ಸುಪ್ರೀಂಕೋರ್ಟ್‌ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ಗೆ ಗೆಲುವು

ನವದೆಹಲಿ

    ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಒಡೆತನದ ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಕ್ಕೆ ಏಳು ದಿನಗಳಲ್ಲಿ ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚಿಸಿದ್ದು, ಕಾನೂನು ಸಮರದಲ್ಲಿ ಯತ್ನಾಳ್​ಗೆ ಗೆಲುವಾಗಿದೆ. ಇನ್ನು ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.

    ಕೆಲ ಕಾರಣಗಳನ್ನು ನೀಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್​​ಪಿಸಿಬಿ) ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಯತ್ನಾಳ್,​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್​ ಕಾರ್ಖಾನೆ ತೆರೆಯಲು ಅನುಮತಿ ಆದೇಶಿಸಿತ್ತು. ಆದ್ರೆ, ಕೆಎಸ್​​ಪಿಸಿಬಿ, ಹೈಕೋರ್ಟ್​ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂಕೋರ್ಟ್​ ಸಹ ಹೈಕೋರ್ಟ್​ನ ಆದೇಶವನ್ನು ಎತ್ತಿಹಿಡಿದೆ.

   ಇನ್ನು ಸುಪ್ರೀಂಕೋರ್ಟ್​ ಆದೇಶ ಹೊರಬರುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಯತ್ನಾಳ್, ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ಧಿಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ಏಳು ದಿನದ ಒಳಗಾಗಿ ಕಬ್ಬು ಅರೆಯುವ ಪ್ರಕ್ರಿಯೆಸಲು ಸೂಕ್ತ ಆದೇಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಬರೆದುಕೊಂಡಿದ್ದಾರೆ.

   ಈ ಆದೇಶವು ಕಬ್ಬು ಬೆಳಗಾರರಿಗೆ ಸಿಕ್ಕ ಜಯವಾಗಿದೆ. ಕಾರ್ಖಾನೆ ಮುಚ್ಚಿಸಲು ಯತ್ನಿಸಿದ್ದವರ ಆಟ ನಡೆಯಲಿಲ್ಲ. ಈ ಐತಿಹಾಸಿಕ ತೀರ್ಪು ರೈತ ಮತ್ತು ಕಾರ್ಮಿಕ ಸಮುದಾಯ ಹಾಗೂ ರಾಜ್ಯದ ಅತ್ಯಂತ ಹಿಂದುಳಿದ ಭಾಗವಾದ ಚಿಂಚೋಳಿ ಭಾಗದ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದಿದ್ದಾರೆ.