ನವದೆಹಲಿ
ನಮ್ಮ ವೈರಿಗಳಿಗೆ ಭಾರತೀಯ ಮಹಿಳೆಯರ ಸಿಂದೂರ ಅಳಿಸಿದರೆ ಏನಾಗುತ್ತದೆ ಎನ್ನುವ ಪಾಠ ಗೊತ್ತಾಗಿದೆ. ಸಿಂದೂರ ಎನ್ನುವುದು ಸಾಮಾನ್ಯದ ಸಂಗತಿ ಅಲ್ಲ. ಆಪರೇಷನ್ ಸಿಂದೂರ್ ನ್ಯಾಯದ ಅಖಂಡ ಪ್ರತಿಜ್ಞೆ ಆಗಿದೆ. ವೈರಿಗಳು ಆಪರೇಷನ್ ಸಿಂದೂರ ಇಷ್ಟು ಕಟುವಾಗಿರುತ್ತದೆ ಎಂದು ಎಣಿಸಿರಲಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಆರಂಭಗೊಂಡ ಬಳಿಕ ಪ್ರಧಾನಿಗಳು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇಂದು ಸಂಜೆ 8 ಗಂಟೆಗೆ ಪ್ರಸಾರವಾದ ಭಾಷಣದಲ್ಲಿ ಅವರು ಆಪರೇಷನ್ ಸಿಂದೂರವನ್ನು ಯಶಸ್ವಿಯಾಗಿಸಿದ ಭಾರತೀಯ ಯೋಧರಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಧಾನಿಗಳು ಭಯೋತ್ಪಾದಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಭಾರತೀಯ ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಏನು ಪರಿಣಾಮ ಆಗುತ್ತದೆ ಎಂಬುದು ಎಲ್ಲಾ ಉಗ್ರ ಸಂಘಟನೆಗಳಿಗೂ ಗೊತ್ತಾಗಿದೆ. ನಮ್ಮ ಸೇನಾಪಡೆಗಳು ಉಗ್ರರ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿವೆ. ದೇಶ ಒಗ್ಗಟ್ಟಾಗಿದ್ದಾಗ ಇಂತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಹುದು ಎಂದು ನರೇಂದ್ರ ಮೋದಿ ಹೇಳಿದರು. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಇರಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಇರಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆಯ ವಿಚಾರವಾಗಿ ಇರುತ್ತದೆ. ಪಿಒಕೆ ವಿಚಾರವಾಗಿ ಇರುತ್ತದೆ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
