ತುಮಕೂರು : ಮೇಯರ್-ಉಪಮೇಯರ್ ಚುನಾವಣೆ ; ನ್ಯಾಯಾಲಯದ ತೀರ್ಪಿನತ್ತ ಗಮನ!

ತುಮಕೂರು :

      ತುಮಕೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾಗಿ, ಈ ತಿಂಗಳ 26ರಂದು ನಿಗಧಿಯಾಗಿರುವ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನ್ಯಾಯಾಲಯದ ತೀರ್ಪನ್ನು ಅವಲಂಬಿಸಿದೆ.

      ಮೇಯರ್ ಸ್ಥಾನದ ಮೀಸಲಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಒಟ್ಟಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಮಂಗಳವಾರ ಪ್ರಕರಣ ಕೈಗೆತ್ತಿಕೊಂಡ ಕೋರ್ಟ್ ವಿಚಾರಣೆಯನ್ನು ಈ ತಿಂಗಳ 25ಕ್ಕೆ ಮುಂದೂಡಿದೆ. ಅಂದಿನ ತೀರ್ಪಿನ ಆಧಾರದಲ್ಲಿ ಮೇಯರ್ ಚುನಾವಣೆ ನಿರ್ಧಾರವಾಗಲಿದೆ.

      ನಗರ ಪಾಲಿಕೆಯ ಇತ್ತೀಚಿನ ಅವಧಿಯಲ್ಲಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕಲ್ಪಿಸಲಾಗಿತ್ತು. ಅತ್ಯಲ್ಪ ಅವಧಿಯಲ್ಲಿ ಮತ್ತೆ ಮೇಯರ್ ಸ್ಥಾನವನ್ನು ಅದೇ ವರ್ಗಕ್ಕೆ ನಿಗಧಿ ಮಾಡಿರುವುದನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಆಕ್ಷೇಪ ಮಾಡಿದ್ದಾರೆ. ಈ ಎರಡೂ ಪಕ್ಷದಲ್ಲಿ ಪರಿಶಿಷ್ಟ ಪಂಗಡದವರು ಆಯ್ಕೆಯಾಗಿಲ್ಲ. ಬಿಜೆಪಿಯಲ್ಲಿ ಏಕೈಕ ಸದಸ್ಯರಿದ್ದಾರೆ. ಈ ಕಾರಣಕ್ಕೆ ಪರಿಸ್ಥಿತಿಯ ಲಾಭ ಪಡೆದು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಬಿಜೆಪಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮಿಸಲಾತಿ ನಿಗಧಿ ಮಾಡಲಾಗಿದೆ ಎಂದು ಈ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.

      ಇತ್ತೀಚೆಗೆ ಜೆಡಿಎಸ್‍ನ ಶಾಸಕ ಎಸ್.ಆರ್.ಶ್ರೀನಿವಾಸ್, ಮುಖಂಡ ಗೋವಿಂದರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಕಾಂಗ್ರೆಸ್‍ನ ಮಾಜಿ ಶಾಸಕ ಡಾ.ರಫಿಕ್ ಅಹಮದ್ ಹಾಗೂ ಪಾಲಿಕೆಯ ಈ ಪಕ್ಷಗಳ ಸದಸ್ಯರು ಸಭೆ ಸೇರಿ ಮೇಯರ್ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನ ಮಾಡಿ, ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದರು.

      ನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇದೆ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‍ಗೆ ಮೇಯರ್ ಸ್ಥಾನವನ್ನು (ಫರೀದಾ ಬೇಗಂ), ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ(ಶಶಿಕಲಾ ಗಂಗಹನುಮಯ್ಯ) ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಎರಡು ಪಕ್ಷಗಳ ಮುಖಂಡರ ಮಾತುಕತೆಯಂತೆ ಈ ಅವಧಿಯಲ್ಲಿ ಮೇಯರ್ ಸ್ಥಾನ ಜೆಡಿಎಸ್‍ಗೆ ಸಿಗಬೇಕಾಗಿತ್ತು. ಹಾಗಾಗಿ, ಈ ಬಾರಿ ಜೆಡಿಎಸ್ ಸದಸ್ಯರಿಗೆ ಮೇಯರ್ ಹುದ್ದೆ ದೊರೆಯುತ್ತದೆ ಎಂದು ಆ ಪಕ್ಷದವರು ಖಷಿಯಾಗಿದ್ದರು. ಆದರೆ ಸರ್ಕಾರ ಪ್ರಕಟಿಸಿದ ಮೀಸಲಾತಿಯಿಂದ ಜೆಡಿಎಸ್ ಅಲ್ಲದೆ, ಕಾಂಗ್ರೆಸ್ ಸದಸ್ಯರಿಗೂ ನಿರಾಶೆಯಾಗಿತ್ತು. ಆದರೆ, ಬಿಜೆಪಿಯವರು ಅಧಿಕಾರ ಹಿಡಿಯಲು ನಿಯಮ ಉಲ್ಲಂಘನೆ ಮಾಡಿ ಮೇಯರ್ ಸ್ಥಾನದ ಮೀಸಲಾತಿ ನಿಗಧಿಯಲ್ಲಿ ತಮಗೆ ಅನುಕೂಲವಾಗುವಂತೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ಆಪಾದಿಸಿದರು.

      ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಈ ಬಗ್ಗೆ ಸದ್ಯರಲ್ಲಿ ಆಕ್ಷೇಪ ವ್ಯಕ್ತವಾಗಿಲ್ಲ. ತುಮಕೂರು ನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗಿದೆ. ಬಿಜೆಪಿ 12, ಕಾಂಗ್ರೆಸ್, ಜೆಡಿಎಸ್‍ನ ತಲಾ 10 ಸದಸ್ಯರಿದ್ದಾರೆ. ಜೊತೆಗೆ ಮೂವರು ಪಕ್ಷೇತರರಿದ್ದಾರೆ. ಬಿಜೆಪಿಗೆ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಪಕ್ಷೇತರರಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ 30ನೇ ವಾರ್ಡ್ ಸದಸ್ಯ ವಿಷ್ಣುವರ್ಧನ್ ಅವರ ಮತಗಳು ಸೇರಿ ಬಿಜೆಪಿ ಪರ 15 ಮತಗಳಾಗುತ್ತವೆ. ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಮತ ಸೇರಿದರೆ ಜೆಡಿಎಸ್‍ಗೆ 11 ಮತಗಳ ಅವಕಾಶವಿದೆ. ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗಲು ಕನಿಷ್ಟ 20 ಮತ ಪಡೆಯಬೇಕು. ಯಾವ ಪಕ್ಷವೂ 20 ಮತ ಬಲ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಈ ಅವಧಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ಹಿಡಿಯಲು ತೀರ್ಮಾನ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link