ತುರುವೇಕೆರೆ :
ತಾಲೂಕಿನ ಮಾಯಸಂದ್ರ ಹೋಬಳಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಮಸಾಲ ಜಯರಾಮ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ತಾಲೂಕಿನ ಮುತ್ತುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಿಕೆರೆ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-3 ಯೋಜನೆಯಡಿಯಲ್ಲಿ ಸುಮಾರು 496.82 ಲಕ್ಷ ವೆಚ್ಚದಲ್ಲಿ ನಾಗಲಾಪುರ ರಸ್ತೆಯಿಂದ ಬೀದಿಗಾನಹಳ್ಳಿ ಗ್ರಾಮದ ಮುಖಾಂತರ ಎನ್.ಹೆಚ್.150ಎ. ಗೆ ಸೇರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, 15-20 ವರ್ಷಗಳಿಂದ ಅಭಿವೃದ್ದಿಯನ್ನೇ ಕಾಣದ ಕೆಲ ಗ್ರಾಮಗಳಲ್ಲಿ ಮೂಲ ಭೂತ ಸೌಕರ್ಯದ ಕೊರತೆ ನೀಗಿಸಲು ಸಿ.ಸಿ.ರಸ್ತೆ, ಬಾಕ್ಸ್ ಚರಂಡಿ, ಡಾಂಬರ್ ರಸ್ತೆ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಕೊವಿಡ್ ಸಮಸ್ಯೆಯಿಂದ ತಾಲೂಕಿನ ಅಭಿವೃದ್ದಿಗೆ ಅನುದಾನ ಇಲ್ಲದೆ ಹಿನ್ನಡೆಯಾಗಿತ್ತು. ಇನ್ನು ಮುಂದೆ ಹೆಚ್ಚಿನ ಅನುದಾನ ತಂದು ತಾಲೂಕು ಅಭಿವೃದ್ದಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸವಿತಗಂಗಾಧರ್, ಮಾಜಿ ಸದಸ್ಯ ಬಿಎಮ್ಎಸ್ ಉಮೇಶ್, ನಾಗರಾಜು, ಪ್ರಭಣ್ಣ, ನಾಗಣ್ಣ, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ವಿ.ಬಿ.ಸುರೇಶ್, ನಾಗಲಾಪುರ ಮಂಜಣ್ಣ, ಶಿವಣ್ಣ, ಕಾಳಂಜೀಹಳ್ಳಿ ಸೋಮಣ್ಣ, ಕೆಂಪೇಗೌಡ, ಸೇರಿದಂತೆ ಗ್ರಾಮಸ್ಥರು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ