ಬೆಂಗಳೂರು
ವರ್ತೂರು ರಸ್ತೆಯ ಮಾರತಹಳ್ಳಿ ಸೇತುವೆ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಗುರುವಾರದಿಂದಲೇ (ಅ.03) ಈ ಸಂಚಾರ ಬದಲಾವಣೆ ಜಾರಿಗೆ ಬಂದಿದೆ.
ಹೊರವರ್ತುಲ ರಸ್ತೆ ಕೆ.ಎಲ್.ಎಂ ಸರ್ವೀಸ್ ರಸ್ತೆಯಿಂದ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸುವ ವಾಹನಗಳನ್ನು ಪ್ರತಿನಿತ್ಯ ಬೆಳಗ್ಗೆ 07.00 ಗಂಟೆಯಿಂದ 11.00 ಗಂಟೆಯವರೆಗೆ ಮತ್ತು ಸಂಜೆ 04.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ . ಹೊರವರ್ತುಲ ರಸ್ತೆ ಕೆ.ಎಲ್.ಎಂ ಸರ್ವೀಸ್ ರಸ್ತೆ ಕಡೆಯಿಂದ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸುವ ಲಘು ವಾಹನ ಸವಾರರು ಆಕಾಶ್ ವಿಹಾರ್ ವಸತಿ ಗೃಹದ ಮುಂಭಾಗದಲ್ಲಿ ‘ಯು’ ಟರ್ನ್ ಪಡೆದು ಮಾರತಹಳ್ಳಿ ಬ್ರಿಡ್ಜ್ ಮುಖಾಂತರ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸಬಹುದಾಗಿದೆ.
ಭಾರಿ ವಾಹನ ಚಾಲಕರು ತುಳಸಿ ಟಾಕೀಸ್ ಜಂಕ್ಷನ್ನಲ್ಲಿ ‘ಯು’ ಟರ್ನ್ ಪಡೆದು ಮಾರತಹಳ್ಳಿ ಬ್ರಿಡ್ಜ್, ಮುಖಾಂತರ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸಬಹುದಾಗಿದೆ.ಇದೇ ಸಮಯದಲ್ಲಿ ಪಾದಚಾರಿಗಳು ರಸ್ತೆ ದಾಟುವುದನ್ನು ಸಹ ನಿರ್ಬಂಧಿಸಲಾಗಿದೆ. ವರ್ತೂರು ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ದಾಟಲು ಪಾದಚಾರಿಗಳು ಸ್ಕೈವಾಕ್ ಅನ್ನು ಬಳಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಟಿಸಿದ್ದಾರೆ.
