡಾಯಿಸುತ್ತಿದ್ದಾರೆ.

ಕೊರೊನಾ ಟೆಸ್ಟ್ ಮಾತ್ರವಲ್ಲ, ಲಸಿಕೆಗೂ ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಬಿಡುಗಡೆಯಾದ ಆರಂಭದಲ್ಲಿ ನಗರಗಳಲ್ಲಿಯೇ ಲಸಿಕೆ ಹಾಕಿಸಿಕೊಳ್ಳುವವರ ಕೊರತೆ ಕಂಡುಬಂದಿತ್ತು. ನಂತರದ ದಿನಗಳಲ್ಲಿ ಲಸಿಕೆಯ ಅವಶ್ಯಕತೆ ಮತ್ತು ಅಗತ್ಯತೆ ಮನವರಿಕೆಯಾದಂತೆಲ್ಲ ನಗರಗಳಲ್ಲಿ ಬೇಡಿಕೆ ಹೆಚ್ಚಿತು. ಲಸಿಕೆ ಕೊರತೆ ಉಂಟಾಯಿತು. ಲಸಿಕಾ ಅಭಿಯಾನ ಒಂದು ಕಡೆ ನಡೆದರೆ ಮತ್ತೊಂದು ಕಡೆ ಲಸಿಕೆಯೇ ಇಲ್ಲವಾಗಿ ಸರ್ಕಾರ ನಗೆಪಾಟಲಿಗೆ ತುತ್ತಾಯಿತು.

      ನಗರ ಪ್ರದೇಶಗಳಲ್ಲಿ ಈ ಪರಿಸ್ಥಿತಿಯಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಊರಿನ ಬಹಳಷ್ಟು ಮನೆಗಳಲ್ಲಿ ಕೊರೊನಾ ತಾಂಡವವಾಡುತ್ತಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು, ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಇವರನ್ನು ಮನವೊಲಿಸುವ ಪ್ರಕ್ರಿಯೆ ಹೇಗೆ ಎಂಬ ಬಗ್ಗೆಯೂ ಆಡಳಿತ ವ್ಯವಸ್ಥೆ ಕ್ರಮವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರು ಕೋವಿಡ್ ಟೆಸ್ಟ್‍ಗೆ ಒಳಗಾಗುತ್ತಿದ್ದಾರೆ. ಲಸಿಕೆ ವಿಷಯದಲ್ಲಿಯೂ ಇದೇ ಆಗಿದೆ.
ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯುತ್ತಿರುವುದಕ್ಕೆ ಹಲವು ಕಾರಣಗಳಿವೆ. ನಾವೆಲ್ಲ ಬಿಸಿಲಿನಲ್ಲಿ ಕೆಲಸ ಮಾಡುತ್ತೇವೆ, ಟೆಸ್ಟ್ ಮಾಡಲು ಬಂದಾಗ ಮೈ ಬಿಸಿ ಇರುವುದರಿಂದ ತಾಪಮಾನವೂ ಹೆಚ್ಚಿರುತ್ತದೆ. ಇದರಿಂದಾಗಿ ಜ್ವರ ಇದೆ ಎಂದು ತಿಳಿದು ನಮ್ಮನ್ನೆಲ್ಲ ಪಾಸಿಟಿವ್ ಎಂದು ವರದಿ ಕೊಡುತ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳು ದಟ್ಟವಾಗಿವೆ. ಗ್ರಾಮೀಣರಲ್ಲಿ ಮನೆಮಾಡಿರುವ ಇಂತಹ ವದಂತಿಗಳನ್ನು ದೂರ ಮಾಡುವ ಪ್ರಯತ್ನ ಸ್ಥಳೀಯ ಗ್ರಾಮ ಮಟ್ಟದ ಮತ್ತು ಪಂಚಾಯತ್ ಮಟ್ಟದ ಕಾರ್ಯಪಡೆಗಳಿಂದ ಆಗಬೇಕು.

      ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಪಾಸಿಟಿವ್ ಬಂದರೆ ಕೋವಿಡ್ ಕೇಂದ್ರಕ್ಕೆ ಹೋಗಿ ವಾರಾನುಗಟ್ಟಲೆ ಇರಬೇಕು. ಅಲ್ಲಿ ಸರಿಯಾದ ಆರೈಕೆ ಇರುವುದಿಲ್ಲ ಎಂಬುದು ಗ್ರಾಮೀಣ ಜನರಲ್ಲಿ ಕೇಳಿಬರುತ್ತಿರುವ ಮಾತು. ಕೋವಿಡ್ ಕೇಂದ್ರಗಳಿಗೆ ಹೋಗಿ ಬಂದಿರುವವರ ಹೇಳಿಕೆಯೋ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವರದಿಗಳಿಂದಲೋ ಅಂತೂ ಕೋವಿಡ್ ಕೇಂದ್ರಗಳೆಂದರೆ ಹೆದರುತ್ತಾರೆ.

     ಇನ್ನು ಗ್ರಾಮೀಣ ರೈತಾಪಿ ವರ್ಗವು ತಮ್ಮ ದೈನಂದಿನ ಚಟುವಟಿಕೆಯನ್ನು ಕೃಷಿ, ಹೈನುಗಾರಿಕೆ, ರಾಸು ಆರೈಕೆ, ಇತ್ಯಾದಿಗಳೊಂದಿಗೆ ಹೊಂದಿಸಿಕೊಂಡಿರುತ್ತಾರೆ. ಕೆಲವು ಮನೆಗಳಲ್ಲಿ ಒಬ್ಬರೆ ಇರಬಹುದು, ಇಬ್ಬರು ಇರಬಹುದು ಅಥವಾ ಮಕ್ಕಳೂ ಇರಬಹುದು ಅವರೆಲ್ಲರೂ ಒಂದೊಂದು ಕಾರ್ಯಕ್ಕೆ ಒಗ್ಗಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಕೋವಿಡ್ ಕೇಂದ್ರಗಳಿಗೆ ಹೋದರೆ ಇಡೀ ಚಟುವಟಿಕೆಯೇ ಏರುಪೇರಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಔಷಧಿಗಳ ಮೊರೆ ಹೋಗುವ, ಮೆಡಿಕಲ್‍ಗಳಲ್ಲಿ ಔಷಧಿ ತಂದು ಸೇವಿಸುವ ಸ್ವಯಂ ಕೃತ್ಯಕ್ಕೆ ಒಳಗಾಗುತ್ತಿದ್ದಾರೆ.

      ತನಗೆ ರೋಗ ಬಂದಿದೆ ಎಂದರೆ ಇತರರು ಅವಮಾನಿಸುತ್ತಾರೆ, ಊರಲ್ಲಿ ಯಾರಿಗೂ ಗೊತ್ತಾಗಬಾರದು, ಕೆಲವು ದಿನಗಳ ಕಾಲ ರೋಗ ಇದ್ದು ವಾಸಿಯಾಗುತ್ತದೆ ಎಂದುಕೊಳ್ಳುವವರೆ ಹೆಚ್ಚು. ಹೀಗಾಗಿ ಜ್ವರ ಅಥವಾ ಇತರೆ ಲಕ್ಷಣಗಳು ಬಂದರೆ ಆಸ್ಪತ್ರೆಗೆ ಹೋಗಿ ವಾಸಿ ಮಾಡಿಸಿಕೊಳ್ಳುವುದಕ್ಕೆ ಬದಲಾಗಿ ಬಹಿರಂಗವಾಗದಂತೆ ಮುಚ್ಚಿಡುವ, ತಮ್ಮ ಮಿತಿಯೊಳಗೆ ಅದನ್ನು ಬಹಿರಂಗಪಡಿಸದ ರೀತಿ ಎಚ್ಚರಿಕೆ ವಹಿಸುವವರೆ ಅಧಿಕ. ಹೀಗಾಗಿ ಗ್ರಾಮೀಣ ಜನರು ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ.
ಸರ್ಕಾರವೇ ರಚಿಸಿರುವ ಗ್ರಾಮ ಕಾರ್ಯಪಡೆಗಳು ಹೆಚ್ಚು ಕ್ರಿಯಾಶೀಲವಾಗಬೇಕು. ಪ್ರತಿ ಗ್ರಾಮಗಳಲ್ಲಿ ಇರುವ ಗ್ರಾಮ ಪಂಚಾಯತಿ ಸದಸ್ಯರು, ಅಂಗನವಾಡಿ, ಗ್ರಾಮಗಳ ಮುಖಂಡರನ್ನು ಒಳಗೊಂಡು ತಿಳವಳಿಕೆ ಮೂಡಿಸಿ ಲಸಿಕೆ ಹಾಕಿಸುವ, ಟೆಸ್ಟ್ ಮಾಡಿಸುವ ಪ್ರಯತ್ನಗಳು ಸಾಗಿದರೆ ಗ್ರಾಮೀಣರಲ್ಲಿ ಇರುವ ಆತಂಕದ ಛಾಯೆ ದೂರವಾಗಬಹುದು.

ಕಾರ್ಯಪಡೆಗಳು ಚುರುಕಾಗಲಿ:

      ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್‍ಫೋರ್ಸ್ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಬೇಕಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಒಳಗೊಂಡ ಈ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ರೋಗಕ್ಕೆ ಹೆದರಿ ಕೆಲವರು ಸಾರ್ವಜನಿಕ, ಸಾಮಾಜಿಕ ಕಾರ್ಯಗಳಿಗೆ ಮುಂದೆ ಬರುತ್ತಿಲ್ಲ. ಸರ್ಕಾರ ಕಾರ್ಯಪಡೆ ರಚನೆ ಮಾಡಿರುವುದನ್ನು ಬಿಟ್ಟರೆ ಅದರ ಉಸ್ತುವಾರಿ ಹೇಗೆ ಎಂಬುದರ ಬಗ್ಗೆ ಏನೂ ಹೇಳಿಲ್ಲ. ಹೀಗಾಗಿ ಗ್ರಾಮ ಮಟ್ಟದಲ್ಲಿ ಜನರಲ್ಲಿ ಇನ್ನೂ ಆತಂಕ, ಮೂಢನಂಬಿಕೆ, ತಪ್ಪಿಸಿಕೊಳ್ಳುವ ಪ್ರಯತ್ನಗಳು ಮುಂದುವರೆದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link