ತುಮಕೂರು:
ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ವಿ. ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಸಚಿವರಾದ ಡಾ. ಜಿ. ಪರಮೇಶ್ವರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ತುಮಕೂರು ಹಾಲು ಒಕ್ಕೂಟ ಲಿಮಿಟೆಡ್ (ತುಮುಲ್) ಅಧ್ಯಕ್ಷರಾಗಿ ತಮ್ಮ ಬೆಂಬಲಿಗರನ್ನು ನೇಮಿಸುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಕ್ಕೆ ಸೋಲಿನ ರುಚಿ ತೋರಿಸಿದ್ದಾರೆ.
ಶಿವಕುಮಾರ್ ಅವರ ಸಹೋದರ, ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿ.ಕೆ. ಸುರೇಶ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷರಾಗಲು ಆಕಾಂಕ್ಷಿಯಾಗಿದ್ದಾರೆ, ಹೀಗಾಗಿ, ಅವರು ತಮ್ಮ ಬೆಂಬಲಿಗರಿಗೆ ತುಮುಲ್ ಚುಕ್ಕಾಣಿ ನೀಡಲು ಬಯಸಿದ್ದರು.
ಆದರೆ ಪರಮೇಶ್ವರ್ ಮತ್ತು ರಾಜಣ್ಣ ಅವರು ಬುಧವಾರ ಪಾವಗಡ ಶಾಸಕ ಎಸ್ಸಿ (ಭೋವಿ) ಸಮುದಾಯದ ನಾಯಕ ಎಚ್.ವಿ. ವೆಂಕಟೇಶ್ ಅವರನ್ನು ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಸಿದ್ದರಾಮಯ್ಯ ಅವರ ಆಶೀರ್ವಾದದೊಂದಿಗೆ ಸರ್ಕಾರದಿಂದ ಅವರನ್ನು ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಯಿತು, ಇದೇ ಮೊದಲ ಬಾರಿಗೆ ತುಮುಲ್ ಇತಿಹಾಸದಲ್ಲಿ ನಾಮನಿರ್ದೇಶಿತ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವೆಂಕಟೇಶ ಡಿ.ಕೆ. ಶಿವಕುಮಾರ್ ಬಣಕ್ಕೆ ಬದಲಾಗಲು ಯೋಜಿಸಿದ್ದರು, ಆದರೆ ರಾಜಣ್ಣ ತುಮುಲ್ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಅವರನ್ನು ತಮ್ಮ ಬಣದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ತಮ್ಮ ಕುಟುಂಬ ಸದಸ್ಯ ಮತ್ತು ಕುಣಿಗಲ್ ಶಾಸಕ ಡಾ. ರಂಗನಾಥ್ ಅಥವಾ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಕೆ.ಪಿ. ಭಾರತಿದೇವಿ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಬಯಸಿದ್ದರು, ಇದರಿಂದ ಡಿ.ಕೆ ಸುರೇಶ್ ಅವರಿಗೆ ಕೆಎಂಎಫ್ ಅಧ್ಯಕ್ಷರ ಚುನಾವಣೆಯಲ್ಲಿ ಸಹಾಯ ಮಾಡುತ್ತದೆ ಎಂದು ಯೋಜಿಸಲಾಗಿತ್ತು. ಆದರೆ ಮೂಲಗಳ ಪ್ರಕಾರ, ತಮ್ಮ ಮಗ ಆರ್. ರವೀಂದ್ರ ಅವರನ್ನು ನಾಮನಿರ್ದೇಶಿತ ನಿರ್ದೇಶಕರನ್ನಾಗಿ ಮಾಡಬೇಕೆಂದು ಬಯಸಿದ್ದ ರಾಜಣ್ಣ, ಶಿವಕುಮಾರ್ ಅವರ ಪ್ಲಾನ್ ಉಲ್ಟಾ ಮಾಡಲು ತಮ್ಮ ವೈಯಕ್ತಿಕ ಆಕಾಂಕ್ಷೆಯನ್ನು ಬದಿಗಿಟ್ಟರು.
ಮಧುಗಿರಿಯ ಬಿ. ನಾಗೇಶ್ಬಾಬು ಮತ್ತು ತಿಪಟೂರಿನ ಎಂ.ಕೆ. ಪ್ರಕಾಶ್ ಸೇರಿದಂತೆ ಕಾಂಗ್ರೆಸ್ನಿಂದ ತುಮುಲ್ನ ಚುನಾಯಿತ ನಿರ್ದೇಶಕರು ಸಹ ಸ್ಪರ್ಧೆಯಲ್ಲಿದ್ದರು. ಶಾಸಕರನ್ನು ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವುದು ಮತ್ತು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ತಪ್ಪು ನಿದರ್ಶನವನ್ನು ಸ್ಥಾಪಿಸುತ್ತದೆ ಎಂದು ಅವರು ಭಾವಿಸಿದರು. ರಾಜಣ್ಣ ಅವರ ಸೂಚನೆಗಳನ್ನು ಅನುಸರಿಸಿ, ಒಂಬತ್ತು ಚುನಾಯಿತ ನಿರ್ದೇಶಕರು ವೆಂಕಟೇಶ ಅವರಿಗೆ ಮತ ಚಲಾಯಿಸಿದರು, ಬಿಜೆಪಿ ಅಭ್ಯರ್ಥಿ ಎಸ್.ಆರ್. ಗೌಡ ಅವರನ್ನು ಸೋಲಿಸಿದರು, ಅವರು ಐದು ಮತಗಳನ್ನು ಪಡೆದರು.
ಶ್ರೀನಿವಾಸ್ ಅವರ ಪತ್ನಿ ತುಮುಲ್ ಅಧ್ಯಕ್ಷರನ್ನಾಗುವುದನ್ನು ಕಾಂಗ್ರೆಸ್ ತಪ್ಪಿಸಿ ಅವರಿಗೆ ಪಕ್ಷವು ಮೋಸ ಮಾಡಿದೆ. ಒಕ್ಕಲಿಗರು ಮತ್ತು ಲಿಂಗಾಯತರನ್ನು ವಿರೋಧಿಸುತ್ತಿದೆ ಎಂದು ತುಮಕೂರು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಆರೋಪಿಸಿದ್ದಾರೆ.
