ಬೆಂಗಳೂರು:
ಶ್ರೀ ರಾಮ ಶಾಲೆಗೆ ಅಥವಾ ಈ ಶಾಲೆಯ ಪದಾಧಿಕಾರಿಗಳಿಗೆ ನೀಡಿರುವ ನೋಟೀಸನ್ನು ಕೂಡಲೇ ಹಿಂಪಡೆದು ಪೊಲೀಸರು ಕ್ಷಮೆಯಾಚಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಶ್ರೀ ರಾಮ ಶಾಲೆ ಕರಾವಳಿ ಭಾಗದ ಅದೆಷ್ಟೋ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸುಸಜ್ಜಿತ, ಸುಂದರ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಗಣಕ ಶಿಕ್ಷಣಕ್ಕೆ ಗಣಕ ಪ್ರಯೋಗಾಲಯವೂ ಇರುವುದು ಈ ಸಂಸ್ಥೆಯ ಹೆಗ್ಗಳಿಕೆ.
ರಾಜಕೀಯವಾಗಿ ಪ್ರಬಲರಾಗಲು 2017 ರಲ್ಲಿ ಈ ಶಾಲೆಗೆ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯ ನವರು ಈ ಶಾಲೆಗೆ ಅಕ್ಷರ ದಾಸೋಹ ಯೋಜನೆಯನ್ನು ನಿಲ್ಲಿಸಿದ್ದರು. ಮಕ್ಕಳ, ಪೋಷಕರ, ಶಿಕ್ಷಣ ತಜ್ಞರ ಹಾಗೂ ಈ ಭಾಗದ ಜನರ ಹೋರಾಟದ ಪರಿಣಾಮವಾಗಿ ಈ ನಿರ್ಧಾರವನ್ನು ಸಿದ್ದರಾಮಯ್ಯ ನವರು ಕೈಬಿಡಬೇಕಾಗಿತ್ತು.
ಇಂದು ಕಮ್ಯುನಲ್ ಟಾಸ್ಕ್ ಫೋರ್ಸ್ ಹೆಸರಿನಲ್ಲಿ ಇದೆ ಶಾಲೆಯ ಮೇಲೆ ಮತ್ತೆ ಸರ್ಕಾರ ಕಣ್ಣಿಟ್ಟಿದೆ. ಶಾಲೆಯ ಪದಾಧಿಕಾರಿಗಳಿಗೆ ನೋಟೀಸು ನೀಡುವುದು, ಅವರಿಗೆ ಬೆದರಿಸುವ ಕೆಲಸ ಮಾಡುತ್ತಿರುವುದು ಸರ್ಕಾರದ ಉದ್ದಟತನ, ಅಹಂಕಾರ ಹಾಗೂ ರಾಜಕೀಯ ದುರ್ಬಳಕೆ ತೋರಿಸುತ್ತದೆ.
ಶ್ರೀ ರಾಮ ಶಾಲೆಗೆ ಅಥವಾ ಈ ಶಾಲೆಯ ಪದಾಧಿಕಾರಿಗಳಿಗೆ ನೀಡಿರುವ ನೋಟೀಸನ್ನು ಕೂಡಲೇ ಹಿಂಪಡೆದು ಪೊಲೀಸರು ಕ್ಷಮೆಯಾಚಿಸಬೇಕು. ‘ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ‘ ಹಾಕಿದ ಹಾಗೆ ಜಿಹಾದಿಗಳು, ಸ್ಲೀಪರ್ ಸೆಲ್ ಗಳು ಮಾಡುತ್ತಿರುವ ಕೋಮು ಗಲಭೆಗೆ ಶ್ರೀ ರಾಮ ಶಾಲೆಗೆ ನೋಟೀಸು ನೀಡುವುದು ಮೂರ್ಖತನದ ಪರಮಾವಧಿ.
ಪೊಲೀಸರು ಹಾಗೂ ಗೃಹ ಇಲಾಖೆ ತಮ್ಮ ಸಂಪನ್ಮೂಲಗಳನ್ನು ನಿಜವಾದ ಕಳ್ಳರನ್ನು, ದುಷ್ಕರ್ಮಿಗಳನ್ನು, ಪಟ್ಟಭದ್ರರನ್ನು, ಅಶಾಂತಿ ಹರಡುವವರ ಪತ್ತೆಗೆ ಉಪಯೋಗಿಸಲಿ, ಶಾಲೆಗಳ ಮೇಲಲ್ಲ ಎಂದಿದ್ದಾರೆ.
