ಚಿತ್ರದುರ್ಗ:
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಕಾರ್ಮಿಕರಿಗೆ ಅನ್ಯಾಯ; ಹಾಜಿ ಅನ್ವರ್ ಸಾಬ್
ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೇ ತತ್ತರಿಸಿರುವ ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮರ್ಪಕ ರೀತಿಯಲ್ಲಿ ಪರಿಹಾರ ವಿತರಿಸದೇ ಅನ್ಯಾಯವೆಸಗಿದೆ ಎಂದು ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟೆಕ್) ರಾಜ್ಯ ಗೌರವಾಧ್ಯಕ್ಷರಾದ ಹಾಜಿ ಅನ್ವರ್ ಸಾಬ್ ಅವರು ಹೇಳಿದರು.
ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟೆಕ್), ಬಡಗಿ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಜಾದ್ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆಯಿಂದ ನೀಡಲಾದ ಪೌಷ್ಠಿಕಾಂಶದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಮಿಕರು, ಕೋವಿಡ್ ಸಮಯದಲ್ಲಿ ಜೀವನ ನಿರ್ವಹಣೆಗೆ ತೀವ್ರ ಪರದಾಡಿದರು. ಕೆಲಸವಿಲ್ಲದೇ ಕೈ ಚೆಲ್ಲಿ ಕುಳಿತರು. ಇಂತಹ ಕಾರ್ಮಿಕರುಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಾಗಿತ್ತು. ಆದರೆ ಅತಿ ಕನಿಷ್ಠ ಮಟ್ಟದಲ್ಲಿ ಪರಿಹರ ನೀಡಿ ಕಾರ್ಮಿಕರನ್ನು ವಂಚಿಸಿತು. ದೊರೆಯುವ ಅಲ್ಪ ಪ್ರಮಾಣದ ಪರಿಹಾರಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಟೆಕ್ ರಾಜ್ಯಾಧ್ಯಕ್ಷ ಎ.ಜಾಕೀರ್ ಹುಸೇನ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಕಾರ್ಮಿಕರಿಗೊಂದು ನೀತಿ, ವುಳ್ಳವರಿಗೊಂದು ನೀತಿ ಜಾರಿ ಮಾಡಿ, ಒಂದು ಕಣ್ಣಿಗೆ ಸುಳ್ಳು ಹಾಗೂ ಮತ್ತೊಂದು ಕಣ್ಣಿಗೆ ಬೆಣ್ಣೆ ನೀಡುವಂತಹ ಕಾರ್ಯ ಮಾಡಿದೆ. ಸಾಕಷ್ಟು ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇಂದಿಗೂ ಕೆಲಸವಿಲ್ಲದೇ ಅಲೆಯುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದಲ್ಲಿ ಕಾರ್ಮಿಕರ ನಿಧಿಯಲ್ಲಿ ಸಾಕಷ್ಟು ಹಣವಿದೆ. ಈ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ, ಸಮರ್ಪಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೊರೋನಾ ನಂತರ ಈ ದಿನಗಳಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಟೆಕ್ ಉಪಾಧ್ಯಕ್ಷರಾದ ಜಮೀಲ್, ಚಾಂದ್ಪೀರ್, ರಾಜಣ್ಣ, ಎಸ್.ಬಸವರಾಜ್, ಎಂ.ಡಿ.ಅಸ್ಲಾಂ, ಶಫೀವುಲ್ಲಾ, ಅಲ್ತಾಫ್ ಸೇರಿದಂತೆ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
