ನವದೆಹಲಿ
ಡಿಸೆಂಬರ್ನಲ್ಲಿ ಬಿಜೆಪಿಯ ಐದಾರು ಬಾಗಿಲುಗಳು ಮುಚ್ಚಲಿವೆ. ಆ ಬಳಿಕ ಪಕ್ಷದಲ್ಲಿ ಒಂದೇ ಬಾಗಿಲು ಆಗಲಿದೆ ಎಂದು ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಹೇಳಿದರು. ಪಕ್ಷದ ಹೈಕಮಾಂಡ್ ನಾಯಕರನ್ನು ಬೇಟಿಯಾಗಲು ನವದೆಹಲಿಗೆ ಬಂದಿರುವ ಅವರು, ಕರ್ನಾಟಕ ಬಿಜೆಪಿ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಸೇರಿದಂತೆ ಹಲವು ಮಂದಿ ನಾಯಕರು ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೆ ಅವರು ಈ ಹೇಳಕೆ ನೀಡಿದ್ದಾರೆ.
ವಕ್ಫ್ ವಿಚಾರವಾಗಿ ರಚಿಸಲಾಗಿದ್ದ ಬಿಜೆಪಿ ಸಮಿತಿಯಿಂದ ಆರಂಭದಲ್ಲಿ ಯತ್ನಾಳ್ ಹಾಗೂ ಅವರ ಬಣದ ಕೆಲವು ನಾಯಕರನ್ನು ಹೊರಗಿಡಲಾಗಿತ್ತು. ಇದು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಒಟ್ಟು 3 ತಂಡಗಳನ್ನು ರಚಿಸಿ ಯತ್ನಾಳ್ ಬಣದ ನಾಯಕರಿಗೂ ಅವಕಾಶ ನೀಡಲಾಗಿತ್ತು.
ಕರ್ನಾಟಕದಲ್ಲಿ ದೇವಾಲಯಗಳಿಗೂ ವಕ್ಫ್ ನೋಟಿಸ್ ನೀಡಿದ್ದಾರೆ. ವಕ್ಫ್ ವಿರುದ್ಧ ಮೂರು ತಂಡ ಮಾಡಿ ಅಹವಾಲು ಸ್ವೀಕರಿಸುತ್ತಿದ್ದೇವೆ. ಹೈಕಮಾಂಡ್ ನಾಯಕರು ನನಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ದೂರು ನೀಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಈಗಾಗಲೇ ಸೋಲೊಪ್ಪಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಶಿಗ್ಗಾಂವಿಯಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಭರತ್ ಗೆಲ್ಲುತ್ತಾರೆ. ಸಂಡೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ಹೇಳಿದರು.
