ಬೆಂಗಳೂರು:
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯದಲ್ಲಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ಸಂಬಂಧಿಸಿದಂತೆ ಶನಿವಾರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗುರುವಾರ ಹುಲಿಗಳ ಕಳೇಬರ ಪತ್ತೆಯಾಗಿದ್ದು, ನಂತರದ ತನಿಖೆಯಲ್ಲಿ ಅವುಗಳಿಗೆ ವಿಷಪ್ರಾಶನ ಮಾಡಿರುವುದು ತಿಳಿದುಬಂದಿದೆ.
ಹುಲಿಗಳು ಮೃತಪಟ್ಟಿದ್ದ ಜಾಗದ ಸಮೀಪವೇ ಮಾದ ಅಲಿಯಾಸ್ ಮಾದುರಾಜು ಎಂಬಾತನಿಗೆ ಸೇರಿದ ಹಸುವಿನ ಮೃತದೇಹ ಪತ್ತೆಯಾದ ನಂತರ ವಿಷಪ್ರಾಶನ ಮಾಡಿರುವ ಕುರಿತು ಬೆಳಕಿಗೆ ಬಂದಿತ್ತು.ಪೊಲೀಸರ ಪ್ರಕಾರ, ‘ಕೆಂಚಿ’ ಎಂಬ ಹೆಸರಿನ ತನ್ನ ಹಸುವನ್ನು ಹುಲಿಗಳು ಬೇಟೆಯಾಡಿದ ನಂತರ ಮಾದುರಾಜು ಕೋಪಗೊಂಡಿದ್ದ. ಈ ನಷ್ಟದ ಸೇಡು ತೀರಿಸಿಕೊಳ್ಳಲು ಆತ ಹಸುವಿನ ಶವದ ಮೇಲೆ ವಿಷವನ್ನು ಸಿಂಪಡಿಸಿದ್ದ ಎಂದು ವರದಿಯಾಗಿದೆ.
ಕೃತ್ಯದ ಸಮಯದಲ್ಲಿ ಅವನ ಸ್ನೇಹಿತ ನಾಗರಾಜು ಕೂಡ ಆತನ ಜೊತೆಗಿದ್ದನೆಂದು ತಿಳಿದುಬಂದಿದೆ. ಆರಂಭದಲ್ಲಿ ಹಸುವನ್ನು ಬೇಟೆಯಾಡಿದ್ದ ಹುಲಿ, ತನ್ನ ಮರಿಗಳೊಂದಿಗೆ ಬಂದು ಮತ್ತೆ ಅದನ್ನು ತಿಂದಾಗ ವಿಷದಿಂದಾಗಿ ಸಾವಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.ಶಂಕಿತರಿಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಮೂಲದ ‘ಅರಣ್ಯ ಭವನ’ಕ್ಕೆ ಕರೆದೊಯ್ಯಲಾಗಿದೆ.
ತನಿಖೆಯ ಸಮಯದಲ್ಲಿ, ಮಾದುರಾಜು ತಂದೆ ಶಿವಣ್ಣ ಪೊಲೀಸರನ್ನು ಸಂಪರ್ಕಿಸಿ ಹುಲಿಗಳ ಸಾವಿಗೆ ತಾನೇ ಕಾರಣ ಎಂದು ಹೇಳಿಕೊಂಡಿದ್ದರು. ಆದರೆ, ತನಿಖೆಯಲ್ಲಿ ಅವರ ಮಗ ಭಾಗಿಯಾಗಿರುವುದು ಬಹಿರಂಗವಾದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
