ಇಂದಿನಿಂದ ಶಾಲಾ ದಾಖಲಾತಿ ಶುರು ; ಕಗ್ಗಾಂಟಾದ ಖಾಸಗಿ ಶಾಲೆ ಶುಲ್ಕ!!

 ತುಮಕೂರು :

      ಇಂದಿನಿಂದ ಶಾಲಾ ಶೈಕ್ಷಣಿಕ ವರ್ಷ ಪುನರಾರಂಭಗೊಳ್ಳುತ್ತಿದ್ದು, ತುಮಕೂರು ಸೇರಿದಂತೆ ಅನ್‍ಲಾಕ್ ಆಗಿರುವ 19 ಜಿಲ್ಲೆಗಳಲ್ಲಿ ಇಂದಿನಿಂದಲೇ ಶಾಲಾ ದಾಖಲಾತಿಯೂ ಸಹ ಶುರುವಾಗಲಿದೆ.

      ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಜೂ.15 ಮಂಗಳವಾರದಿಂದಲೇ ಶಿಕ್ಷಕರು ಶಾಲೆಗಳಿಗೆ ತೆರಳಿ ಶೈಕ್ಷಣಿಕ ಪರಿಸರದ ಪರಿಶೀಲನೆ ನಡೆಸಿ ಶಾಲಾ ಆವರಣದ ಸ್ವಚ್ಛತೆಗೆ ಕ್ರಮ ವಹಿಸುವ ಜೊತೆಗೆ 1 ರಿಂದ 10ನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ. ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು ಸಹ ಇಂದಿನಿಂದಲೇ ದಾಖಲಾತಿ ಪ್ರಕ್ರಿಯೆ ನಡೆಸಬೇಕೆಂದು ಶಿಕ್ಷಣ ಇಲಾಖೆ ಮಾಹಿತಿ ರವಾನಿಸಿದೆ.

ಶಿಕ್ಷಕರ ಜವಾಬ್ದಾರಿಗಳು:

     ಇಂದು ಶಾಲೆಗಳಿಗೆ ಭೇಟಿಕೊಡಲಿರುವ ಶಿಕ್ಷಕರು, ಇಷ್ಟು ದಿನ ಖಾಲಿಯಿದ್ದ ಶಾಲೆಗಳನ್ನು ಸ್ವಚ್ಛಗೊಳಿಸಲು ವ್ಯವಸ್ಥೆ, ಅನುಪಯುಕ್ತ ವಸ್ತುಗಳನ್ನು ವಿಂಗಡಿಸಿ ವಿಲೇ ಮಾಡುವುದು, ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಬಂದ್ ಆಗಿದ್ದರೆ ಸ್ಥಳೀಯ ಗ್ರಾಮ ಪಂಚಾಯ್ತಿ ಇಲ್ಲವೇ ನಗರಾಡಳಿತವನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಮಕ್ಕಳು ತರಗತಿಗೆ ಹಾಜರಾಗುವ ಜು.1ರ ವೇಳೆಗೆ ಇಡೀ ಶಾಲೆ ಸಿಂಗಾರಗೊಂಡ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರಬೇಕು. ಆ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸರಕಾರ ಮಾರ್ಗ ಸೂಚಿಯಲ್ಲೇ ಹೇಳಿದೆ.

      ತರಗತಿ ನಡೆಯದಿದ್ದರೆ, ಪರ್ಯಾಯಕ್ಕೂ ವ್ಯವಸ್ಥೆ:

      ಒಂದು ವೇಳೆ ಕೋವಿಡ್ ಹೆಚ್ಚಳವಾಗಿ ನೇರ ತರಗತಿಗಳನ್ನು ಜು.1ರಿಂದ ಆರಂಭಿಸಲಾಗದಿದ್ದರೆ, ಮತ್ತೆ ಕಳೆದ ವರ್ಷದಂತೆ ಆನ್‍ಲೈನ್‍ಬೋಧನೆ, ದೂರ ಸಂವೇದಿ ಶಿಕ್ಷಣ, ವಿದ್ಯಾಗಮದ ಮೊರೆಹೋಗಲು ಸಹ ಪರ್ಯಾಯ ಯೋಜನೆಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿಕೊಂಡಿದೆ. ಮೊಬೈಲ್ ಇಲ್ಲದಿರುವ ಮಕ್ಕಳಿಗೆ ಅವರ ಪೋಷಕರ ಮೊಬೈಲ್ ನೆರವಿನೊಂದಿಗೆ ಪಠ್ಯ ಬೋಧನೆ ಲಿಂಕ್ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಶಿಕ್ಷಕರು, ಸಾಕ್ಷರತಾ ಪ್ರೇರಕರು, ಸಂಘಸಂಸ್ಥೆಗಳ ನೆರವಿನೊಂದಿಗೆ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವರ್ಕ್‍ಶೀಟ್ ನೀಡಿ ಕಲಿಸುವ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ತರಗತಿ ಆರಂಭವಾದ ಕೂಡಲೇಪಠ್ಯ ಬೋಧನೆಯಿಲ್ಲ:

      ಇನ್ನೂ ಜು. 1 ರಿಂದ ಶಾಲಾ ತರಗತಿಗಳು ಆರಂಭವಾದರೂ ಕೂಡಲೇಪಾಠ-ಪ್ರವಚನಗಳು ಆರಂಭಗೊಳ್ಳುವುದಿಲ್ಲ. ಕೋವಿಡ್ ಕಾರ1ರಿಂದ 9ನೇತರಗತಿಯವರೆಗೆ ಎಲ್ಲರನ್ನು ಮೌಲ್ಯಾಂಕನ ಆಧಾರದಲ್ಲಿ ಮುಂದಿನ ತರಗತಿ ತೇರ್ಗಡೆ ಮಾಡಿರುವುದರಿಂದ ಅವರ ಸಾಮರ್ಥ್ಯಮಟ್ಟವನ್ನು ಅಳೆಯಲು ಕಿರು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಉತ್ತರಗಳನ್ನು ಆಧರಿಸಿ ಒಂದು ತಿಂಗಳು ಸೇತುಬಂಧ ಕಾರ್ಯಕ್ರಮದ ಮೂಲಕ ಮತ್ತೆ ಅವರನ್ನು ಕಲಿಕೆಗೆ ಅಣಿಗೊಳಿಸುವ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.

ಶುಲ್ಕ ಪಾವತಿ ಹಳೆಯ ಆದೇಶವೇ ಚಾಲ್ತಿಯಲ್ಲಿದೆ : ಡಿಡಿಪಿಐ

      ಶಾಲಾ ದಾಖಲಾತಿ ಇಂದಿನಿಂದ ಆರಂಭಗೊಂಡರೂ ಅನೇಕ ಖಾಸಗಿ ಶಾಲೆಗಳು ಮುಂಚೆಯಿಂದಲೇ ಪೂರ್ಣ ಶುಲ್ಕಕಟ್ಟಿಸಿಕೊಂಡು ದಾಖಲಾತಿಗೆ ಮುಂದಾಗಿವೆ. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಪೂರ್ಣ ಶುಲ್ಕ ಪಾವತಿ ಅಸಾಧ್ಯ ಎಂಬ ಮಾತನ್ನು ಖಾಸಗಿ ಶಾಲೆಗಳ ಪೋಷಕರ ಒಕ್ಕೂಟ ಪ್ರತಿಪಾದಿಸುತ್ತಿದ್ದು, ಖಾಸಗಿ ಶಾಲೆಯವರು ಕಳೆದ ಬಾರಿಯಂತೆ ಶೇ.30ರಷ್ಟು ಬೋಧನಾ ಶುಲ್ಕ ರಿಯಾಯಿತಿಗೆ ಒಪ್ಪುತ್ತಿಲ್ಲ. ಈ ಜಟಿಲತೆ ನ್ಯಾಯಾಲಯದ ಅಂಗಳವನ್ನು ತಲುಪಿದ್ದು, ಈ ಬಗ್ಗೆ ಶಿಕ್ಷಣ ಸಚಿವರ ಸರಕಾ Àಸಹ ಯಾವುದೇ ಸ್ಪಷ್ಟತೀರ್ಮಾನ ಕೈಗೊಳ್ಳದಿರುವುದು ಪೋಷಕರನ್ನೂ ಗೊಂದಲಕ್ಕೆ ಸಿಲುಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಡಿಪಿಐ ಅವರು ಕಳೆದ ಬಾರಿ ಶೇ.30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ ಸರಕಾರ ನೀಡಿದ್ದ ಆದೇಶವನ್ನು ಖಾಸಗಿ ಶಾಲಾಆಡಳಿತ ಮಂಡಳಿಯವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಸರಕಾರದಿಂದಲೂ ಪರಿಷ್ಕøತ ಆದೇಶ ಹೊರಬಂದಿಲ್ಲವಾದ್ದರಿಂದ ಹಳೆಯ ಆದೇಶವೇ ಚಾಲ್ತಿಯಲ್ಲಿದೆ ಎಂದಿದ್ದಾರೆ

ಎಸ್ಸೆಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ ಪರೀಕ್ಷಾ ಕೇಂದ್ರಗಳ ಗುರುತು :

      ಎರಡು ದಿನಗಳ ಕಾಲ ಬಹುಆಯ್ಕೆ ಪ್ರಶ್ನೋತ್ತರದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರಕಾರ ಮುಂದಾಗಿದ್ದು, ಜಿಲ್ಲೆಯಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆ ಪೂರಕ ಸಿದ್ಧತೆ ನಡೆಸಿದೆ. ಹೊಸ ಪರೀಕ್ಷಾ ಪದ್ದತಿ ಸಂಬಂಧ ಜಿಲ್ಲೆಯ ಸು.36000 ವಿದ್ಯಾರ್ಥಿಗಳನ್ನು ಅಣಿಗೊಳಿಸಲು ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್‍ನಲ್ಲಿ ಮಾಹಿತಿ ಒದಗಿಸುತ್ತಿದ್ದು, ತಲಾ 120 ಅಂಕಗಳ ಭಾಷೆ ಹಾಗೂ ಇತರೆ ವಿಷಯಗಳ ಪರೀಕ್ಷೆಯನ್ನು ಎದುರಿಸುವ ವಿಧಾನದ ಕುರಿತು ಪರಿಚಯಿಸಲಾಗುತ್ತಿದೆ. ಡಿಡಿಪಿಐಯಿಂದ ಹಿಡಿದು ಸಿಆರ್‍ಪಿವರೆಗೆ ಎಲ್ಲಾ ಹಂತದ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ಸೂಚಿಸಲಾಗಿದೆ. ಇನ್ನೂ ಕೋವಿಡ್ ನಿಯಮಾನುಸಾರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹೆಚ್ಚು ಅಂತರ ಕಾಪಾಡಲು ಪ್ರತೀ ಕೊಠಡಿಗೆ 12 ಮಂದಿಯಂತೆ ಕೂರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದು, ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ 80 ಕೇಂದ್ರಗಳಿಂದ 131 ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಳ ಮಾಡಲಾಗಿದೆ.

      ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯೇಯೇ ಪ್ರವೇಶಾತಿ, ಶುಲ್ಕ ನಿಗದಿಯಲ್ಲಿ ಪೈಪೋಟಿ ಇದ್ದು, ಸರಕಾರದ ಯಾವುದೇ ಅನುದಾನ ಪಡೆಯುತ್ತಿಲ್ಲವಾದ್ದರಿಂದ ಶುಲ್ಕ ನಿಗದಿ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಸರಿಯಲ್ಲ. ಸರಕಾರದ ಮಧ್ಯಪ್ರವೇಶದಿಂದ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವಿನ ಸೌಹಾರ್ಧಯುತ ಸಂಬಂಧಕ್ಕೆ ತಾತ್ಕಾಲಿಕ ಧಕ್ಕೆ ಒದಗುತ್ತಿದೆ. ಕೋವಿಡ್‍ನಿಂದಾಗಿ ಎಷ್ಟೊ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದು, ಅನೇಕ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಕೋವಿಡ್ ಸಂಕಷ್ಟದ ಬಗ್ಗೆ ಖಾಸಗಿ ಶಾಲೆಗಳವರಿಗೂ ಅರಿವಿದೆ. ಒಮ್ಮೆಲೆ ಶುಲ್ಕ ಪಾವತಿಸಿ ಎಂದು ಬಜೆಟ್ ಖಾಸಗಿ ಶಾಲೆಗಳ್ಯಾರು ಒತ್ತಾಯ ಹಾಕುತ್ತಿಲ್ಲ. ಸರಕಾರ ಶುಲ್ಕನಿಗದಿ ವಿಷಯದಲ್ಲಿ ಗೊಂದಲಕಾರಿ ನಿಲುವು ತಾಳದೆ ಸರಕಾರಿ ಶಾಲೆಗಳ ಬಲವರ್ದನೆಗೆ ಒತ್ತು ಕೊಡಲಿ.

-ಎನ್.ಬಿ.ಪ್ರದೀಪ್‍ಕುಮಾರ್, ಕಾರ್ಯದರ್ಶಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap