ಬೆಂಗಳೂರು :
ಕಳೆದ 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಅವರು ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ಗೆ ನಮಸ್ಕರಿಸಿ ಮತ ಹಾಕಿ ಎಂಬ ಸಂದೇಶ ನೀಡಿದ್ದರು. ಇದೀಗ ಗಗನಮುಖಿಯಾಗಿರುವ ಸಿಲಿಂಡರ್ಗೆ ನಮಿಸಿ ಚುನಾವಣಾ ಪ್ರಚಾರ ಆರಂಭಿಸುತ್ತೇವೆ. ಇದೇ ಪದ್ಧತಿಯನ್ನು ಬ್ಲಾಕ್ ಹಾಗೂ ಬೂತ್ ಮಟ್ಟದ ನಾಯಕರೂ ಪಾಲಿಸಬೇಕು. ಮತದಾರರು ಮತದಾನ ಮಾಡುವ ಮುನ್ನ ಇದೇ ರೀತಿ ನಮಿಸಿ ಮತದಾನ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಬಿಜೆಪಿ ನಾಯಕ ಪದ್ಮರಾಜ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಅವರ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಪರಿಣಾಮ ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮೊದಲಿಗೆ ರಾಜಾಜಿನಗರ ಕ್ಷೇತ್ರದಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದರು.
ಬಿಜೆಪಿಯಿಂದ ಪದ್ಮರಾಜ್, ಉಮೇಶ್ ಸೇರಿದಂತೆ ಸುಮಾರು 450 ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ಸೇರಿದ್ದಾರೆ. ಈ ಎಲ್ಲರನ್ನು ಪಕ್ಷದ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಕ್ಷೇತ್ರ ನನಗೆ ಬಹಳ ಹತ್ತಿರವಾಗಿದೆ. ನಾನು ಓದಿದ ಕಾಲೇಜು ಇದೇ ಕ್ಷೇತ್ರದಲ್ಲಿದೆ. ಈ ಕ್ಷೇತ್ರದಲ್ಲಿ ನಾನು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದೆ. ಬಿಜೆಪಿಯಿಂದ ಹಾಗೂ ಜೆಡಿಎಸ್ನಿಂದ ಕಾಂಗ್ರೆಸ್ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ನಾನು ಹೆಸರು ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ಮಾಧ್ಯಮಗಳಲ್ಲಿ ಕೆಲವರ ಹೆಸರನ್ನು ಹೇಳಿ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿ ಸೃಷ್ಟಿ ಮಾಡಲಾಗುತ್ತಿದೆ. ನೀವು ಯಾವುದೇ ಸುದ್ದಿ ಸೃಷ್ಟಿ ಮಾಡಬೇಡಿ. ಸಮಯ ಬಂದಾಗ ನಾನೇ ನಿಮಗೆ ಎಲ್ಲವನ್ನೂ ತಿಳಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/04/shiva-kumar.jpg)