ತುಮಕೂರು :
ಅದು 1927 ಜು.16ನೇ ತಾರೀಖು. ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿ ಪ್ರಬಲಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ತುಮಕೂರಿಗೆ ಆಗಮಿಸಿ ಸರಕಾರಿ ಜೂನಿಯರ್ ಕಾಲೇಜು ಹಿಂಭಾಗದ ಕೊಠಡಿಯಲ್ಲಿ ನೆಲೆಸಿ ಹೋರಾಟದ ರೂಪುರೇಷೆ ಬಗ್ಗೆ ಸ್ಥಳೀಯ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿದ್ದರು. ಅಂತಹ ಮಹತ್ವದ ಸ್ಮಾರಕ ಸ್ಥಳ 94 ವರ್ಷ ಕಳೆದರೂ ಕಾಯಕಲ್ಪವಿಲ್ಲದೆ ಗೆದ್ದಲು ಹಿಡಿಯುತ್ತಿರುವುದು ರಾಷ್ಟ್ರಪಿತರ ಬಗ್ಗೆ ನಮ್ಮ ಜನಪ್ರತಿನಿಧಿಗಳು, ಆಡಳಿತಕ್ಕಿರುವ ಇಚ್ಚಾಶಕ್ತಿಗೆ ದ್ಯೋತಕವೆನಿಸಿದೆ.
ಗಾಂಧಿ 150ನೇ ವರ್ಷಾಚರಣೆ ನೆನಪಲ್ಲಿ 2019-20ನೇ ಸಾಲಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಸರಕಾರಕ್ಕೆ, ಗಾಂಧಿಯವರ ಕುರುಹಾಗಿ ಉಳಿದಿರುವ ಸ್ಥಳಗಳ ಸಂರಕ್ಷಣೆ ಮಾಡಿ ಯುವ ಪೀಳಿಗೆಗೆ ವಿಶ್ವದ ಮಹಾನ್ ಅಹಿಂಸಾವಾದಿ ಗಾಂಧಿಯನ್ನು ಪರಿಚಯಿಸುವ ಕಾರ್ಯ ಮಾಡಲು ಆಸಕ್ತಿ ಇಲ್ಲವೆಂಬುದು ಸರಕಾರಿ ಜೂನಿಯರ್ ಕಾಲೇಜು ಆವರಣದ ಗಾಂಧಿ ಭವನದ ಪ್ರಸಕ್ತ ಸ್ಥಿತಿ ನೋಡಿದರೆ ಪ್ರತ್ಯಕ್ಷವಾಗಿ ತಿಳಿಯುತ್ತದೆ.
2013ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ನಾಗರಿಕರ ಒತ್ತಾಯದ ಮೇರೆಗೆ ಶಾಸಕರಾಗಿದ್ದ ರಫೀಕ್ ಅಹಮದ್ ಅವರ ಅವಧಿಯಲ್ಲಿ ಒಮ್ಮೆ ಗಾಂಧಿ ಭವನಕ್ಕೆ ಸುಣ್ಣ ಬಣ್ಣ ಮಾಡಿ, ಸೋರುತ್ತಿದ್ದ ಮಾಳಿಗೆಯನ್ನು ದುರಸ್ತಿಗೊಳಿಸಿ ಅಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿದ್ದು ಬಿಟ್ಟರೆ ಸ್ಮಾರಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ಆಗಿಲ.್ಲ ಗಾಂಧಿ ಸ್ಮಾರಕ ಭವನವಿರುವ ಸರಕಾರಿ ಜೂನಿರ್ ಕಾಲೇಜು ಆವರಣದಲ್ಲಿ ಸ್ಮಾರ್ಟ್ ಸಿಟಿ ಕಟ್ಡಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಧೂಳು ಒಳ ಪ್ರವೇಶಿಸುತ್ತದೆ ಎಂಬ ಕಾರಣಕ್ಕೆ ಕಾಲೇಜಿನವರು ಭವನ ಬಂದ್ ಮಾಡಿ ಬೀಗ ಜಡಿಯಲಾಗಿದ್ದು, ಬೀಗ ಕಿಲುಬುಗಟ್ಟುವ ಸ್ಥಿತಿ ಬಂದು ತಲುಪಿದೆ. ಶತಮಾನದಷ್ಟು ಹಳೆಯದಾದ ಕಟ್ಟಡದ ಮರದ ಬಾಗಿಲಿನ ವಾಸ್ಕಲ್ ಕಿತ್ತು ಬರುವಂತಿದ್ದು, ಗೋಡೆಗೆ ಬಳಿದ ಬಣ್ಣ ಕಳಚುತ್ತಿದೆ. ಸುತ್ತಮತ್ತ ಗಿಡಗಂಟೆ ಬೆಳೆಯುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರು ತಂಗಿದ್ದ ನಿಲಯ ಕಾಯಕಲ್ಪಕ್ಕಾಗಿ ಎದುರುನೋಡುವಂತಾಗಿದೆ.
ಗಾಂಧಿ ಸ್ಮಾರಕ ಉಳಿಸಿ ಎನ್ನುವ ಕೂಗನ್ನು ಇಳಿವಯಸ್ಸಿನಲ್ಲಿರುವ ಸ್ವಾತಂತ್ರ್ಯಹೋರಾಟಗಾರರು ಹಾಕುವಂತಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಚಿಂತನೆ ಹರಿಸದಿರುವುದು ಏಕೆ ಎಂಬುದು ತಿಳಿಯದಾಗಿದೆ. ಬರೀ ಅ.2 ಗಾಂಧೀ ಜಯಂತಿಯಂದು ಹಾಗೂ ಅವರು ಹುತಾತ್ಮರಾದ ಜ.30ರ ಸರ್ವೋದಯ ದಿನಾಚರಣೆಯಂದು ಗಾಂಧೀಜಿಯವರ ತ್ಯಾಗ ಬಲಿದಾನವನ್ನು ಸ್ಮರಿಸಿ ಗಾಂಧೀಜಿಯನ್ನು ಮರೆಯುತ್ತಿರುವ ನಮ್ಮ ಆಡಳಿತ ರಾಷ್ಟ್ರಪಿತರ ಕುರುಹುಗಳನ್ನು ಉಳಿಸಲು ಇನ್ನಾದರೂ ಪ್ರಯತ್ನಿಸಬೇಕೆಂಬುದು ಪ್ರಜ್ಞಾವಂತರು, ಗಾಂಧಿವಾದಿಗಳ ಆಗ್ರಹವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಸ್ತಾಪಿಸಿದ್ದ ಗಾಂಧಿ ಸ್ಮಾರಕ ಕೇಂದ್ರ ನನೆಗುದಿಗೆ
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಹಿಂದೆ 1.18 ಕೋಟಿ ವೆಚ್ಚದಲ್ಲಿ ಸದರಿ ಕಾಲೇಜು ಮೈದಾನದಲ್ಲಿ ಗಾಂಧಿ ಸ್ಮಾರಕ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆಸಲ್ಲಿಸಲಾಗಿತ್ತು. ಆದರೆ ಮೈದಾನದಲ್ಲಿ ಯಾವುದೇ ಕಟ್ಡಡ ನಿರ್ಮಿಸಬಾರದೆಂಬ ಆದೇಶದ ಹಿನ್ನೆಲೆಯಲ್ಲಿ ಈ ಯೋಜನೆಗೆ ತಡೆಯಾಗಿದ್ದು, ಹಾಲಿ ಯಿರುವ ಗಾಂಧಿ ಸ್ಮಾರಕ ನಿಲಯವನ್ನೇ ಸಮಗ್ರ ಅಭಿವೃದ್ಧಿ ಪಡಿಸಬೇಕೆಂದು ಕಾಲೇಜು ಆಡಳಿತ ಮಂಡಳಿಯವರು ಸ್ಮಾರ್ಟ್ ಸಿಟಿಯವರಲ್ಲಿ ಕೋರಿದ್ದಾರೆ. ಆದರೆ ಅದೇಕೋ ಇನ್ನೂ ಕಾರ್ಯಗತ ಆಗಿಲ್ಲ. ಜಿಲ್ಲಾಮಟ್ಟದ ಸಮಿತಿಯ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದ್ದು, ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಜಿಲ್ಲೆಗೆ ಬಂದ ರಾಷ್ಟ್ರಪಿತನ ನೆನಪನ್ನು ಚಿರಸ್ಥಾಯಿಯಾಗಿಸಬೇಕಿದೆ.
ನಿರ್ಲಕ್ಷ್ಯಕ್ಕೊಳಗಾಗಿರುವ ಹಲವು ಗಾಂಧಿ ಸ್ಮಾರಕ ನಿಲಯಗಳನ್ನು ಸಂರಕ್ಷಣೆ ಮಾಡುವುದು ರಾಷ್ಟ್ರದ ಕೆಲಸ. ರಾಷ್ಟ್ರಪಿತನನ್ನು ಗೌರವಿಸುವ ಕೆಲಸ. ಇದನ್ನು ಆಡಳಿತದವರು ಹೇಳಿಸಿಕೊಂಡು ಮಾಡಬಾರದು. ಆದ್ಯತೆ ಮೇರೆಗೆ ಮುಂದಿನ ಪೀಳಿಗೆಗೆ ಗಾಂಧೀಜಿ ಜೀವನ ಸಂದೇಶದ ಕುರುಹುಗಳನ್ನು ಉಳಿಸಿ ತಲುಪಿಸುವ ಕಾರ್ಯ ಮಾಡಬೇಕು. ಗಾಂಧಿ ಸ್ಮಾರಕ ನಿಧಿ ಮನವಿ ಮೇರೆಗೆ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಜಿಲ್ಲೆಗೊಂದು ಗಾಂಧಿಭವನ ನಿರ್ಮಾಣಕ್ಕೆ ತಲಾ 3 ಕೋಟಿಯಂತೆ ಬಿಡುಗಡೆ ಮಾಡಲಾಗಿತ್ತು. 14 ಜಿಲ್ಲೆಗಳಲ್ಲಿ ಈಗಾಗಲೇ ಸ್ಥಾಪಿಸಿದ್ದು, ಉಳಿಕೆ ಜಿಲ್ಲೆಯಲ್ಲಿ ಇನ್ನೂ ಕಾರ್ಯಗತಗೊಂಡಿಲ್ಲ. ಆದಷ್ಟು ಬೇಗ ಇವುಗಳನ್ನು ಕಾರ್ಯಾನುಷ್ಟಾನಗೊಳಿಸಬೇಕು.
-ವುಡೇ.ಪಿ.ಕೃಷ್ಣ. ಅಧ್ಯಕ್ಷರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ.
ಗಾಂಧಿ ಸ್ಮಾರಕ ನಿಲಯವನ್ನು ಬರೀ ಆಧುನೀಕರಿಸಿ ಸುಮ್ಮನಾಗದೇ ವಿದ್ಯಾರ್ಥಿಗಳು ಪ್ರವಾಸಿಗರು ಬಂದು ನೋಡಿ ಗಾಂಧಿ ವಿಚಾರಧಾರೆಗಳನ್ನು ಅರಿವು ಮೂಡಿಸಿಕೊಳ್ಳುವಂತಹ ಕಾರ್ಯವಾಗಬೇಕು. ಸ್ವಾತಂತ್ರ್ಯ ಹೋರಾಟದ ಚರಿತ್ರೆ ಬಿಂಬಿಸುವ ಚಿತ್ರಗಳು, ಹೋರಾಟಕ್ಕೆ ಜಿಲ್ಲೆಯ ಕೊಡುಗೆ ಸಾರುವ ನೆನಪನ್ನು ಮುಂದಿನ ಪೀಳಿಗೆಗೆ ಮಾಡಿಕೊಡಬೇಕು.
-ಪ್ರೊ.ಕೆ.ಚಂದ್ರಣ್ಣ, ನಿವೃತ್ತ ಪ್ರಾಂಶುಪಾಲರು
ಗಾಂಧಿ ಸ್ಮಾರಕನಿಲಯವಿರುವ ಸ್ಥಳವನ್ನೇ ಸಮಗ್ರ ಅಭಿವೃದ್ಧಿ ಮಾಡುವಂತೆ ಕೋರಲಾಗಿದ್ದು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಜ್ಯೋತಿಗಣೇಶ್ ಸಹ ಸಮಗ್ರ ಅಭಿವೃದ್ಧಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಮಾರಕ ನಿಲಯದ ಸುತ್ತ ಕಾಮಗಾರಿ ನಡೆಯುತ್ತಿರುವುದರಿಂದ ನಿಲಯದ ಬಾಗಿಲು ನಿತ್ಯ ತೆರೆಯುತ್ತಿಲ್ಲ.
-ಡಿ.ಕೆ.ಜಯರಾಮಯ್ಯ, ಪ್ರಾಂಶುಪಾಲರು, ಸರಕಾರಿ ಜೂನಿಯರ್ ಕಾಲೇಜು.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
