ತುಮಕೂರು :
ಇಂಡಿಯನ್ ಆರ್ಮಿಯ ಡಿಫೆನ್ಸ್ ಸೆಕ್ಯೂರಿಟಿ ಕೋರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಯಾಪ್ಟನ್ ಹಬೀಬುಲ್ಲಾ ಖಾನ್ ಎಂಬುವವರಿಗೆ ಜಮೀನು ಕೊಡಿಸುವುದಾಗಿ ವಂಚಿಸಿದ್ದ ಐವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಸೆರೆ ಸಿಕ್ಕ ಆರೋಪಿಗಳ ಪೈಕಿ ಮೊದಲ ಆರೋಪಿ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ಈ ಹಿಂದೆ ಆರ್ಟಿಒ ಕಚೇರಿ ಡಿಎಲ್ ನಕಲು ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದು. ಗಾರ್ಡನ್ ರಸ್ತೆ ಚಂದ್ರಯ್ಯ, ಮಧುಶ್ರೀ, ಆಸ್ಮಾ ಉಪ್ಪಾರಹಳ್ಳಿ ದಿವಾಕರ್, ಬಂಧಿತ ಇತರ ಆರೋಪಿಗಳಾಗಿದ್ದಾರೆ. ನರಸಿಂಹಮೂರ್ತಿ ಮತ್ತು ಆತನ ಇಬ್ಬರ ಪತ್ನಿಯರು ತಲೆಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಸೇನೆಯ ಕ್ಯಾಪ್ಟನ್ಗೆ ತನ್ನ ದೂರದ ಸಂಬಂಧಿ ಆಶ್ರಫ್ ಮೂಲಕ ಪರಿಚಿತನಾದ ಹೆಗ್ಗೆರೆಯ ಶ್ರೀಕಾಂತ ಎಂಬ ವ್ಯಕ್ತಿಯು ಶಿರಾ ತಾಲ್ಲೋಕು, ಕಸಬಾ ಹೋಬಳಿ ರತ್ನಸಂದ್ರ ಗ್ರಾಮದ ಸರ್ವೇ ನಂ.73/4 ರ ಜಮೀನನ್ನು ಕೊಡಿಸುವುದಾಗಿ ನಂಬಿಸಿ, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ, ಈಗಾಗಲೇ ತುಮಕೂರು ವಿದ್ಯಾನಗರದ ವಾಸಿ ಚಂದ್ರು ಎಂಬುವವರಿಗೆ ಮೂಲ ಮಾಲೀಕ ನರಸಿಂಹಮೂರ್ತಿ ಮಾರಾಟ ಮಾಡಿದ್ದ ಜಮೀನನ್ನು, ಮಾಲೀಕ ಮತ್ತು ಆತನ ಪತ್ನಿಯರನ್ನೇ ಮುಂದಿಟ್ಟುಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಕ್ರಯ ಮಾಡುವುದಾಗಿ ಹೇಳಿ ಹತ್ತು ಲಕ್ಷ ರೂಪಾಯಿ ಪಡೆದು ಜಿಪಿಎ ಮಾಡಿಸಿಕೊಟ್ಟಿದ್ದರು. ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಆರೋಪಿಗಳನ್ನು ಪಿಎಸೈ ಮಂಜುನಾಥ ಅವರ ತಂಡವು ಪತ್ತೆಹಚ್ಚಿದ್ದು, ಆರೋಪಿತರಿಂದ ಒಟ್ಟು 1,35,000/- ರೂಪಾಯಿ ನಗದು ಹಣ, ಹಾಗೂ ಸುಮಾರು 10 ಲಕ್ಷ ರೂ ಮೌಲ್ಯದ 05 ಮೊಬೈಲ್ ಗಳು, ನಾಲ್ಕು ಪ್ಯಾಸೇಂಜರ್ ಆಟೋ ಮತ್ತು ಒಂದು ಇಂಡಿಗೋ ಕಾರು, ಒಂದು ಬಂಗಾರದ ನೆಕ್ಲೇಸ್, ಒಂದು ಜೊತೆ ಬಂಗಾರದ ಬಳೆ, ಒಂದು ಬಂಗಾರದ ಕರಿ ಮಣಿ ಸರ, ಒಂದು ಜೊತೆ ಕಿವಿಯ ಓಲೆ [ಒಟ್ಟು 93 ಗ್ರಾಂ ತೂಕದ ಬಂಗಾರದ ಒಡವೆಗಳು] ಗಳನ್ನು ವಶಕ್ಕೆ ಪಡೆದಿದ್ದಾರೆ.
ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶಿಉದೇಶ್ ಟಿ.ಜೆ, ಪೊಲೀಸ್ ಉಪಾಧೀಕ್ಷಕ ಹೆಚ್. ಶ್ರೀನಿವಾಸ್, ಸಿಪಿಐ ನವೀನ್ ಬಿ ಮಾರ್ಗದರ್ಶನದಲ್ಲಿ, ಪಿಎಸ್ಸೈ ಮಂಜುನಾಥ.ಬಿ.ಸಿ. ನೇತೃತ್ವದಲ್ಲಿ ರಮೇಶ್ ಎ.ಎಸ್.ಐ, ಸಿಬ್ಬಂದಿಗಳಾದ ಏಜಾಜ್, ರಂಗನಾಥ ಕೆ, ಪ್ರಕಾಶ್, ನವೀನ್ ಕುಮಾರ್, ಶಿವಶಂಕರ್, ದಯಾಮಣಿ, ಮತ್ತು ಅಶ್ವಿನಿ ರವರುಗಳ ತಂಡ ಬಂಧಿಸಿದ್ದು ಎಸ್ಪಿ ಅವರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
