ಚಳ್ಳಕೆರೆ-
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕ್ಯಾದಿಗುಂಟೆ, ಪಿಲ್ಲಹಳ್ಳಿ, ಪಿ.ಗೌರಿಪುರ ಹಾಗೂ ಸಿದ್ದೇಶ್ವರದುರ್ಗ ಗ್ರಾಮಗಳಲ್ಲಿ 2016-17, 2017-18ಮ 2018-19ರ ವಸತಿ ಯೋಜನೆಯಡಿಯ ಉದ್ಯೋಗ ಖಾತರಿ ಯೋಜನೆ ಕೂಲಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಹಾಗೂ ಶೌಚಾಲಯದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಯ್ಯ, ಗ್ರಾಮದ ಮುಖಂಡರಾದ ಎಸ್.ಶಿವಲಿಂಗಪ್ಪ, ರಾಮಾಂಜನೇಯ, ಜಿ.ರವಿ, ಎನ್.ಕಾಂತರಾಜು, ಎಂ.ಹನುಮಂತರಾಯ, ರಾಜು, ಜಿ.ಎಂ.ಸತ್ಯನಾರಾಯಣ ಮುಂತಾದವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗಣಕಯಂತ್ರ ನಿರ್ವಾಹಕರು ನೈಜ್ಯ ಫಲಾನುಭವಿಗಳಿಗೆ ಹಣ ಪಾವತಿಸದೇ ಸ್ಥಳೀಯ ಬ್ಯಾಂಕ್ನಲ್ಲಿ ಬೇರೆ ಹೆಸರಿನ ಖಾತೆ ಸೃಷ್ಠಿಸಿ ಹಣ ಪಡೆದಿದ್ದಾರೆಂದು ಆರೋಪಿಸಲಾಗಿದೆ.
ಎನ್ಆರ್ಇಜಿ ಫಲಾನುಭವಿಗಳ ಕೂಲಿ ಹಣ ನೈಜ್ಯ ಕೂಲಿಕಾರರಿಗೆ ಜಮಾವಾಗದೆ ಸೃಷ್ಠಿಸಲ್ಪಟ್ಟ ಕೂಲಿದಾರರ ಲೆಕ್ಕಕ್ಕೆ ಜಮಾವಾಗಿರುತ್ತದೆ. ಶೌಚಾಲಯಗಳ ನಿರ್ವಹಣೆಯಲ್ಲೂ ಪಾರದರ್ಶಕತೆ ಇಲ್ಲ. ಕೇವಲ ಒಬ್ಬ ಸದಸ್ಯನಿಗೆ ಆರು ತಿಂಗಳ ಅವಧಿಯಲ್ಲಿ ಮೂರು ಬಾರಿ ಶೌಚಾಲಯದ ಹಣವನ್ನು ಪಾವತಿಸಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗಣಕಯಂತ್ರ ನಿರ್ವಾಹಕರು ಎಲ್ಲಾ ಅವ್ಯವಹಾರಗಳ ಮೂಲಸೂತ್ರದಾರಾಗಿದ್ಧಾರೆ ಅದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ಧಾರೆ.
