ಲಂಡನ್:
18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ನಲ್ಲಿ ಪಂಜಾಬ್ ವಿರುದ್ಧ 6 ರನ್ಗಳ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಕಪ್ ಗೆದ್ದು ಸಂಭ್ರಮಿಸಿತು. ತಂಡದ ಈ ಗೆಲುವವನ್ನು ಅಭಿಮಾನಿಗಳು ದೀಪಾವಳಿಗಿಂತಲೂ ಹೆಚ್ಚಿನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಂಡದ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ ಕೂಡ ಆರ್ಸಿಬಿ ತಂಡಕ್ಕೆ ಅಭಿನಂದಿಸಿದ್ದು, ತಂಡ ಮತ್ತು ವಿರಾಟ್ ಕೊಹ್ಲಿಯ ಬಗ್ಗೆ ಭಾವುಕ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಲ್ಯ, ‘ನಾನು ಆರ್ಸಿಬಿಯನ್ನು ಸ್ಥಾಪಿಸಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆ, ಅವರು 18 ವರ್ಷಗಳ ಕಾಲ ಆರ್ಸಿಬಿಯೊಂದಿಗೆ ಇದ್ದು ಚಾಂಪಿಯನ್ ಆಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ‘ಆರ್ಸಿಬಿ ಇತಿಹಾಸದಲ್ಲಿ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಅಳಿಸಲಾಗದ ಭಾಗವಾಗಿದ್ದಾರೆ. ಕೊನೆಗೂ ಐಪಿಎಲ್ ಟ್ರೋಫಿ ಬೆಂಗಳೂರಿಗೆ ಆಗಮಿಸುತ್ತಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು, ಮತ್ತೊಮ್ಮೆ ಧನ್ಯವಾದಗಳು. ಆರ್ಸಿಬಿ ಅಭಿಮಾನಿಗಳು ಟ್ರೋಫಿಗೆ ಅರ್ಹರು. ಈ ಸಲ ಕಪ್ ನಮ್ದೇ’ ಎಂದು ಬರೆದುಕೊಂಡಿದ್ದಾರೆ. ಮಲ್ಯ ಈಗ ದೇಶ ತೊರೆದು ಲಂಡನ್ನಲ್ಲಿದ್ದರೂ ಕೂಡ ಅಂದು ಅವರು ಆರ್ಸಿಬಿ ಎಂಬ ತಂಡವನ್ನು ನಿರ್ಮಿಸದೇ ಹೋಗಿದ್ದರೆ ಇಂದು ನಾವೆಲ್ಲ ಸಂಭ್ರಮಿಸುವ ಸೌಭಾಗ್ಯ ಸಿಗದೆಯೂ ಇರುತ್ತಿತ್ತು.
ಆರ್ಸಿಬಿ ಪರ ವಿರಾಟ್ ಕೊಹ್ಲಿ ಇದುವರೆಗೂ ಆಡುತ್ತಿದ್ದಾರೆ ಎಂದರೆ ಅದಕ್ಕೆ ಅಂದು ಫ್ರಾಂಚೈಸಿ ಮಾಲಕರಾಗಿದ್ದ ವಿಜಯ್ ಮಲ್ಯ ಕೂಡ ಕಾರಣ. 2011ರ ಹರಾಜಿನ ವೇಳೆ ಆರ್ಸಿಬಿ ಅಷ್ಟಾಗಿ ಕ್ರಿಕೆಟ್ನಲ್ಲಿ ಪರಿಚಿತನಲ್ಲದ ವಿರಾಟ್ ಕೊಹ್ಲಿಯನ್ನು ಮಾತ್ರ ರೀಟೈನ್ ಮಾಡಿ ಉಳಿದ ಎಲ್ಲ ಆಟಗಾರರನ್ನು ಕೈಬಿಟ್ಟಿತ್ತು. ಅಂದು ಮಲ್ಯ ಅವರು ಕೊಹ್ಲಿಯನ್ನು ರೀಟೈನ್ ಮಾಡಿದ್ದ ವೇಳೆ ಒಂದು ಮಾತನ್ನು ಹೇಳಿದ್ದರು, ಕೊಹ್ಲಿ ಚಾಂಪಿಯನ್ ಆಟಗಾರ. ಭವಿಷ್ಯದಲ್ಲಿ ವಿಶ್ವ ಶ್ರೇಷ್ಠ ಕ್ರಿಕೆಟಿಗನಾಗುದಲ್ಲಿ ಅನುಮಾನ ಬೇಡ ಎಂದು ಹೇಳಿದ್ದರು. ಅಂದು ಮಲ್ಯ ನುಡಿದಿದ್ದ ಭವಿಷ್ಯದಂತೆ ಕೊಹ್ಲಿ ವಿಶ್ವ ಕ್ರಿಕೆಟ್ನ ಸಾಮ್ರಾಟನಾಗಿ ಮೆರೆದಿದ್ದಾರೆ.
