ಲಖನೌ:
ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ ಹಾವು ಕಡಿತ (snake bite) ಸಾಮಾನ್ಯ. ಹಾವು ಕಚ್ಚಿದರೆ, ನಾವು ಅದಕ್ಕೆ ಕಚ್ಚಬೇಕು ಅನ್ನೋ ನಂಬಿಕೆ ಕೆಲವೆಡೆ ಇದೆ. ಹಾರ್ದೋಯ್ನಲ್ಲಿ, 28 ವರ್ಷದ ರೈತನೊಬ್ಬ ಇದೇ ರೀತಿ ಮಾಡಿದ್ದಾನೆ. ಹಾವು ಅವನನ್ನು ಕಚ್ಚಿದ ಕೆಲವೇ ಕ್ಷಣಗಳಲ್ಲಿ, ವಿಷಸರ್ಪವನ್ನು ಹಿಡಿದ ಆತ ಅದಕ್ಕೆ ಕಚ್ಚಿರುವ ವಿಚಿತ್ರ ಘಟನೆ ನಡೆದಿದೆ. ಈ ಸುದ್ದಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹರ್ದೋಯ್ ಜಿಲ್ಲೆಯ ತಡಿಯಾವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಪುಷ್ಪತಾಲಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸುರೇಶ್ ಎಂಬುವವರ ಮಗ ಪುನೀತ್ ನವೆಂಬರ್ 4 ರಂದು ತನ್ನ ಭತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಬೆಳೆಯನ್ನು ನೋಡಿಕೊಳ್ಳುತ್ತಿದ್ದಾಗ, ಒಂದು ಕರಿನಾಗರಹಾವು ಇದ್ದಕ್ಕಿದ್ದಂತೆ ಅವರ ಕಾಲಿನ ಬಳಿ ಬಂದು ಕಚ್ಚಿದೆ. ಆದರೆ, ಗಾಬರಿಗೊಳ್ಳುವ ಬದಲು ಪುನೀತ್ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದರು.
ನಾನು ನನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರಹಾವು ನನ್ನ ಕಾಲಿಗೆ ಕಚ್ಚಿತು. ಅದು ತುಂಬಾ ನೋವುಂಟು ಮಾಡಿತು. ಆದರೆ, ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನಾನು ಹಾವನ್ನು ಹಿಡಿದು ಕೋಪದಿಂದ ಅದರ ಹೆಡೆಯನ್ನು ಕಚ್ಚಿದೆ ಎಂದು ಪುನೀತ್ ತಿಳಿಸಿದರು. ಈತ ಕಚ್ಚಿದ ತೀವ್ರತೆಗೆ ನಾಗರಹಾವು ಸ್ಥಳದಲ್ಲೇ ಸಾವನ್ನಪ್ಪಿತು. ಆದರೆ, ರೈತ ಕೂಡ ಹಾವು ಕಚ್ಚಿದ್ದರಿಂದ ಪ್ರಜ್ಞೆ ತಪ್ಪಿದ್ದ. ಇದನ್ನು ನೋಡಿ, ಆರಂಭದಲ್ಲಿ ಗಾಬರಿಗೊಂಡ ಗ್ರಾಮಸ್ಥರು, ಮೊದಲಿಗೆ ಅವನ ಪ್ರತಿಕ್ರಿಯೆಯಿಂದ ಮೂಕವಿಸ್ಮಿತರಾದರು. ಕೂಡಲೇ ಅವನ ಕುಟುಂಬ ಸದಸ್ಯರು ಅವನನ್ನು ಹಾರ್ಡೋಯ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು.
ಅಂದಹಾಗೆ, ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದರಿಂದ ಕಚ್ಚಲ್ಪಟ್ಟಿದ್ದರೂ, ಪುನೀತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ರಾತ್ರಿಯಿಡೀ ಪರೀಕ್ಷಿಸಲಾಯಿತು. ಮರುದಿನ ಬೆಳಗ್ಗೆ ಬಿಡುಗಡೆ ಮಾಡಲಾಯಿತು.
ನೋಡಲು ಕಾಳಿಂಗಸರ್ಪದಂತಿದ್ದ ಹಾವು ಕಚ್ಚಿದ ನಂತರ ಮಧ್ಯರಾತ್ರಿಯ ಸುಮಾರಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹಾರ್ದೋಯ್ ವೈದ್ಯಕೀಯ ಕಾಲೇಜಿನ ತುರ್ತು ವೈದ್ಯಕೀಯ ಅಧಿಕಾರಿ ಡಾ. ಶೇರ್ ಸಿಂಗ್ ಹೇಳಿದರು. ನಾವು ಅವನಿಗೆ ವಿಷ ನಿರೋಧಕ ಚಿಕಿತ್ಸೆ ನೀಡಿ ವೀಕ್ಷಣೆಯಲ್ಲಿ ಇರಿಸಿದೆವು. ಅವನ ಪ್ರಮುಖ ಅಂಗಗಳು ಸಾಮಾನ್ಯವಾಗಿದ್ದವು, ಹೀಗಾಗಿ ಅವನು ಅಪಾಯದಿಂದ ಪಾರಾಗಿದ್ದಾನೆ ಎಂದು ಖಚಿತವಾದ ನಂತರ ಡಿಸ್ಚಾರ್ಜ್ ಮಾಡಲಾಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ರೈತ ಬದುಕುಳಿದಿದ್ದು ಅದೃಷ್ಟವಶಾತ್ ಆಗಿದ್ದರೂ, ಅವನು ಹಾವಿಗೆ ಕಚ್ಚಿದ್ದು ಆತನ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತಿತ್ತು ಎಂದು ಡಾ. ಸಿಂಗ್ ಹೇಳಿದರು. ಹಾವನ್ನು ಕಚ್ಚುವುದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆತನ ಬಾಯಿ ಅಥವಾ ಒಸಡುಗಳ ಮೂಲಕ ವಿಷದ ಕುರುಹು ಪ್ರವೇಶಿಸಿದ್ದರೆ ಅಥವಾ ಹಾವು ಮತ್ತೆ ಪ್ರತಿದಾಳಿ ನಡೆಸುತ್ತಿದ್ದರೆ, ಅವನು ಬದುಕುಳಿಯುತ್ತಿರಲಿಲ್ಲ. ಜನರು ಅಂತಹ ನಡವಳಿಕೆಯನ್ನು ಎಂದಿಗೂ ಅನುಕರಿಸಬಾರದು ಎಂದು ಅವರು ಹೇಳಿದರು.
ಪುನೀತ್ ಅವರ ಸೋದರಸಂಬಂಧಿ ಅಮನ್ ಕುಮಾರ್ ವರ್ಮಾ ಮಾತನಾಡಿ, ಘಟನೆಯ ಬಗ್ಗೆ ಕೇಳಿದಾಗ ಕುಟುಂಬವು ಆರಂಭದಲ್ಲಿ ಭಯಭೀತವಾಗಿತ್ತು. ಅವನು ನಾಗರಹಾವನ್ನು ಕಚ್ಚಿದ್ದಾನೆಂದು ಹೇಳಿದಾಗ ಅವನು ತಮಾಷೆ ಮಾಡುತ್ತಿದ್ದಾನೆಂದು ನಾವು ಭಾವಿಸಿದ್ದೇವೆ ಎಂದು ಅಮನ್ ಹೇಳಿದರು. ಆದರೆ, ಹೊಲದಲ್ಲಿ ಹಾವು ಸತ್ತು ಬಿದ್ದಿತ್ತು ಎಂದು ಹೇಳಿದ್ದಾರೆ.
ಈ ಘಟನೆಯು ಪುಷ್ಪತಾಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಕೆಲವು ಗ್ರಾಮಸ್ಥರು ಪುನೀತ್ ಅವರನ್ನು ಹೀರೋ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಜೀವಂತವಾಗಿ ಪಾರಾಗಿದ್ದಕ್ಕೆ ಅವನನ್ನು ಅದೃಷ್ಟಶಾಲಿ ಎಂದು ಹೇಳಿದ್ದಾರೆ.








