ತುಮಕೂರು : ಗ್ರಾಪಂ ಚುನಾವಣೆಯಲ್ಲಿ ಜನಜಾತ್ರೆ, ಕೊರೊನಾತಂಕ!

ತುಮಕೂರು : 

     ಕೊರೊನಾ 2ನೇ ಅಲೆ ಮೊದಲ ಅವಧಿಗಿಂತಲೂ ಭೀಕರವೆನ್ನಲಾಗುತ್ತಿದ್ದು, ಈಗಾಗಲೇ ಯೂರೋಪ್ ಖಂಡದಲ್ಲಿ ಅದರ ಕರಾಳತೆ ಕಾಣಲಾರಂಭಿಸಿದೆ. ಬ್ರಿಟನ್‍ನಲ್ಲಿ ಕೊರೊನಾ ವೈರಾಣ್‍ನ ಹೊಸ ಪ್ರಬೇಧ ಕಾಣಿಸಿಕೊಂಡು ಬಹುಬೇಗ ಸೋಂಕು ವ್ಯಾಪಿಸುತ್ತಿದ್ದು, ಭಾರತಕ್ಕೂ ಎಚ್ಚರಿಕೆಯ ಕರೆಗಂಟೆಯಾಗಿದೆ.

      ಈಗಾಗಲೇ ಭಾರತ -ಬ್ರಿಟನ್ ನಡುವಿನ ವಿಮಾನ ಸಂಚಾರವನ್ನು ಡಿ.31ರವರೆಗೆ ರದ್ದುಮಾಡಿರುವ ಕೇಂದ್ರ ಸರಕಾರ, ಏರ್‍ಪೋರ್ಟ್‍ಗಳಲ್ಲಿ ವಿದೇಶದಿಂದ ಬರುವ ಯಾತ್ರಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಬೇಕೆಂದು ನಿರ್ದೇಶಿಸಿದೆ. ಅದರಂತೆ ರಾಜ್ಯದ ಆರೋಗ್ಯ ಸಚಿವರು ವಿದೇಶಿ ಪ್ರವಾಸಿಗರು ಕಡ್ಡಾಯ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಬೇಕೆಂದು ಸೂಚಿಸಿದ್ದು, ಮತ್ತೆ ಕ್ವಾರಂಟೈನ್, ಕೋವಿಡ್ ಕೇರ್ ಸೆಂಟರ್‍ಗಳು ತಲೆಎತ್ತುವುದರ ಜೊತೆಗೆ ಸಾವು-ನೋವುಗಳು ಹೆಚ್ಚುವ ಅಪಾಯವನ್ನು ತಳ್ಳಿಹಾಕುವಂತಿಲ್ಲ.

      ಏತನ್ಮಧ್ಯೆ ಡಿ.22 ಹಾಗೂ 27ರಂದು ಎರಡು ಹಂತಗಳಲಲಿ ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಪಂ ಚುನಾವಣೆ ಹೆಸರಲ್ಲಿ ಸೇರುತ್ತಿರುವ ಜನಜಾತ್ರೆ ಕೊರೊನಾ 2ನೇಅಲೆಯನ್ನು ಹಳ್ಳಿಗಳಿಗೂ ವಿಸ್ತರಿಸುವ ಆತಂಕ ಸೃಷ್ಟಿಸಿದೆ. ಕಳೆದ ಮಾರ್ಚ್ ಅಂತ್ಯದಿಂದ ಆರಂಭವಾದ ಕೊರೊನಾ ಪ್ರಕರಣಗಳು ನಗರ ಪ್ರದೇಶದ ನಿವಾಸಿಗಳನ್ನು ಹೆಚ್ಚು ಬಾಧಿಸಿದ್ದವು. ನಂತರ ಕಳೆದ ಎರಡೂವರೆ ತಿಂಗಳಿಂದ ಸೋಂಕಿನ ಪ್ರಮಾಣ ಸ್ವಲ್ಪ ತಗ್ಗಿದ್ದು, 2ನೇ ಅಲೆಯ ಪರಿಣಾಮ ಭಾರತದ ಮೇಲೆ ಅಷ್ಟಾಗಿಲ್ಲ ಎಂದಿದ್ದ ಆರೋಗ್ಯ ಸಚಿವರೇ ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಕೊರೊನಾ 2ನೇ ಅಲೆಯ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ. ಹೊಸ ಪ್ರಬೇಧದ ಕೊರೊನಾ ಸೋಂಕು ಯೂರೋಪ್‍ನ ಮೂರು ದೇಶಗಳನ್ನೇ ತಲ್ಲಣಗೊಳಿಸಿದ್ದು, ರಾಜ್ಯದ ಜನತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

      ಜಾಗ್ರತೆ ವಹಿಸದಿದ್ದರೆ ಸುರಕ್ಷಿತವೆಂದು ಭಾವಿಸಿದ್ದ ಹಳ್ಳಿಗಳೇ ಅಪಾಯ ಕೇಂದ್ರವಾಗಲಿವೆ: ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ನಗರ, ಪಟ್ಟಣದಲ್ಲಿ ನೆಲೆಸಿದ್ದ ಗ್ರಾಮೀಣ ಮೂಲ ನಿವಾಸಿಗಳು ಹಳ್ಳಿಗಳತ್ತ ಮುಖ ಮಾಡಿ ಆರೋಗ್ಯ ಕಾಪಾಡಿಕೊಂಡಿದ್ದರು. ಇದೀಗ ಗ್ರಾಪಂ ಚುನಾವಣೆ ಹೆಸರಲ್ಲಿ ಹಳ್ಳಿಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮತ ಪ್ರಚಾರ, ಮದ್ಯಸೇವನೆ, ಬಾಡೂಟ ಪಾರ್ಟಿ ಹೆಸರಲ್ಲಿ ಜನಜಂಗುಳಿಯೇ ಜಮಾಯಿಸುತ್ತಿದ್ದು, ಸಾಮಾಜಿಕ ಅಂತರಗಳೇ ಮರೀಚಿಕೆಯಾಗಿದೆ. ಮಾಸ್ಕ್ ಧರಿಸದೆ ಬೈಕ್‍ಗಳಲ್ಲಿ ಮೂವರು ಒಟ್ಟೊಟ್ಟಿಗೆ ಕುಳಿತು ಪ್ರಯಾಣಿಸುವುದು…, ಹೀಗೆ ಸೋಂಕನ್ನು ಆಹ್ವಾನಿಸುವ ಎಲ್ಲಾಕ್ರಿಯೆಗಳು ಗ್ರಾಮಗಳಲ್ಲಿ ಜರುಗುತ್ತಿದ್ದು, ಕೊರೊನಾ 2ನೇ ಅಲೆಗೆ ಗ್ರಾಮೀಣ ಕರ್ನಾಟಕ ಗುರಿಯಾಗುವ ದೊಡ್ಡ ಆತಂಕ ಸೃಷ್ಟಿಯಾಗಿದೆ.

     ಬಹುಬೇಗ ಹರಡುವ 2ನೇ ಅಲೆಯ ಲಕ್ಷಣವನ್ನು ಗಮನಿಸಿದರೆ ಕೊರೊನಾವನ್ನು ಲೆಕ್ಕಿಸದೆ ಪಂಚಾಯಿತಿ ಚುನಾವಣೆಯ ಉತ್ಸಾಹದಲ್ಲಿರುವ ಅಭ್ಯರ್ಥಿಗಳು, ಬೆಂಬಲಿಗರು, ಚುನಾವಣೆ ಸಿಬ್ಬಂದಿಗೆ ಕೊರೊನಾ ಬಹುಬೇಗ ವ್ಯಾಪಿಸುವ ಸಾಧ್ಯತೆ ಇದ್ದು, ಚುನಾವಣೆ ಬಳಿಕ ಅವರಿಗೆ ಕೋವಿಡ್ ನಡೆಸಿ ಕ್ವಾರಂಟೈನ್ ಮತ್ತಿತರ ಸುರಕ್ಷಾ ಕ್ರಮಗಳ ಪಾಲನೆ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮವಹಿಸುವುದು ಸೂಕ್ತವೆನಿಸಿದೆ.

    ಸ್ವಯಂ ಪರೀಕ್ಷೆಗೊಳಪಡಿಸುವುದು ಅತ್ಯಗತ್ಯ:

      ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯರಾದ ಅಭ್ಯರ್ಥಿಗಳಾಗಲೀ, ಬೆಂಬಲಿಗರಾಗಲೀ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೆ ತೆರಳಿ ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೊಳಪಡಿಸಿಕೊಂಡು ಮುಂಜಾಗ್ರತೆ ವಹಿಸುದು ಅತ್ಯಗತ್ಯವಾಗಿದೆ. ಇಲ್ಲವಾದರೆ ಆರೋಗ್ಯತಾಣವಾಗಿರುವ ಗ್ರಾಮೀಣ ಪ್ರದೇಶಗಳು ಕೊರೊನಾ 2ನೇ ಅಲೆಗೆ ತತ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ.

      ಕೊರೊನಾ 2ನೇ ಅಲೆ ಬರಲಿ, ಬಾರದಿರಲಿ. ಆರೋಗ್ಯ ಇಲಾಖೆ ಕೋವಿಡ್ ಅನ್ನು ಹಿಂದಿನಂತೆಯೇ ಗಂಭೀರವಾಗಿಯೇ ಪರಿಗಣಿಸಿ ನಿಯಂತ್ರಣಕ್ಕೆ ಕ್ರಮ ವಹಿಸುತ್ತಿದ್ದು, ಕೋವಿಡ್ ಪರೀಕ್ಷೆಗಳ ಸಂಖ್ಯೆಯಲ್ಲಿ ಯಾವುದೇ ಕಡಿಮೆ ಮಾಡಿಲ್ಲ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಂದಾಯ ಮತ್ತು ಆರ್‍ಡಿಪಿಆರ್ ಇಲಾಖೆ ಸಹಕಾರದೊಂದಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಬಿಪಿ, ಮಧುಮೇಹ, ಕ್ಯಾನ್ಸರ್ ರೋಗಿಗಳು, 9 ತಿಂಗಳ ಬಾಣಂತಿಯರಿಗೆ ತಿಂಗಳಿಗೊಮ್ಮೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡುತ್ತಿದ್ದೇವೆ. ಚುನಾವಣೆ ವಿಷಯದಲ್ಲೂ ಸರಕಾರದ ಗೈಡ್‍ಲೈನ್ ಪಾಲಿಸುತ್ತಿದ್ದು, ಶಿರಾ ಉಪಚುನಾವಣೆಯ ಬಳಿಕ 26000 ಜನರಿಗೆ ತಪಾಸಣೆ ನಡೆಸಲಾಗಿತ್ತು. ಅದರಲ್ಲಿ 140 ಜನರಲ್ಲಿ ಪಾಸಿಟಿವ್ ಕಂಡುಬಂದಿತ್ತು.

-ನಾಗೇಂದ್ರಪ್ಪ, ಡಿಎಚ್‍ಒ ತುಮಕೂರು.

ಮಸ್ಟರಿಂಗ್ ಕೇಂದ್ರದಲ್ಲೇ ಜನಜಂಗುಳಿ, ಇನ್ನೂ ಹಳ್ಳಿಗಳಲ್ಲಿ ಕೇಳಬೇಕೆ?

      ಕೊರೊನಾ 2ನೇ ಅಲೆಯ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಎಚ್ಚರವಹಿಸಬೇಕಾಗಿರುವುದು ಅನಿವಾರ್ಯವಾಗಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಕೇಂದ್ರಗಳಿಗೆ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಸಿಬ್ಬಂದಿಯೇ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಂತರ ಪಾಲಿಸದಿರುವುದು ಸುರಕ್ಷತಾ ಕ್ರಮಗಳು ಆಡಳಿತ ವ್ಯವಸ್ಥೆಯಲ್ಲೇ ಇಲ್ಲವಾದರೆ ಹಳ್ಳಿಗಳಲ್ಲೇ ಕೇಳಬೇಕೇ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಕೇಳುವಂತಾಗಿದೆ.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link