ಜಯಪುರದ ಮತ್ತೊಂದು ಮಠಕ್ಕೆ ಬಂತು ನೋಟಿಸ್

ಬೆಂಗಳೂರು

   ವಕ್ಫ್ ಮಂಡಳಿ ನೋಟಿಸ್​ನಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ರೈತರು ಕಂಗೆಟ್ಟಿರುವ ಮಧ್ಯೆಯೇ ಇದೀಗ ದಕ್ಷಿಣ ಕರ್ನಾಟಕಕ್ಕೂ ವಕ್ಫ್ ಆತಂಕ ಆವರಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ತಮ್ಮ ಹೆಸರಿಗೆ ಪಹಣಿ ಮಾಡಿಕೊಡುವಂತೆ ಜಾಮೀಯ ಮಸೀದಿ ವಕ್ಫ್ ಕಮಿಟಿಗೆ ಬೆಳ್ಳೂರು ಮುಸ್ಲಿಮರು ಪತ್ರ ಬರೆದಿದ್ದಾರೆ.

   ಬೆಳ್ಳೂರು ಗ್ರಾಮದ ಸರ್ವೆ ನಂ. 472ರಲ್ಲಿ 20 ಎಕರೆ ಜಾಮೀಯ ಮಸೀದಿಗೆ, 34 ಎಕರೆ 12ಗುಂಟೆ ಸೂಫಿ ಸಂತರಿಗೆ, ಸರ್ವೆ ನಂ 73ರಲ್ಲಿ 6 ಎಕರೆ 6 ಗುಂಟೆ ಖಬರಸ್ಥಾನ್‌ಗೆ ಪಹಣಿ ಮಾಡಲು ಪತ್ರದಲ್ಲಿ ಮನವಿ‌ ಮಾಡಲಾಗಿದೆ. 1921, 1932 ಹಾಗೂ 1940 ರಲ್ಲಿ ಮೈಸೂರು ಸರ್ಕಾರ ಮಸೀದಿ, ಖಬರಸ್ಥಾನ್ ಮತ್ತು ಸೂಫಿ ಸಂತರಿಗೆ ಜಮೀನು ನೀಡಿ ಆದೇಶಿಸಿದೆ. ಆ ಜಮೀನುಗಳ ಸ್ಕೆಚ್ ಕೂಡ ಆಗಿದೆ ಎಂದು ಆದೇಶ ಸಂಖ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪತ್ರದಲ್ಲಿ ಉಲ್ಲೇಖಿಸಿರುವ ಸರ್ವೆ ನಂ. 472ರಲ್ಲಿ 14.24 ಗುಂಟೆ ಗೋಮಾಳ ಇದ್ದು, 5ಕ್ಕೂ ಹೆಚ್ಚು ರೈತರಿಗೆ ಸೇರಿದ 19.88 ಗುಂಟೆ ಜಮೀನು ಆಗಿದೆ. ಗೋಮಾಳ ಹಾಗೂ ರೈತರಿಗೆ ಜಮೀನುಗಳನ್ನು ತಮ್ಮ ಹೆಸರಿಗೆ ಪಹಣಿ ಮಾಡಲು ಕ್ರಮ ವಹಿಸುವಂತೆ ಮುಸ್ಲಿಮರು ಮನವಿ ಮಾಡಿದ್ದಾರೆ.

  ವಿಜಯಪುರ ಜಿಲ್ಲೆಯ ಮತ್ತೊಂದು ಮಠದ ಆಸ್ತಿ ವಕ್ಫ್ ಪಾಲಾಗುವ ಭೀತಿ ಎದುರಾಗಿದೆ. ಸಿಂದಗಿ ತಾಲೂಕಿನ ಯರಗಲ್ ಬಿಕೆ ಗ್ರಾಮದ ಸಿದ್ದ ಶಂಕರಲಿಂಗ ಮಠದ ಆಸ್ತಿಗೆ ವಕ್ಫ್ ಮಂಡಳಿ ನೋಟಿಸ್ ಬಂದಿದೆ. ಮಠದ 8.16 ಏಕರೆ ಜಮೀನು ವಕ್ಫ್ ಪಾಲಾಗುವ ಆತಂಕ ಎದುರಾಗಿದೆ. 1952 ರಲ್ಲಿ ಸಿಂದಗಿಯ ಕುಲಕರ್ಣಿ ಮನೆತನದಿಂದ ಮಠಕ್ಕೆ ದಾನವಾಗಿ ನೀಡಿದ್ದ ಆಸ್ತಿ ಇದಾಗಿದೆ. 2018-19ರಲ್ಲಿ ಮಠದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿತ್ತು.

   ಶಂಕರಲಿಂಗ ಮಹಾಪುರುಷರ ಹೆಸರಿಲ್ಲಿರುವ 8 ಏಕರೆ 16 ಗುಂಟೆ ಜಮೀನಿನ ಪಹಣಿಯಲ್ಲಿ 2018ರಲ್ಲಿ ಯತಿಮ್ ಶಾ ವಾಲಿ ಜಾಮೀಯಾ ಮಸೀದ್ ಸುನ್ನಿ ವಕ್ಫ್ ಬೋರ್ಡ ಹೆಸರು ಸೇರ್ಪಡೆಯಾಗಿತ್ತು. ಈ ವಿಚಾರವಾಗಿ ಇದೀಗ ಮಠದ ಪೀಠಾಧಿಕಾರಿ ಸಿದ್ದರಾಜು ಸ್ವಾಮೀಜಿ ಆತಂಕ‌ ವ್ಯಕ್ತಪಡಿಸಿದ್ದಾರೆ.ನಮ್ಮ ಮಠದ ಆಸ್ತಿ ಮಠಕ್ಕೆ ಉಳಿಯಬೇಕು.ಇದು ಕುಲಕರ್ಣಿ ಮನೆತನ ಮಠಕ್ಕೆ ನೀಡಿದ ಆಸ್ತಿಯಾಗಿದೆ. ವಕ್ಫ್ ಬೋರ್ಡ್ ಎಂದು ನಮೂದಾಗಿದ್ದನ್ನು ರದ್ದು ಮಾಡಬೇಕೆಂದು ಸಿದ್ದರಾಜು ಸ್ವಾಮೀಜಿ ಆಗ್ರಹಿಸಿದ್ದಾರೆ. 

   ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿರುವುದನ್ನು ತೆರವು ಮಾಡುವಂತೆ ರೈತರ ಹೋರಾಟ ತೀವ್ರಗೊಂಡಿದೆ. ಮಂಗಳವಾರ ಸಾಯಂಕಾಲದಿಂದಲೇ ಡಿಸಿ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

   ಈ ಮಧ್ಯೆ, ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರಾಳ ದೀಪಾವಳಿ ಆಚರಣೆ ಮಾಡಿದ್ದಾರೆ. ಡಿಸಿ ಕಚೇರಿ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಭಾವಚಿತ್ರದ ಬಳಿ ದೀಪವಿಟ್ಟು ಪ್ರತಿಭಟಿಸಿದ್ದಾರೆ. ಅಲ್ಲೇ ಅಡುಗೆ ಮಾಡಿ ಊಟ ಮಾಡಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಪಹಣಿಯಲ್ಲಿರೋ ವಕ್ಪ್ ಬೋರ್ಡ್ ಹೆಸರು ತೆರವು ಮಾಡುವ ವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದಿದ್ದಾರೆ.

Recent Articles

spot_img

Related Stories

Share via
Copy link