ತುಮಕೂರು :
ಅಂತರ್ಜಲ ಕುಸಿತಗೊಂಡಿರುವ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯ, ಮತ್ತು ಜಿಲ್ಲಾ ಪಂಚಾಯತ್ ತುಮಕೂರು ಇವರ ಸಹಯೋಗದೊಂದಿಗೆ ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಟಲ್ ಭೂಜಲ ಯೋಜನೆಯ ಕಾಮಗಾರಿ ಅನುಷ್ಟಾನದ ಕಾರ್ಯಕ್ರಮವನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಟಲ್ ಭೂಜಲ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು 25 ನೇ ಡಿಸೆಂಬರ್ 2019 ರಂದು ರಾಷ್ಟ್ರಕ್ಕೆ ಸಮರ್ಪಿಸಿರುತ್ತಾರೆ. ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ನೀರು ಬಳಕೆದಾರರ ಸಂಘಗಳನ್ನ ಬಳಸಿಕೊಂಡು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ನೀರನ್ನು ಸಮಗ್ರ ರೀತಿಯಲ್ಲಿ ನಿರ್ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳು ಅಂತರ್ಜಲ ಕುಸಿತದಿಂದ ಬರಪೀಡಿತ ಪ್ರದೇಶಗಳಾಗಿವೆ ಈ ಪ್ರದೇಶಗಳನ್ನು ಅಟಲ್ ಭೂಜಲ ಯೋಜನೆಯಡಿ 1200 ಕೋಟಿ. ರೂ.ಗಳ ಅನುದಾನದಲ್ಲಿ ಅಂತರ್ಜಲ ಮಟ್ಟವನ್ನು ಸುಸ್ಥಿರಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಈಗಾಗಲೇ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಿದ್ದೇವೆ ಅಲ್ಲದೆ ಈ ಯೋಜನೆಯನ್ನು ರಾಷ್ಟ್ರ ಮಟ್ಟದ ಅಧಿಕಾರಿಗಳು ವಿಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ರಾಷ್ಟ್ರದ ಎಲ್ಲಾ ಕಡೆ ಪುನರಾವರ್ತನೆ ಮಾಡಲು ಯೋಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಯೋಜನೆಯಡಿ ಅಂತರ್ಜಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭೂ ಪ್ರದೇಶದಿಂದ ವ್ಯರ್ಥವಾಗಿ ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸುವುದು, ಕೆರೆಗಳಿಗೆ ನೀರು ತುಂಬಿಸುವುದು, ಕೃಷಿ ಭೂಮಿಯಲ್ಲಿ ತಡೆ ಬದುಗಳನ್ನು ನಿರ್ಮಿಸಿ ನೀರನ್ನ ಇಂಗಿಸುವುದು, ಇದರ ಜೊತೆಗೆ ಭೂಮಿಯಿಂದ ನೀರು ಆವಿಯಾಗುವುದನ್ನು ತಡೆಯಲು ಮರಗಳನ್ನು ಹೆಚ್ಚಿಗೆ ಬೆಳೆಸಿ ಅರಣೀಕರಣ ಮಾಡುವುದು, ನೀರನ್ನ ವೈಜ್ಞಾನಿಕವಾಗಿ ಬಳಕೆ ಮಾಡುವುದು ಅನಧಿಕೃತವಾಗಿ ನೀರನ್ನು ವ್ಯರ್ಥ ಮಾಡದಂತೆ ಮೈಕ್ರೋ ಇರಿಗೇಷನ್ಗೆ ಬಹಳ ಒತ್ತು ಕೊಟ್ಟು ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ ರಾಜ್, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಮುಖೇನ ಈ ಯೋಜನೆಯನ್ನು ಅನಿಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಸುಮಾರು ಆರು ತಿಂಗಳಿಂದ ಶ್ರಮಪಟ್ಟು ಕಾರ್ಯಕ್ರಮ ರೂಪಿಸಿದ್ದು, ರಾಜ್ಯಾದ್ಯಾಂತ ವಿಸ್ತಾರ ಮಾಡಲಾಗುವುದು ಎಂದರು.
ಅಂತರ್ಜಲ ಶೋಷಿತ 41 ತಾಲ್ಲೂಕುಗಳಲ್ಲಿ ಅಟಲ್ ಭೂಜಲ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಯೋಜಿಸಿದ್ದು ಅಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜಲಾಭಿವೃದ್ಧಿಗೆ ಒತ್ತು ನೀಡುತ್ತೆವೆ. ಈ ಹಿನ್ನಲೆಯಲ್ಲಿ ಅಧ್ಯಯನ ಕೊಳವೆ ಬಾವಿಗಳನ್ನು (Observatory Borewells) ನಿರ್ಮಿಸಲಾಗುತ್ತಿದ್ದು ಅಂತರ್ಜಲದ ಮಟ್ಟವನ್ನು ವಾರಕ್ಕೊಮ್ಮೆ 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಪರೀಕ್ಷೀಸಿ ಅ ಭಾಗದ ನೆಲ,ಜಲದ ಪರಿಸ್ಥಿತಿ, ನೀರಿನ ಮಟ್ಟ ಇವೇಲ್ಲವುದರ ಮಾಹಿತಿಯನ್ನು ನೀಡಲಾಗುವುದು ಜೊತೆಗೆ ಬೆಳೆ ಪದ್ದತಿಯನ್ನ ಅಳವಡಿಸಿ ವ್ಯರ್ಥವಾಗುವ ನೀರನ್ನು ತಡೆದು ಕಡಿಮೆ ನೀರಿನಿಂದ ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯುವುದರ ಮಾಹಿತಿಯನ್ನ ಈ ಯೋಜನೆಯಲ್ಲಿ ಸ್ಥಾಪಿಸಲಾಗಿದೆ ಹಾಗೂ ವಿಶ್ವ ಬ್ಯಾಂಕ್ ಕೂಡಾ ಈ ಯೋಜನೆಯ ರೂಪುರೇಶೆಗಳು, ಅಂಶಗಳನ್ನು ತಿಳಿದು ಪ್ರಶಂಸನೀಯ ಪತ್ರ ಬರೆದಿದ್ದಾರೆ ಅದರಿಂದ ಈ ಯೋಜನೆಯು ವಿಶ್ವದ್ಯಾಂತ ಶ್ಲಾಘನೀಯ ಕಾರ್ಯಕ್ರಮ ವಾಗುವುದರಲ್ಲಿ ಅನುಮಾನ ವಿಲ್ಲ ಈ ನಿಟ್ಟಿನಲ್ಲಿ ಭೂಮಿಯ ಅಂತರ್ಜಲವನ್ನು ಹೆಚ್ಚಿಸಿ ನೀರನ್ನು ಪುನಶ್ಚೇತನಗೊಳಿಸಿ ಯಶಸ್ಸು ಸಾಧಿಸಬೇಕಾಗಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಅಂತರ್ಜಲ ನಿರ್ದೇಶನಾಲಯ ಮತ್ತು ಯೋಜನಾ ನಿರ್ದೇಶಕರಾದ ಎಂ. ರವಿಂದ್ರಪ್ಪ ಅವರು, ಅಟಲ್ ಭೂಜಲ ಯೋಜಯಡಿ ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ ಅತಿ ಶೋಷಿತ ಪ್ರದೇಶ ತಾಲ್ಲೂಕುಗಳ ಮೇಲೆ ಗಮನ ಹರಿಸಲಾಗಿದೆ ಹಾಗೆಯೆ ಕರ್ನಾಟಕದ 14 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿರುವ 1,199 ಗ್ರಾಮ ಪಂಚಾಯತಿಗಳ 39,703ಚ.ಕಿ.ಮೀ. ವಿಸ್ತಾರವಾದ ಪ್ರದೇಶವನ್ನು ಕಾರ್ಯಕ್ರಮದಡಿ ಗುರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೀಡಿಯೋ ಕಾನ್ಫರೇನ್ಸ್ನಲ್ಲಿ ಭಾಗವಹಿಸಿ ಮಾತನಾಡಿದ ಗೌರಿ ಬಿದನೂರು ತಾಲ್ಲೂಕಿನ ಶಾಸಕ ಶಿವಶಂಕರ್ ರೆಡ್ಡಿ ಅವರು, ರೈತರಿಗೆ ಅನುಕೂಲವಾಗಂತಹ ಕಾರ್ಯಕ್ರಮ ಇದಾಗಿದೆ. ಅಂತರ್ಜಲ ಕುಸಿಯುತ್ತಿರುವ ಸಮಯದಲ್ಲಿ ಈ ಯೋಜನೆ ಉಪಯೋಗಕರ ಗ್ರಾಮೀಣ ಪ್ರದೇಶಗಳಲ್ಲಿ ನೀರು ಉಳಿಸುವ ಉತ್ತಮ ಕೆಲಸ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ದತಿಗೆ ಹೆಚ್ಚು ಒತ್ತು ನೀಡಬೇಕೆಂದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶಾಸಕ ಶಿವಲಿಂಗೇಗೌಡ ಮಾತನಾಡಿ, ಬರಪೀಡಿತ ಪ್ರದೇಶಕ್ಕೆ ಹೇಳಿಮಾಡಿಸಿದ ಯೋಜನೆ ಇದನ್ನು ಅಭಿವೃದ್ಧಿಗೊಳಿಸಲು ಮುಂದಿನ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟು ಯೋಜನೆಯನ್ನು ಸಕಾರಗೊಳಿಸಬೇಕು ಅಂತರ್ಜಲ ಕುಸಿಯುತ್ತಿರುವುದರಿಂದ ಭೂ ಭಾಗದ ಜೀವ ಜಗತ್ತಿಗೆ ಬಹಳ ತೊಂದರೆಯಾಗುತ್ತಿದೆ ಎತ್ತಿನಹೊಳೆ ಮುಂತಾದ ಯೋಜನೆಗಳಡಿ ಕೆರೆ ತುಂಬಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದರೆ ಅಂತರ್ಜಲ ಮಟ್ಟ ಹೆಚ್ಚುವುದು ಎಂದರು.
ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಅಭಿನಂದಿಸುತ್ತೇನೆ ಈ ಕಾರ್ಯಕ್ರಮ ಹೆಚ್ಚಿನ ಯಶಸ್ಸು ಸಾಧಿಸಲಿ ನಮ್ಮ ಕ್ಷೇತ್ರ ಬರಪೀಡಿತವಾಗಿದ್ದು, ಅಂತರ್ಜಲ ಹೆಚ್ಚಿಸಲು ಹೆಚ್ಚು ಹೆಚ್ಚು ಚೆಕ್ಡ್ಯಾಂ ನಿರ್ಮಿಸಿ, ಅಂತರ್ಜಲ ಹೆಚ್ಚಿಸಲು ವಿಶೇಷವಾದ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ(ಪ್ರಭಾರ) ಡಾ.ಕೆ. ರಾಕೇಶ್ಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, , ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯಂಜಯ ಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಸಣ್ಣ ನೀರಾವರಿ ಇಲಾಖೆಯ ಇಇ ರವಿ ಎಸ್. ಸೂರನ್, ಎ.ಇ. ಕೆ.ಜಿ.ರವೀಂದ್ರ ಕುಮಾರ್, ಹಿರಿಯ ಭೂ ವಿಜ್ಞಾನಿ ಕೆ.ಎಸ್. ನಾಗವೇಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
