ತುಮಕೂರು : ತೆರಿಗೆ ವಸೂಲಾತಿಯಲ್ಲಿ ಕಳಪೆ ಸಾಧನೆ

 ತುಮಕೂರು :

      ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಅತ್ಯಂತ ಕುಂಠಿತವಾಗಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಪೌರಾಡಳಿತ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು(ಎಂ.ಟಿ.ಬಿ.) ಉದಾಸೀನ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ವಿವಿಧ ಪುರಸಭೆ, ನಗರಸಭೆ, ಪಟ್ಟಣಪಂಚಾಯ್ತಿಗಳು ಅತ್ಯಂತ ಕಡಿಮೆ ಸಾಧನೆ ಮಾಡಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಗಧಿತ ಗುರಿಯಂತೆ ಆಸ್ತಿ, ನೀರು, ಜಾಹಿರಾತು ತೆರಿಗೆ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ಸಂಗ್ರಹ ಸೇರಿದಂತೆ ಎಲ್ಲಾ ಕರ ವಸೂಲಾತಿಯನ್ನೂ ಕಾಲಮಿತಿಯೊಳಗೆ ವಸೂಲಿ ಮಾಡಬೇಕು. ನೂರರಷ್ಟು ತೆರಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

      ತೆರಿಗೆ ಸಂಗ್ರಹದಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಬೇಕು. ಅಲ್ಲದೆ, ವ್ಯಾಪಾರಸ್ಥರ ಪರವಾನಗಿಯನ್ನು ಕಾಲ ಕಾಲಕ್ಕೆ ನವೀಕರಣಗೊಳಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡದೇ ಇರುವ ಸಾರ್ವಜನಿಕರಿಗೆ ನೋಟೀಸ್ ನೀಡಬೇಕು ಎಂದು ನಿರ್ದೇಶಿಸಿದರು.

      ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಆದ್ಯತೆ ಕೊಡಬೇಕು ಎಂದು ಸೂಚನೆ ನೀಡಿದರು.

ಕೆಡಿಪಿ ಸಭೆಯಲ್ಲಿ ಸಮಗ್ರ ಪರಾಮರ್ಶೆ ಮಾಡಿ:

      ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಉದಾಸೀನವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ ಸಚಿವರು, ಮುಂದಿನ ಕೆಡಿಪಿ ಸಭೆ ಆರಂಭದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.

ಪೌರಕಾರ್ಮಿಕರೆಲ್ಲರಿಗೂ ಕಡ್ಡಾಯ ಲಸಿಕೆ ಹಾಕಿಸಿ:

      ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಚರ್ಚಿಸಿದ ಸಚಿವರು, ಕೋವಿಡ್ 19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪೌರಕಾರ್ಮಿಕರೆಲ್ಲರಿಗೂ ಶೇ.100ರಷ್ಟು ಕೋವಿಡ್ ಲಸಿಕೆ ಹಾಕಿಸಬೇಕು ಎಂÉÀರು. ಈ ವೇಳೆ ತಿಪಟೂರು ನಗರ ಸಭಾ ಆಯುಕ್ತರು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಶೇ.90ರಷ್ಟು ಕೋವಿಡ್ ಲಸಿಕೆ ಹಾಕಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಾಣಿಜ್ಯ ನಗರಿಯಲ್ಲಿ ಕಳಪೆ ಸಾಧನೆಗೆ ತರಾಟೆ:

     ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯ ವಾಣಿಜ್ಯ ಕೇಂದ್ರ ತಿಪಟೂರು ನಗರ ಸಭೆಯ ವ್ಯಾಪ್ತಿಯಲ್ಲಿಯೇ ತೆರಿಗೆ ಸಂಗ್ರಹಣೆ ತೃಪ್ತಿದಾಯಕವಾಗಿಲ್ಲ. ಕುಡಿಯುವ ನೀರಿನ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕ ನೀಡುವ ಕಾರ್ಯವೂ ಕಾಲಮಿತಿಯೊಳಗೆ ಮುಗಿಯಬೇಕು ಎಂದು ನಗರ ಸಭೆ ಆಯುಕ್ತರಿಗೆ ಸೂಚಿಸಿದರು.

ಶಿರಾ ನಿವೇಶನ ಹಂಚಿಕೆ ಬಾಕಿಗೆ ಅಸಮಾಧಾನ:

      ಸಭೆಯಲ್ಲಿ ತಿಪಟೂರು, ಶಿರಾ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲಿಸಿದ ಸಚಿವಧ್ವಯರು, ವಸತಿ ಯೋಜನೆಯಡಿ ನಿವೇಶನ ಹಂಚಿಕೆಯಾಗಿರುವ ಅರ್ಹ ಪೌರಕಾರ್ಮಿಕ ಫಲಾನುಭವಿಗಳಿಗೆ ನಿವೇಶನ ನೀಡಬೇಕು. ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿದ್ದರೆ ಅಂತಹವರಿಂದ ತೆರಿಗೆ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು. ಶಿರಾ ನಗರಸಭೆಗೆ ಸಂಬಂಧಿಸಿದಂತೆ 5000 ನಿವೇಶನ ಹಂಚಿಕೆಗೆ ಸಿದ್ಧವಾಗಿದ್ದರೂ ಹಂಚಿಕೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವ ಮಾಧುಸ್ವಾಮಿ ಅವರು ನೀವೆಲ್ಲ ಏನು ಮಾಡುತ್ತಿರುವಿರಿ. ಸಿದ್ಧವಾಗಿರುವ ನಿವೇಶನವನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲವೇ ಎಂದು ಹೌಹಾರಿದರು. ಸಚಿವ ನಾಗರಾಜ್ ಸಹ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ನೌಕರರಿಗೆ ವೇತನ ಬಾಕಿ ಕುರಿತು ವಿಸ್ತೃತ ಚರ್ಚೆ ನಡೆಯಿತು

ನಾವು ಜನರಿಗೆ ಮುಲಾಜೇ ಹೊರತು ನಿಮಗಲ್ಲ:

     ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು. ನಾವು ಜನರಿಗೆ ಮುಲಾಜಾಗಿರುತ್ತೇವೆ ಹೊರತು. ನಿಮಗಲ್ಲ.ಕೆಲಸ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಎಂದು ಎಚ್ಚರಿಕೆ ನೀಡಿ, 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಖರ್ಚು ಮಾಡದಿದ್ದರೆ, ಮುಂದಿನ ವರ್ಷ ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಕಡಿತವಾಗಲಿದೆ. ಆದ್ದರಿಂದ ಅಧಿಕಾರಿಗಳು ಅನುದಾನವನ್ನು ಪೂರ್ಣವಾಗಿ ಖರ್ಚು ಮಾಡಬೇಕು ಎಂದು ನಿರ್ದೇಶಿಸಿದರು.

ಡಿಸಿಯಿಂದ ಶಿಸ್ತುಕ್ರಮದ ಎಚ್ಚರಿಕೆ:

      ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸಭೆಗೆ ಹಾಜರಾಗುವ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಭಿವೃದ್ಧಿ ಪ್ರಗತಿ ಕುರಿತ ಮಾಹಿತಿ ಸಮರ್ಪಕವಾಗಿ ನೀಡಬೇಕು. ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳು ಅಭಿವೃದ್ಧಿಗೆ ಆದ್ಯತೆ ನೀಡಿಲ್ಲವೆಂದು ಪರಿಗಣಿಸಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

      ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 126257 ಆಸ್ತಿಗಳಿದ್ದು, ಹಿಂದಿನ ವರ್ಷದ 382.23 ಲಕ್ಷ ರೂ. ಹಾಗೂ ಪ್ರಸಕ್ತ ಸಾಲಿನ 1411.562 ಲಕ್ಷ ರೂ. ತೆರಿಗೆ ಸೇರಿದಂತೆ ಒಟ್ಟು 1793.79 ಲಕ್ಷ ರೂ. ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 830.22 ಲಕ್ಷ ರೂ. ವಸೂಲಿ ಮಾಡಲಾಗಿದ್ದು, 963.57 ಲಕ್ಷ ರೂ.ಗಳು ಬಾಕಿಯಿದೆ ಎಂದು ಮಾಹಿತಿ ಒದಗಿಸಿದರು. ಸಭೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್‍ನಿಂದ ತೆರಿಗೆ ವಸೂಲಾತಿಯಲ್ಲಿ ಕುಂಠಿತ:

      ಸಭೆ ಬಳಿಕ ಸುದ್ದಿಗಾರರಿಗೆಮಾತನಾಡಿದ ಸಚಿವ ಎನ್. ನಾಗರಾಜು, ಕೋವಿಡ್ ಕಾರಣದಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಆಸ್ತಿ, ನೀರು, ಜಾಹಿರಾತು ತೆರಿಗೆ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ಕುಂಠಿತವಾಗಿದ್ದು, ತೆರಿಗೆ ಪಾವತಿಸುವವರ ಸಂಖ್ಯೆಯೂ ಇಳಿಮುಖವಾಗಿದೆ. ಹಾಗಾಗಿ ಸಭೆ ನಡೆಸಿ ಎಲ್ಲಾತೆರಿಗೆಯನ್ನೂ ನೂರರಷ್ಟು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಿರಾ ನಿವೇಶನ ಹಂಚಿಕೆಯನ್ನು ಬೇಗ ಮಾಡುವಂತೆ ನಿರ್ದೇಶಿಸಿದ್ದು, ಅಕ್ರಮ-ಸಕ್ರಮ ಸುಪ್ರೀಂಕೋರ್ಟ್‍ನಲ್ಲಿರುವುದರಿಂದ ವಿಳಂಬವಾಗಿದೆ ಎಂದರು.

ಅಮಾನತ್ ನೋಟಿಸ್‍ಗೆ ಸೂಚನೆ

      ಮಧುಗಿರಿ ಪುರಸಭೆ ಮಳಿಗೆಗಳ ಬಾಡಿಗೆ ವಸೂಲಾತಿಯಲ್ಲಿ ಶೇ. 4ರಷ್ಟು ಮಾತ್ರ ಸಾಧನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಜೆಸಿಎಂ ಅವರು ಕೋರ್ಟ್‍ಗೆ ಹೋಗಿದ್ದಾರೆ ಅಂತೆಲ್ಲ ಕುಂಟು ನೆಪ ಹೇಳ್ತೀರಾ. ಬಾಡಿಗೆ ವಿಷಯದಲ್ಲಿ ಯಾರು ಕೋರ್ಟ್‍ಗೆ ಹೋಗ್ತಾರೆ. ಸಲ್ಲದ ಸಬೂಬನ್ನು ಹೇಳಬೇಡಿ. ಕಳೆದ ಒಂದೂವರೆ ವರ್ಷದಿಂದ ಬಾಡಿಗೆಯನ್ನು ನಿರ್ಧಿಷ್ಟ ಪ್ರಗತಿಯಂತೆ ವಸೂಲಿ ಮಾಡಿಲ್ಲ ಎಂದು ಮಧುಗಿರಿ ಕಂದಾಯ ನಿರೀಕ್ಷಕ ಸಂತೋಷ್ ಅವರಿಗೆ ಎಚ್ಚರಿಕೆ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಗುರಿಯಂತೆ ತೆರಿಗೆ ವಸೂಲಿ ಮಾಡದಿದ್ದರೆ ಅಮಾನತ್ತು ಮಾಡಲಾಗುವುದು ಎಂದು ತಾಕೀತು ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap