ತುಮಕೂರು :
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಡಾ. ಬಿ.ಸಿ.ಶೈಲಾನಾಗರಾಜ್ ತಮ್ಮ ಅಪಾರ ಸ್ನೇಹಿತರ ಬಳಗದೊಂದಿಗೆ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ತಾವು ನಾಡು, ನುಡಿ ಸೇವೆ ಮಾಡಲು ಈ ಚುನಾವಣೆಗೆ ಸ್ಪರ್ಧಿಸಿದ್ದು, ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರಲ್ಲದೆ, ಇದುವರೆವಿಗೂ 4 ಕವನ ಸಂಕಲನಗಳು, 5 ಮಹಿಳಾ ಅಧ್ಯಯನ ಪುಸ್ತಕಗಳು, 6 ವಿಚಾರ ಕೃತಿಗಳು, 5 ವ್ಯಕ್ತಿ ಚಿತ್ರಗಳನ್ನು ಹೊರತಂದಿದ್ದು, ತಾವು ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಗೆ ವಿವಿಧ 9 ಪ್ರಶಸ್ತಿಗಳು ತಮಗೆ ಲಭಿಸಿರುವುದಾಗಿ ತಿಳಿಸಿದರು.
ಅಲ್ಲದೆ ತುಮಕೂರು ತಾಲ್ಲೂಕು & ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದೆ. ವಿವಿಧ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿರುವ ಅನುಭವವನ್ನು ಹೊಂದಿದ್ದೇನೆ. ಹಲವಾರು ಕವಿಗೋಷ್ಠಿ, ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಭಾಗಿಯಾಗಿದ್ದೇನೆ. ನಿರಂತರವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇನೆ.
ಮುಂದಿನ ದಿನಗಳಲ್ಲಿ ತಾವು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಲ್ಲಿ ತಮಗೆ ಮತವನ್ನು ನೀಡುವುದರ ಮೂಲಕ ಜಯಶೀಲಳನ್ನಾಗಿ ಮಾಡಿ, ಕನ್ನಡದ ಸೇವೆಯನ್ನು ಮಾಡಲು ಮತ್ತಷ್ಟು ಅವಕಾಶ ಕಲ್ಪಿಸಿಕೊಡುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ