ತುಮಕೂರು :
ನಗರದ ಖ್ಯಾತ ಉದ್ಯಮಿ ಎನ್.ಆರ್.ಜಗದೀಶ್ ಅವರ ಹಿರಿಯ ಪುತ್ರ ಎನ್.ಜೆ.ರುದ್ರಪ್ರಕಾಶ್ ಅವರು ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುವಂತಹ ಬಡವರಿಗೆ ತರಕಾರಿ ತಳ್ಳುವ ಗಾಡಿಗಳನ್ನು ವಿತರಿಸಿದರು.
ಬೀದಿ ವ್ಯಾಪಾರಿಗಳು ಇರುವ ಕಡೆಗೆ ತೆರಳಿ 10 ಗಾಡಿಗಳನ್ನು ನೀಡುವ ಕಾರ್ಯಕ್ಕೆ ರಾಜ್ಯ ರೆಡ್ಕ್ರಾಸ್ ಸಭಾಪತಿಗಳು ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಚಾಲನೆ ನೀಡಿದರು.
ನಗರದ ಬಹಳಷ್ಟು ಬಡಾವಣೆಗಳಲ್ಲಿ ತರಕಾರಿ ವ್ಯಾಪಾರ ಮಾಡುವ ನಿರುದ್ಯೋಗಿಗಳು, ಅಶಕ್ತರು ಇದ್ದಾರೆ. ಅಂತಹವರಿಗೆ ತಳ್ಳುವ ಗಾಡಿಯನ್ನು ನೀಡಿದರೆ ಅವರ ವ್ಯಾಪಾರ ವಹಿವಾಟಿಗೆ ಸುಗಮವಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಸದಾಶಯದೊಂದಿಗೆ ರುದ್ರಪ್ರಕಾಶ್ ಅವರ ಕುಟುಂಬ ಈ ಸಹಾಯ ಹಸ್ತ ನೀಡಿದೆ.
ಇದೇ ರೀತಿ ಸಿದ್ಧಗಂಗಾ ಮಠಕ್ಕೆ ಬರುವ ಭಕ್ತಾದಿಗಳು ಊಟಕ್ಕೆ ಕುಳಿತುಕೊಳ್ಳುವ ಸ್ಟೀಲ್ ಕುರ್ಚಿ ಹಾಗೂ ಟೇಬಲ್ಗಳನ್ನು ನೀಡಿದ್ದಾರೆ. ಮೈದಾಳ ಬಳಿ ಇರುವ ವೃದ್ಧಾಶ್ರಮಕ್ಕೆ ಊಟದ ಟೇಬಲ್ ಮತ್ತು ಕುರ್ಚಿಗಳನ್ನು ನೀಡಿದ್ದಾರೆ.
ತಳ್ಳುವ ಗಾಡಿಗಳನ್ನು ನೀಡುವ ಈ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್.ನಾಗಣ್ಣ ಅವರು ಈ ಕುಟುಂಬ ಹಿಂದಿನಿಂದಲೂ ದಾನ ಧರ್ಮಕ್ಕೆ ಹೆಸರಾಗಿದೆ. ಧರ್ಮಪ್ರಕಾಶ್ ಎನ್.ರುದ್ರಯ್ಯ ಅವರ ಸೇವೆ ಸ್ಮರಣೀಯ. ಪುತ್ರರಾಗಿ ಎನ್.ಆರ್.ಜಗದೀಶ್, ಅವರ ಹಿರಿಯ ಪುತ್ರರಾಗಿ ರುದ್ರಪ್ರಕಾಶ್ ಅವರು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅಶಕ್ತರಿಗೆ ಉಪಾಹಾರ ನೀಡುವ ಮೂಲಕ ತಮ್ಮ ಸಹಾಯಹಸ್ತ ಚಾಚಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ರವೀಶ್, ನಟರಾಜು, ಆದರ್ಶ್, ಅಕ್ಷಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ