ಹುಬ್ಬಳ್ಳಿ:
ಸರ್ಕಾರಿ ನೌಕರರ ಬಹುದಿನದ ಬೇಡಿಕೆ 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು. ಬಜೆಟ್ ನಲ್ಲಿ ಅದಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಧ್ಯಂತರ ವರದಿ ಪಡೆದು ವೇತನ ಪರಿಷ್ಕರಣೆ ಮಾಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಾವು ಕೂಡಲೇ 7 ನೇ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು. ಸಿ.ಎ.ಆರ್ ಸಿಬ್ಬಂದಿ ಬಲ ಪಡಿಸುವ ಬಗ್ಗೆ ಡಿ.ಜಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿಗಳು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ. ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ, ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.