ನವದೆಹಲಿ :
ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ನೀಡಲಾಗುವ ಶೌರ್ಯ ಪ್ರಶಸ್ತಿಗೆ ರಾಜ್ಯದ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ ಸಾಹಸ ಮೆರೆದ ಮಕ್ಕಳಿಗೆ ನೀಡಲಾಗುವ ಶೌರ್ಯ ಪ್ರಶಸ್ತಿ 2019 ಇದೀಗ ಪ್ರಕಟವಾಗಿದೆ. ಇಂತಹ ಶೌರ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಕಳೆದ ಆಗಸ್ಟ್ನಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ಗೆ ದಾರಿ ಬಿಡಿಸಿ, ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ್ ಮತ್ತು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಆರತಿ ಪುರಸ್ಕಾರಕ್ಕೆ ಆಯ್ಕೆಯಾದವರು.
ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ವೆಂಕಟೇಶ್ ಮತ್ತು ಆರತಿ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜನವರಿ 26ರಂದು ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಲಿರುವ ಈ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರತಿ ಪ್ರಶಸ್ತಿಯು ಪ್ರಶಸ್ತಿ ಪದಕ, 1,00,000 ರೂ. ನಗದು, 10,000 ರೂ. ಮಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಹೊಂದಿರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
