ವಿಜಯೇಂದ್ರಗೆ ಮತ್ತೊಂದು ಶಾಕ್ ಕೊಟ್ಟ ಯತ್ನಾಳ್…..!

ಕಲಬುರಗಿ

     ವಕ್ಪ್ ವಿಚಾರದಲ್ಲಿ ಕರ್ನಾಟಕ ಬಿಜೆಪಿಯಲ್ಲಿನ ಅಂತರ್ಯುದ್ಧ ಮುಂದುವರಿದಿದೆ. ರಾಜ್ಯ ಬಿಜೆಪಿಯಿಂದ ಅಧಿಕೃತವಾಗಿ ವಕ್ಪ್ ಹೋರಾಟ ಕುರಿತ ಪ್ರವಾಸ ತಂಡದಲ್ಲಿ ಸೇರ್ಪಡೆ ಮಾಡಿದ್ದರೂ ಪ್ರತ್ಯೇಕ ಮಿತ್ರಕೂಟದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡ ಬೀದರ್ ನಿಂದ ಇಂದು ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದೆ‌.

    ಯತ್ನಾಳ್ ತಂಡದ ಅಭಿಯಾನದಿಂದ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡಿದ್ದರೆ, ಬೀದರ್ ಜಿಲ್ಲಾಧ್ಯಕ್ಷರಂತೂ ಯಾರೋ ಅನಾಮಿಕರು ಬಿಜೆಪಿ ಬ್ಯಾನರ್ ನಲ್ಲಿ ವಕ್ಪ್ ಹೋರಾಟ ಮಾಡುತ್ತಿದ್ದಾರೆ. ಅನುಮತಿ ಪಡೆಯದೇ ಬಿಜೆಪಿ ಚಿಹ್ನೆ ಬಳಸಿರುವ ಕಾರಣ ಬ್ಯಾನರ್ ತೆರವುಗೊಳಿಸುವಂತೆ ಪೊಲೀಸ್ ದೂರು ನೀಡಿದ್ದಾರೆ. ಇತ್ತ ರಾಜ್ಯ ಬಿಜೆಪಿ ಕೂಡಾ ಯತ್ನಾಳ್ ಹೋರಾಟಕ್ಕೂ ಪಕ್ಷಕ್ಕೂ ಸಂಬಂಧಿವಿಲ್ಲ ಎಂದು ಸ್ಪಷ್ಟಪಡಿಸಿಬಿಟ್ಟಿದೆ. ಇದೆಲ್ಲದರ ಮಧ್ಯ ಯತ್ನಾಳ್, ನಾವು ಹೊಸ ಟೀಂ ಕಟ್ಟೋಣ ಎನ್ನುವ ಸಂದೇಶ ರವಾನಿಸಿದ್ದಾರೆ. 

   ಇವರೆಲ್ಲ ಒರಿಜನಲ್ ಕಾರ್ಯಕರ್ತರಲ್ಲ. ಇವರೆಲ್ಲರೂ ರಾತ್ರಿ ಕಾಂಗ್ರೆಸ್ ನಾಯಕರ ಜೊತೆಯಲ್ಲೇ ಇರುತ್ತಾರೆ. ಬೆಳಗ್ಗೆ ಇಲ್ಲಿ ಜೈಶ್ರೀರಾಮ್​ ಅಂತಾರೆ, ಅಂತಹವರು ನಮಗೆ ಬೇಡ. ನಾವು ಹೊಸ ಟೀಂ ಕಟ್ಟೋಣ, ನೀವೇನೂ ತಲೆಕೆಡಿಸಿಕೊಳ್ಳಬೇಡಿ ಎಂದು ಎಂದು ಬಹಿರಂಗವಾಗಿಯೇ ಕರೆ ಕೊಟ್ಟಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪಿಕೊಳ್ಳುವುದಿಲ್ಲ ಎನ್ನುವ ಸಂದೇಶವನ್ನು ಮತ್ತೊಮ್ಮೆ ನೀಡಿದ್ದಾರೆ. 

   ಕಲಬುರಗಿಯಲ್ಲಿ ಇವತ್ತು ನಮ್ಮ ಪಕ್ಷದ ಬಹಳಷ್ಟು ಮುಖಂಡರು ನಮ್ಮ ಜೊತೆ ಬರಲಿಕ್ಕಿಲ್ಲ‌. ಈಗ ರಾಜಕುಮಾರ್ ಪಾಟೀಲ್ ತೇಲ್ಕೂರ ಬಂದಿದ್ದಾರೆ. ಮುಂದೆ ಒಬ್ಬೊಬ್ಬರೇ ನಮ್ಮ ಜೊತೆ ಬರುತ್ತಾರೆ. ಮುಂದೆ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತೆ‌. ಹೈಕಮಾಂಡ್ ಗೆ ನನ್ನ ವಿರುದ್ದ ಪತ್ರ ಬರೆಯುತ್ತಿರುವುದು ಹೊಸದೇನೂ ಅಲ್ಲ‌. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ರೂಮ್ ತುಂಬಿವೆ‌. ಆದರೆ ಏನು ಮಾಡಕ್ಕಾಗಿಲ್ಲ‌ ಎಂದು ಮತ್ತೊಮ್ಮೆ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು. 

   ಬಿ.ವೈ.ವಿಜಯೇಂದ್ರ ಹೋರಾಟನೇ ಮಾಡಲ್ಲ. ವಿಜಯೇಂದ್ರ ವಕ್ಫ್​​ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ? ಯಾವ ಹಳ್ಳಿಗೆ ಹೋಗಿ ರೈತರ ಮನವಿ ಸ್ವೀಕರಿಸಿದ್ದಾನೆ ತೋರಿಸಿ. ರಾತ್ರಿಯಾದ್ರೆ ಸಾಕು ಡಿಕೆ-ಸಿದ್ದರಾಮಯ್ಯ ಮನೆಯಲ್ಲಿ ಇರ್ತಾರೆ. ಅವರು ಎಲ್ಲಿ ರೈತರ ಪರವಾಗಿ ಹೋರಾಟ ಮಾಡ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೂರೆಂಟು ಕೇಸ್ ಇದೆ. ಕಾಪಾಡೋ ಶಿವಪ್ಪ ಅಂತಾ ಡಿಸಿಎಂ ಡಿಕೆ ಮನೆಯಲ್ಲಿ ಇರ್ತಾರೆ. ಕಾಪಾಡೋ ಸಿದ್ದರಾಮಯ್ಯ ಅಂತಾ ಅವರ ಮನೆಯಲ್ಲಿ ಇರ್ತಾರೆ ಎಂದು ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

   ಹೊಸ ಟೀಂ ಕಟ್ಟೋಣ ಎನ್ನುವ ಯತ್ನಾಳ್​ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಈ ಸಂಬಂಧ ವಿಜಯೇಂದ್ರ ಬಣ ಯಾವ ರೀತಿ ಹೆಜ್ಜೆ ಇಡುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಈ ಹೇಳಿಕೆಯನ್ನು ಗಮನಿಸಿದರೆ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಹೊಸ ತಂಡ ರಚನೆ ಮಾಡುವ ಸುಳಿವು ಸಹ ಕೊಟ್ಟಂತಿದೆ. 

   ಈ ಮಧ್ಯೆ ಯತ್ನಾಳ್ ಟೀಮ್ ಇಂದಿನಿಂದ ವಕ್ಪ್ ಜನ ಜಾಗೃತಿ ಅಭಿಯಾನ ಆರಂಭಿಸಿದೆ. ಆದರೆ ಬೀದರರ್ ಜಿಲ್ಲೆಯಲ್ಲಿರುವ ವಿಜಯೇಂದ್ರ ಮತ್ತು ಯಡಿಯೂರಪ್ಪ ಆಪ್ತ ಶಾಸಕರು ಯಾರೂ ಅಭಿಯಾನದತ್ತ ತಲೆ ಹಾಕಿಲ್ಲ. ಇನ್ನು ಇಂದು(ನವೆಂಬರ್ 26) ಕಲಬುರಗಿಯಲ್ಲೂ ಸಹ ಬಿಎಸ್​ವೈ ಬಣದಲ್ಲಿ ಗುರುತಿಸಿಕೊಂಡಿರುವ ಅವಿನಾಶ್ ಜಾಧವ್ ಹಾಗೂ ಬಸವರಾಜ್ ಮುತ್ತಿಮೂಡ್ ಯತ್ನಾಳ್ ಅಭಿಯಾನಕ್ಕೆ ಗೈರಾಗಿದ್ದಾರೆ.  

   ಯತ್ನಾಳ್ ಟೀಮ್ ಅಭಿಯಾನ ಮುಂದುವರಿಯುತ್ತಿದ್ದಂತೆಯೇ ಇತ್ತ ಯತ್ನಾಳ್ ವಿರುದ್ಧ ಕ್ರಮದ ವಿಚಾರದಲ್ಲೂ ವಿಜಯೇಂದ್ರ ಗಂಭೀರವಾಗುತ್ತಿದ್ದಾರೆ. ಈಗಾಗಲೇ ಯತ್ನಾಳ್ ನಡೆ ಬಗ್ಗೆ ಹೈಕಮಾಂಡ್ ಗೆ ಮಾಹಿಗಿ ರವಾನಿಸಲ್ಪಟ್ಟಿದ್ದು, ಸಂಸತ್ ಅಧಿವೇಶನದ ವೇಳೆ ಖುದ್ದು ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆಗೆ ಮುಂದಾಗಿದ್ದಾರೆ.

   ಒಟ್ಟಾರೆ ಬೆಳಗಾವಿ ಅಧಿವೇಶನದಲ್ಲಿ ಒಟ್ಟಾಗಿ ವಕ್ಪ್ ವಿಚಾರವಾಗಿ ಒಟ್ಟಾಗಿ ಹೋರಾಡಬೇಕಿದ್ದ ವಿಪಕ್ಷ ಬಿಜೆಪಿ ಈಗಾಗಲೇ ಎರಡು ಭಾಗವಾಗಿದ್ದು, ಅಧಿವೇಶನ ಆರಂಭವಾಗುವ ಹೊತ್ತಿಗೆ ಇನ್ಯಾವ ಸ್ವರೂಪಕ್ಕೆ ತಿರುಗುತ್ತದೋ ಎಂಬ ಕುತೂಹಲ ಈಗ ಶುರುವಾಗಿದೆ.

Recent Articles

spot_img

Related Stories

Share via
Copy link