ಜಿಂದಾಲ್​ಗೆ 3 ಸಾವಿರ ಎಕರೆ ಜಮೀನು ಮಾರಾಟ: ಪರಮೇಶ್ವರ ಹೇಳಿದ್ದೇನು…?

ಬೆಂಗಳೂರು

     ಬಳ್ಳಾರಿ ಬಳಿ ಜೆಎಸ್​ಡಬ್​ಲ್ಯೂ (ಜಿಂದಾಲ್​) ಸ್ಟೀಲ್​ ಕಂಪನಿಗೆ 3,667.31 ಎಕರೆ ಜಮೀನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಮಾರಾಟ ಮಾಡಲು ಮುಂದಾದಾಗ ನಾವು ವಿರೋಧ ಮಾಡಿದ್ದು ನಿಜ ಎಂದು ಗೃಹ ಸಚಿವ ಜಿ. ಪರಮೇಶ್ವರ್ ​ ಹೇಳಿದರು. ಬೆಂಗಳೂರಿನಲ್ಲಿ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾಗ ಮಾರಾಟ ಮಾಡುವುದಕ್ಕಿಂತ ಮುನ್ನ, ಜಿಂದಾಲ್​ ಕಂಪನಿಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳಿದ್ದೇವು. ಅದಕ್ಕೆ ಕಂಪನಿ ಸಮರ್ಪಕವಾಗಿ ಉತ್ತರ ನೀಡಿದೆ. ನ್ಯಾಯಾಲಯ ಕೂಡ ಆದೇಶ ಮಾಡಿದೆ. ಹೀಗಾಗಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

    ದಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಮಾಡುತ್ತೇವೆ. ಪ್ರಪಂಚದಾದ್ಯಂತ ಇರುವ ಉದ್ಯಮಿಗಳು ಇದರಲ್ಲಿ ಭಾಗಿಯಾಗುತ್ತಾರೆ. ರಾಜ್ಯದಲ್ಲಿ ಕಂಪನಿ ಆರಂಭಿಸಲು ಅವರಿಗೆ ನೀರು, ಜಾಗ, ವಿದ್ಯುತ್​ನಲ್ಲಿ ಒಂದಿಷ್ಟು ವಿನಾಯಿತಿ ನೀಡಲಾಗುತ್ತದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಭೂಮಿ ಕೊಡುತ್ತಾರೆ. ಹೀಗಾಗಿ ನಮ್ಮಲ್ಲಿಯೂ ಕೂಡ ಕೆಲವು ವಿನಾಯಿತಿ ನೀಡಬೇಕಾಗುತ್ತದೆ. ಈ ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಅಂದವು. ಹೀಗಾಗಿ ವಿನಾಯಿತಿ ನೀಡಬೇಕಾಗುತ್ತದೆ ಎಂದು ತಿಳಿಸಿದರು.

   ಆರು ಮಸೂದೆಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳಸಿದ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಇಂಥ ಬೆಳವಣಿಗೆ ನಡೆಯುತ್ತವೆ. ಒಂದೆರಡು ಮಸೂದೆಗಳ ಬಗ್ಗೆ ಕ್ಲಾರಿಫಿಕೇಷನ್ ಕೇಳಿದ್ದು ಬಿಟ್ಟರೆ, ಹೀಗೆ ಬಲ್ಕ್​ ಆಗಿ ವಾಪಸ್​ ಕಳಿಸಿರಲಿಲ್ಲ. ಸಾಮಾನ್ಯ ಮಸೂದೆಯನ್ನೂ ವಾಪಸ್ ಕಳಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

   ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರಿಂದ ಬುಲಾವ್​ ಬಂದಿದೆ, ಹೀಗಾಗಿ ನಾನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೋಗುತ್ತಿದ್ದೇವೆ. ಏನು ಚರ್ಚೆ ಆಗುತ್ತೆ ಅಂತ ಗೊತ್ತಿಲ್ಲ. ನನಗೆ ಇಲಾಖೆ ಕೆಲಸ ಕೂಡ ಇದೆ, ಮನೆಗಳಿಗೆ ಹಣ ಕೊಡಿ ಅಂತ ಕೇಂದ್ರ ಸರ್ಕಾರಕ್ಕೆ ಕೇಳಿದ್ವಿ, ಅದರ ಬಗ್ಗೆ ಮಾತನಾಡಲು ಹೋಗುತ್ತಿದ್ದೇನೆ. ಬಿಟ್ಟರೆ, ನಾವ್ಯಾರು ಮೂಡಾದ ವಿವರ ಕೊಡಲು ಹೋಗುತ್ತಿಲ್ಲ. ಆದರೆ ಹೈಕಮಾಂಡ್​ ಭೇಟಿ ಹಿಂದೆ ಸಿಎಂ ಮತ್ತು ಡಿಸಿಎಂ ಅಜೆಂಡಾ ಏನು ಅಂತ ಗೊತ್ತಿಲ್ಲ ಎಂದರು. 

   ಬಳ್ಳಾರಿ ಬಳಿ ಜೆಎಸ್‌ಡಬ್‌ಲ್ಯೂ ಸ್ಟೀಲ್ ಲಿಮಿಟೆಡ್ (ಜಿಂದಾಲ್) ಕಂಪನಿಗೆ 2006 -07ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮಂಜೂರು ಮಾಡಿದ್ದ 3,667.31 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಶುದ್ದ ಕ್ರಯ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

   ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಗೆ ಈ ಜಮೀನು ಶುದ್ದಕ್ರಯ ಮಾಡಿಕೊಡಲು ಯತ್ನಿಸುವುದು ಹಾಗೂ ಇದಕ್ಕೆ ಆಗ ವಿರೋಧ ಸ್ಥಾನದಲ್ಲಿದ್ದ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದ ಚೋದ್ಯ ನಡೆದಿತ್ತು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹಳೆ ನಿಲುವು ಬದಲಿಸಿ ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರ ಮಾಡಿದೆ.

Recent Articles

spot_img

Related Stories

Share via
Copy link
Powered by Social Snap