ತುಮಕೂರು :
ಇಂದು ಶ್ರೀ ಶಿವಕುಮಾರಸ್ವಾಮೀಜಿಯವರ 118 ಜನ್ಮದಿನದ ಅಂಗವಾಗಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಲ್ಲಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶ್ರೀಗಳ ಮಠದಲ್ಲಿ ರಾಜಕೀಯದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾತನಾಡಿದ್ದಾರೆ. ಯತ್ನಾಳ್ ಅವರ ಉಚ್ಛಟನೆಯ ಬಗ್ಗೆ ಸ್ಪೋಟಕ ಹೇಳಿಕೆಯನ್ನು ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. ಅಧಿಕಾರ ನೀಡಿದ ಮತದಾರರಿಗೆ ಈ ಸರ್ಕಾರ ಶಾಪಗ್ರಸ್ಥವಾಗಿದೆ. ವಿದ್ಯುತ್ ಯೂನಿಟ್ಗೆ 36 ಪೈಸೆ, ಹಾಲಿನ ದರ ಮೂರು ಬಾರಿ ಹೆಚ್ಚಳ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲೂ ದರ ಏರಿಕೆಯಾಗಿದೆ. ಮುದ್ರಾಂಕ ಶುಲ್ಕ, ಆಫಿಡೆವಿಟ್, ಕ್ಯಾನ್ಸ್ಲೇಷನ್ ಡೀಡ್, ಮಾರ್ಟ್ಗೇಜ್, ವೃತ್ತಿಪರ ತೆರಿಗೆ ಎಲ್ಲವೂ ಏರಿಕೆಯಾಗಿದೆ. ಬಿತ್ತನೆ ಬೀಜ, ಬಸ್ ದರ, ನೀರಿನ ಸುಂಕ ಹಾಗೂ ಪೆಟ್ರೋಲ್ ದರ ಏರಿಕೆಯಾಗಿದೆ ಎಂದು ಕಿಡಿಕಾರಿದರು.
ಅಧಿಕಾರಿ ನೀಡಿದ ಮತದಾರರಿಗೆ ಶಾಪ ನೀಡುವ ಸರ್ಕಾರ ಇದಾಗಿದೆ. ಬಡವರಿಗೆ ಬರೆ ಎಳೆಯುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಏಪ್ರಿಲ್ 2ರಂದು ಫ್ರೀಡಂ ಪಾರ್ಕ್ನಲ್ಲಿ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ. ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಧರಣಿ ಮುಂದುವರಿಕೆಗೆ ಅಂದೇ ತೀರ್ಮಾನಿಸುತ್ತೇವೆ. ಏಪ್ರಿಲ್ 5ರಂದು ಜಿಲ್ಲೆ ಹಾಗೂ ಮಂಡಳಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.
ದರ ಹೆಚ್ಚಳ ಹಿಂಪಡೆಯಲು ಆಗ್ರಹ: ರಾಜ್ಯದಲ್ಲಿ ಕಳೆದ 20 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್, ಹಾಲು, ಸ್ಟ್ಯಾಂಪ್ ಡ್ಯೂಟಿ, ಮೆಟ್ರೋ, ವಿದ್ಯುತ್ ಎಲ್ಲಾ ದರ ಹೆಚ್ಚಾಗಿದೆ. ಹಾಲಿನ ದರ 3, 2, 4 ರೂ. ಹೀಗೆ ನಿರಂತರವಾಗಿ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ದರ 10 ರೂ., 20 ರೂ. ಮಾಡಿದ್ದಾರೆ. ಜನನ, ಮರಣ ಪ್ರಮಾಣ ಪತ್ರ ಶುಲ್ಕ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೋಗುವವರಿಗೂ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಮುದ್ರಾಂಕ ಶುಲ್ಕ 500ರಿಂದ 1,000 ರೂ.ಗೆ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ದರ ಹೆಚ್ಚಳ ಹಿಂಪಡೆಯಬೇಕು ಅಂತ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.
ಏಪ್ರಿಲ್ 7ರಿಂದ ಜನಾಕ್ರೋಶ ಯಾತ್ರೆ : ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯ ಹಣ ದುರುಪಯೋಗವಾಗಿದೆ. ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಹಣ ಬಳಕೆ ಆಗಬೇಕಿತ್ತು. ಆದರೆ ಆಗಿಲ್ಲ, ಇದನ್ನು ಖಂಡಿಸಿ ಬಿಜೆಪಿ ಹೋರಾಟ ನಡೆಸಲಿದೆ. ಎರಡು ವಿಚಾರ ಮುಂದಿಟ್ಟುಕೊAಡು ಹೋರಾಟ ಕೈಗೆತ್ತಿಕೊಂಡಿದ್ದೇವೆ. ಏಪ್ರಿಲ್ 7ರಂದು ಮೈಸೂರಿನಿಂದ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರ ಜೊತೆಗೂ ಚರ್ಚೆ ಮಾಡಿದ್ದೇನೆ. ಜನಾಕ್ರೋಶ ಯಾತ್ರೆಗೆ ಏಪ್ರಿಲ್ 7ರಂದು ಚಾಲನೆ ನೀಡಲಿದ್ದೇವೆ ಎಂದರು.
ನಾಲ್ಕು ಹಂತದಲ್ಲಿ ಹೋರಾಟ: ನಾಲ್ಕು ಹಂತದ ಹೋರಾಟ ಮಾಡಲಿದ್ದೇವೆ. ಏಪ್ರಿಲ್ 7ರಂದು ಮೈಸೂರು, ಚಾಮರಾಜನಗರ, ಏ.8ರಂದು ಮಂಡ್ಯ, ಹಾಸನ, ಏ.9ರಂದು ಕೊಡಗು, ಮಂಗಳೂರು ಹಾಗೂ ಏ.10ರಂದು ಉಡುಪಿ, ಚಿಕ್ಕಮಗಳೂರಲ್ಲಿ ಮೊದಲ ಹಂತದ ಹೋರಾಟ ನಡೆಯಲಿದೆ. ಎರಡನೇ ಹಂತದ ಹೋರಾಟ ಶಿವಮೊಗ್ಗದಿಂದ ಆರಂಭವಾಗಲಿದೆ. ಏ.13ರಂದು ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಹೋರಾಟ ನಡೆಸಿ, ಜನಜಾಗೃತಿ ಮಾಡುವ ಕೆಲಸ ಮಾಡಲಿದ್ದೇವೆ. ಹೋರಾಟವನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಲ್ಕು ಹಂತದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ವಿವರಿಸಿದರು.
ಪ್ರತೀ ನಗರದಲ್ಲಿ 2 ಕಿ.ಮೀ. ಪಾದಯಾತ್ರೆ, ಬಳಿಕ ಸಣ್ಣ ಪ್ರಮಾಣದ ಸಮಾವೇಶ ನಡೆಯಲಿದೆ. ಈ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಜೆಡಿಎಸ್ ಬೇರೆಯದೇ ಹೋರಾಟ ಮಾಡುತ್ತಿದೆ. ಈ ಹೋರಾಟದಲ್ಲಿ ಜೆಡಿಎಸ್ ಭಾಗಿಯಾಗಲ್ಲ ಎಂದು ಇದೇ ವೇಳೆ ವಿಜಯೇಂದ್ರ ಸುಳಿವು ನೀಡಿದರು.
ಸಿದ್ದರಾಮಯ್ಯರದ್ದು ಮುಸ್ಲಿಂ ಬಜೆಟ್: ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುವ ನಿಟ್ಟಿನಲ್ಲಿ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರದ ಕಾಮಗಾರಿಯಲ್ಲಿ ಶೇ 4ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಕಾನೂನು ವಿರುದ್ಧವಾಗಿದೆ. ವಿದೇಶಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ ಸ್ಕಾಲರ್ಶಿಪ್ ಏರಿಸಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ನೂರಾರು ಕೋಟಿ ರೂ. ಮೀಸಲಿಟ್ಟಿದ್ದಾರೆ. ಇಮಾಂಗಳ ಸಂಬಳ ಕೂಡ ಜಾಸ್ತಿ ಮಾಡಿದ್ದಾರೆ. ಬಿಜೆಪಿ ಮುಸ್ಲಿಂ ಸಮುದಾಯದ ವಿರೋಧಿಗಳಲ್ಲ. ಆದರೆ, ಅವರೊಬ್ಬರಿಗೆ ಮಾತ್ರ ಯಾಕೆ ಮಾಡುತ್ತಿದ್ದೀರಾ ಅನ್ನೋದೇ ನಮ್ಮ ಪ್ರಶ್ನೆ. ಪ್ರಧಾನಿ ಮೋದಿ ಎಲ್ಲ ಜಾತಿ, ಧರ್ಮದವರಿಗೂ ಎಲ್ಲ ಯೋಜನೆ ತಲುಪಿಸುತ್ತಿದ್ದಾರೆ. ಅದೇ ರೀತಿ ಇಲ್ಲೂ ಆಗಬೇಕು. ಸಿದ್ದರಾಮಯ್ಯ ಅವರದ್ದು ಮುಸ್ಲಿಂ ಬಜೆಟ್ ಆಗಿದೆ ಎಂದು ಟೀಕಿಸಿದರು.
ಬಿಜೆಪಿ ಶಾಸಕರು ಯಾವುದೇ ಕಮಿಟಿ ಸಭೆಗೆ ಹೋಗಲ್ಲ: ಸ್ಪೀಕರ್ ನಮ್ಮ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು. ಆದೇಶ ಹಿಂತೆಗೆದುಕೊಳ್ಳುವವರೆಗೂ ನಮ್ಮ ಯಾವುದೇ ಶಾಸಕರು ಕಮಿಟಿ ಮೀಟಿಂಗ್ನಲ್ಲಿ ಭಾಗಿಯಾಗಲ್ಲ. ಸಸ್ಪೆಂಡ್ ಮಾಡಿರುವುದನ್ನು ಖಂಡಿಸಿ ಏಪ್ರಿಲ್ 2ರಂದು ಬೆಳಗ್ಗೆ 10 ಗಂಟೆಗೆ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದೇವೆ. ಬಳಿಕ ಸ್ಪೀಕರ್ಗೆ ಮನವಿ ಸಲ್ಲಿಸುತ್ತೇವೆ ಎಂದರು.
