ನವದೆಹಲಿ:
ನವೆಂಬರ್ 25ರಂದು ಮಧ್ಯ ಇಂಗ್ಲೆಂಡ್ನ ವೋರ್ಸೆಸ್ಟರ್ನಲ್ಲಿ ಇರಿತಕ್ಕೊಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾರ್ಬೋರ್ನ್ ರಸ್ತೆಯಲ್ಲಿ 30 ವರ್ಷದ ವಿಜಯ್ ಕುಮಾರ್ ಶಿಯೋರನ್ ತೀವ್ರ ಗಾಯಗಳೊಂದಿಗೆ ಪತ್ತೆಯಾಗಿದ್ದರು. ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು .
ಶಂಕಿತ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಂತೆ ಅವರೆಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆರಂಭದಲ್ಲಿ ಬಂಧಿಸಲ್ಪಟ್ಟಿದ್ದ 6ನೇ ವ್ಯಕ್ತಿ ಆರೋಪಮುಕ್ತಗೊಂಡಿದ್ದಾನೆ. ಪತ್ತೇದಾರಿ ಮುಖ್ಯ ಇನ್ಸ್ಪೆಕ್ಟರ್ ಲೀ ಹೋಲ್ಹೌಸ್ ಮೃತಪಟ್ಟ ಯುವಕನ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ಸಂಬಂಧ ಮತ್ತಷ್ಟು ತನಿಖೆ ನಡೆಯುತ್ತಿದೆ.
ಕೊಲೆಯಾದ ವಿಜಯ್ ಕುಮಾರ್ ಶಿಯೋರನ್, ಹರಿಯಾಣದ ಚಾರ್ಕಿ ದಾದ್ರಿ ಜಿಲ್ಲೆಯ ಜಗ್ರಾಂಬಸ್ ಗ್ರಾಮದವರು. ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಈ ವರ್ಷದ ಆರಂಭದಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅವರು ಇಂಗ್ಲೆಂಡ್ನಲ್ಲಿ ಉನ್ನತ ವ್ಯಾಸಂಗ ಮಾಡಲು ಆ ಹುದ್ದೆಯನ್ನು ತೊರೆದಿದ್ದರು.
ಶಿಯೋರನ್ ಬ್ರಿಸ್ಟಲ್ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದಲ್ಲಿ (UWE) ವ್ಯಾಸಂಗ ಮಾಡುತ್ತಿದ್ದರು. ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜತಾಂತ್ರಿಕ ಹಸ್ತಕ್ಷೇಪವನ್ನು ಮೃತನ ಸಹೋದರ ಕೋರಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ, ರವಿ ಕುಮಾರ್ ತಮ್ಮ ಸಹೋದರನ ದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ದುರದೃಷ್ಟಕರ ಘಟನೆಯಿಂದ ಕುಟುಂಬವು ದಿಗ್ಭ್ರಮೆಗೊಂಡಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಕುಟುಂಬವು ಮೃತದೇಹವನ್ನು ವಾಪಸ್ ತರಲು ಅಗತ್ಯವಿರುವ ವಿದೇಶಿ ಪ್ರಕ್ರಿಯೆಗಳು, ಕಾನೂನು ಪ್ರಕ್ರಿಯೆಗಳು, ದಾಖಲೆಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದೆ. ಭಾರತೀಯ ಹೈ ಕಮಿಷನ್ (ಇಂಗ್ಲೆಂಡ್)ಗೆ ತಕ್ಷಣ ಸಹಾಯ ನೀಡಲು ನಿರ್ದೇಶನ ನೀಡುವಂತೆ, ಅಗತ್ಯ ದಾಖಲೆಗಳ ನಿರ್ವಹಣೆ, ಅಧಿಕಾರಿಗಳೊಂದಿಗೆ ಸಂಯೋಜನೆ, ಮತ್ತು ಸಾರಿಗೆ ವ್ಯವಸ್ಥೆ ಮಾಡಲು ಸಹಾಯ ಮಾಡುವಂತೆ ವಿನಂತಿಸಿದೆ.
ಶಿಯೋರನ್ ಅವರ ದುರಂತ ಸಾವು ತಮಗೆ ಆಘಾತ ತಂದಿದೆ ಎಂದು ಹರಿಯಾಣದ ಬಿಜೆಪಿ ಶಾಸಕ ಸುನಿಲ್ ಸತ್ಪಾಲ್ ಸಾಂಗ್ವಾನ್ ಹೇಳಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕು, ವಿಶೇಷವಾಗಿ ಮೃತದೇಹಗಳನ್ನು ತ್ವರಿತವಾಗಿ ಸ್ವದೇಶಕ್ಕೆ ರವಾನಿಸಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ದುಃಖದ ಕ್ಷಣದಲ್ಲಿ ನಾವು ಅವರ ಜತೆಗೆ ದೃಢವಾಗಿ ನಿಂತಿದ್ದೇವೆ ಅವರು ಎಕ್ಸ್ನಲ್ಲಿ ಬರೆದಿದ್ದಾರೆ.








