ಪ್ರಶಸ್ತಿ ಪಡಿಕಲ್‌ ಗೆ ಕೊಡಬೇಕಿತ್ತು ನನಗಲ್ಲ : ವಿರಾಟ್‌ ಕೊಹ್ಲಿ

ತುಮಕೂರು :

    ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್-18ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ (Virat Kohli). ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

    ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಏಕೆಂದರೆ ಪ್ಲೇಆಫ್​ ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸವನ್ನುಂಟುಮಾಡಬಹುದು. ನಾವು ತವರಿನಲ್ಲಿ ಸೋತರೂ, ಹೊರಗಡೆ ಉತ್ತಮ  ಕ್ರಿಕೆಟ್ ಆಡಿದ್ದೇವೆ. ನೀವು ಪಾಯಿಂಟ್ಸ್​ ಟೇಬಲ್​ನಲ್ಲಿ ಎಂಟರಿಂದ ಹತ್ತು ಅಂಕಗಳಿಗೆ ಹೋದಾಗ, ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ.

    ಪ್ರತಿ ಪಂದ್ಯದಲ್ಲೂ 2 ಅಂಕಗಳನ್ನು ಪಡೆಯುವುದು ನಮ್ಮ ಮನಸ್ಥಿತಿಯಾಗಿರಬೇಕು. ನಾನು ನನ್ನ ಬ್ಯಾಟಿಂಗ್​ನಲ್ಲಿ ಇನ್ನಷ್ಟು ವೇಗವನ್ನು ಹೆಚ್ಚಿಸಲು ಬಯಸಿದ್ದೆ. ಆದರೆ ಈ ಹಂತದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ರನ್​ ಗತಿಯಲ್ಲಿ ತುಂಬಾ ವ್ಯತ್ಯಾಸವನ್ನು ಉಂಟು ಮಾಡಿದ್ದರು. ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯು ದೇವದತ್ ಪಡಿಕ್ಕಲ್​ಗೆ ಕೊಡಬೇಕಿತ್ತು ಎಂಬುದು ನನ್ನ ಭಾವನೆ. ಇದಾಗ್ಯೂ ಈ ಪ್ರಶಸ್ತಿ ನನಗೆ ಕೊಟ್ಟಿದ್ದಾರೆ ಎಂದು ನನಗೆ ತಿಳೀತಿಲ್ಲ. ಈ ಪ್ರಶಸ್ತಿಗೆ ದೇವ್ (ದೇವದತ್ ಪಡಿಕ್ಕಲ್) ಅರ್ಹರಾಗಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಇನ್ನು ದೇವದತ್ ಪಡಿಕ್ಕಲ್ ಜೊತೆಗಿನ ಶತಕದ ಜೊತೆಯಾಟದ ಬಗ್ಗೆ ಮಾತನಾಡಿದ ಕೊಹ್ಲಿ, ಟಿ 20 ಕ್ರಿಕೆಟ್‌ನಲ್ಲಿ ರನ್ ಚೇಸ್ ಸಮಯದಲ್ಲಿ ಒಂದು ಉತ್ತಮ ಪಾಲುದಾರಿಕೆ ಸಾಕು. ಅಂತಹದೊಂದು ಜೊತೆಯಾಟವನ್ನು ದೇವದತ್ ಪಡಿಕ್ಕಲ್ ಆಡಿದ್ದಾರೆ.

    ಈಗ ನಮಗೆ ಉತ್ತಮ ತಂಡ ಸಿಕ್ಕಿದೆ. ಹರಾಜಿನ ಬಳಿಕ ಉತ್ತಮ ತಂಡದ ಸಂಯೋಜನೆಯಾಗಿದೆ. ಟಿಮ್ ಡೇವಿಡ್, ಜಿತೇಶ್ ಶರ್ಮಾ, ರಜತ್ ಪಾಟಿದಾರ್ ಅವರಂತಹ ಆಟಗಾರರು, ಅವರು ನಿರ್ವಹಿಸುತ್ತಿರುವ ಪಾತ್ರಗಳು ಚೆನ್ನಾಗಿ ಮೂಡಿಬರುತ್ತಿದೆ. ಇಂದು ರೊಮಾರಿಯೊ ನಮ್ಮ ಪರ ಕಣಕ್ಕಿಳಿದಿದ್ದಾರೆ. 

   ನಮ್ಮ ತಂಡವು ಗೆಲುವಿಗಾಗಿ ಹಸಿದಿರುವುದಂತು ನಿಜ. ಇದೇ ಕಾರಣದಿಂದಾಗಿ ಪ್ರತಿ ಆಟಗಾರರಲ್ಲಿ  ತೀವ್ರತೆಯನ್ನು ನೀವು ನೋಡಬಹುದು. ಇವೆಲ್ಲವನ್ನೂ ನೋಡಲು ನಿಜವಾಗಿಯೂ ಸಂತೋಷವಾಗುತ್ತದೆ. ಇಂತಹ ಮನಸ್ಥಿತಿ ಇದ್ದಾಗಲೇ ಗೆಲ್ಲುವ ಸಾಧ್ಯತೆಗಳಿರುತ್ತವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.