ಇಸ್ಲಾಮಾಬಾದ್
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ವಿಷ ಕಾರಿದ್ದಾರೆ. ವಲಸಿಗ ಪಾಕಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ಸೇನಾ ಮುಖ್ಯಸ್ಥರಂತೆ ಮಾತನಾಡುವ ಬದಲು ಧರ್ಮ ಪ್ರಚಾರಕರಂತೆ ಮಾತನಾಡಿದ್ದಾರೆ. ಅವರ ಭಾಷಣದಲ್ಲಿ ಇಸ್ಲಾಂ, ಮೆಕ್ಕಾ-ಮದೀನಾ ಈ ವಿಚಾರಗಳ ಬಗ್ಗೆಯೇ ಮಾತನಾಡಿದ್ದಾರೆ. ಪಾಕಿಸ್ತಾನದಾದ್ಯಂತ ಅವರನ್ನು ಮುಲ್ಲಾ ಜನರಲ್ ಎಂದು ಉದ್ಘರಿಸುವುದುಂಟು.
ಇಸ್ಲಾಮಾಬಾದ್ನಲ್ಲಿ ನಡೆದ ಮೊದಲ ಸಾಗರೋತ್ತರ ಪಾಕಿಸ್ತಾನಿ ಸಮ್ಮೇಳನದಲ್ಲಿ ಧರ್ಮೋಪದೇಶಗಳನ್ನು ನೀಡಿದ್ದಾರೆ. ಸಮ್ಮೇಳನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಪಾಕಿಸ್ತಾನದ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು. ‘‘ಕೇವಲ 1500 ಭಯೋತ್ಪಾದಕರು ದೇಶದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ಪಾಕಿಸ್ತಾನದ ಶತ್ರುಗಳು ಭಾವಿಸುತ್ತಾರಾ? ನಾವು ಶೀಘ್ರದಲ್ಲೇ ಈ ಭಯೋತ್ಪಾದಕರ ಬೆನ್ನು ಮುರಿಯುತ್ತೇವೆ. 13 ಲಕ್ಷ ಜನರ ಭಾರತೀಯ ಸೇನೆಗೆ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ, ಈ ಭಯೋತ್ಪಾದಕರು ಏನು ಮಾಡುತ್ತಾರೆ?’’ ಎಂದು ಕುಹಕ ನಗೆ ಬೀರಿದರು.
ತಾವು ಹಿಂದೂಗಳಿಗಿಂತ ಭಿನ್ನ ಎಂದು ಹೇಳಿಕೊಂಡ ಮುನೀರ್ ನೀವು ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಗಳನ್ನು ಹೇಳಲೇಬೇಕು, ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂಗಳಿಗಿಂತ ಭಿನ್ನರು ಎಂದೇ ಭಾವಿಸಿದ್ದರು. ನಮ್ಮ ಧರ್ಮ ಬೇರೆ, ಪದ್ಧತಿಗಳು, ಸಂಸ್ಕೃತಿಗಳೆಲ್ಲವೂ ಬೇರೆ ಬೇರೆ. ಇದು ಎರಡು ರಾಷ್ಟ್ರಗಳ ಅಡಿಪಾಯದ ಸಿದ್ಧಾಂತವಾಗಿತ್ತು.
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ), ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ಮತ್ತು ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್ಎ) ನಂತಹ ಸಂಘಟನೆಗಳನ್ನು ದೇಶಕ್ಕೆ ಬೆದರಿಕೆ ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು ಮತ್ತು ಈ ಸಂಘಟನೆಗಳಿಗೆ ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು. ನಾವು ಎರಡು ದೇಶಗಳು, ನಾವು ಒಂದೇ ದೇಶವಲ್ಲ. ನಮ್ಮ ಪೂರ್ವಜರು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅದನ್ನು ಹೇಗೆ ರಕ್ಷಿಸಬೇಕೆಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ. ಮೂರನೇ ತಲೆಮಾರಾಗಿರಲಿ, ನಾಲ್ಕನೇ ತಲೆಮಾರಾಗಿರಲಿ ಅಥವಾ ಐದನೇ ತಲೆಮಾರಾಗಿರಲಿ ಎಂದಿಗೂ ದುರ್ಬಲಗೊಳ್ಳಬಾರದು. ಅವರಿಗೆ ಪಾಕಿಸ್ತಾನ ಏನೆಂದು ಅವರು ತಿಳಿದಿರಬೇಕು ಎಂದು ಪಾಠ ಮಾಡಿದ್ದಾರೆ.
ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಿಗಳಿಂದ ಆರ್ಥಿಕ ಸಹಾಯವನ್ನು ಕೋರಿದ್ದಾರೆ. ನೀವು ಹಣವನ್ನು ಕಳುಹಿಸುವ ಮೂಲಕ, ಹೂಡಿಕೆ ಮಾಡುವ ಮೂಲಕ ನಿಮ್ಮ ದೇಶದ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದೀರಿ. ಇದು ಹೀಗೇ ಮುಂದುವರೆಯಲಿ ಕಾಶ್ಮೀರ ಎಂದಿಗೂ ಪಾಕಿಸ್ತಾನದ ಬಳಿಯೇ ಇರುತ್ತದೆ, ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.
ಗಾಜಾದಲ್ಲಿ ಇಸ್ರೇಲ್ನ ಕ್ರಮವನ್ನು ಟೀಕಿಸಿದರು ಮತ್ತು ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ವ್ಯಕ್ತಪಡಿಸಿದರು. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ ವಿದೇಶಿ ಸಮ್ಮೇಳನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಪಾಕಿಸ್ತಾನದ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.
